ಪಠ್ಯ ಪುಸ್ತಕ ವಿವಾದ ವಿಚಾರ; ಡಿ. ವಿ. ಸದಾನಂದಗೌಡ ಪ್ರತಿಕ್ರಿಯೆ

ಮಂಡ್ಯ ,ಮೇ 31: "ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನವಾಗಿದ್ದಲ್ಲಿ ಅದು ತಪ್ಪು. ಆದರೆ, ಅದರಲ್ಲಿ ತಪ್ಪಾಗಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ" ಎಂದು ಕೇಂದ್ರದ ಮಾಜಿ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದರು.

ಮಂಡ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನು ಸಮರ್ಥಿಸುವುದಿಲ್ಲ. ಅದರಲ್ಲಿ ತಪ್ಪಾಗಿಲ್ಲ ಎಂಬುದು ತಿಳಿದುಬಂದಿದೆ. ಹಿಂದೆ ಕುವೆಂಪು ಅವರದ್ದು ಏಳು ಪಠ್ಯಗಳನ್ನು ದಾಖಲಿಸಲಾಗಿತ್ತು. ಇಂದು 10 ಪಠ್ಯಗಳನ್ನು ಅಳವಡಿಸಲಾಗಿದೆ. ಕುವೆಂಪುರವರ 2 ಗೀತೆಗಳನ್ನು ನಾಡಗೀತೆಗಳನ್ನಾಗಿ ಮಾಡಿದ್ದು ನಾವು. ಸಿದ್ದರಾಮಯ್ಯ ಸರ್ಕಾರ ಸೇರಿದಂತೆ ಯಾವ ಸರ್ಕಾರಗಳೂ ಇದನ್ನು ಮಾಡಲಿಲ್ಲ" ಎಂದರು.

"ರಾಷ್ಟ್ರಕವಿ ಕುವೆಂಪುಗೆ ಅಪಮಾನವಾಗಿದ್ದಲ್ಲಿ ಅದು ತಪ್ಪು. ನಾವು ಗೌರವ ಕೊಟ್ಟವರಿಗೆ ಅಪಮಾನ ಮಾಡುವ ಕೆಲಸ ಮಾಡಿಲ್ಲ. ಒಂದು ವೇಳೆ ಅಂತಹ ಪ್ರಮಾದ ನಡೆದಿದ್ದರೆ ಆ ಬಗ್ಗೆ ರಾಜೀ ಮಾಡಿಕೊಳ್ಳು ಪ್ರಶ್ನೆಯೇ ಇಲ್ಲ" ಎಂದು ಡಿ. ವಿ. ಸದಾನಂದ ಗೌಡ ಸ್ಪಷ್ಟಪಡಿಸಿದರು.

"ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ಬಗ್ಗೆ ಪಠ್ಯದಲ್ಲಿ ಅಳವಡಿಸುವುದು ಸರಿ. ಆದರೆ ಟಿಪ್ಪು ಬಗ್ಗೆಯೇ ಮೂರೂವರೆ ಪುಟಗಳ ಪಠ್ಯ ಮಾತ್ರ ಇದ್ದರೆ ಸಾಕೆ?. ಬೇರೆ ಹೋರಾಟಗಾರರ ಬಗ್ಗೆ ಮಕ್ಕಳಿಗೆ ತಿಳಿಸುವ ಅಗತ್ಯವಿಲ್ಲವೇ?. ಹಿಂದೆ ಸ್ವಾತಂತ್ರ್ಯದ ಬಗ್ಗೆ ಇತಿಹಾಸ ತಿರುಚುವ ಕೆಲಸ ಮಾಡಲಾಗಿದೆ. ಅದನ್ನು ಸರಿ ಮಾಡುವ ಕೆಲಸ ಈಗ ನಡೆಯುತ್ತಿದೆ" ಎಂದು ಸದಾನಂದ ಗೌಡರು ಪಠ್ಯ ಪರಿಷ್ಕರಣೆ ಬಗ್ಗೆ ಮಾಜಿ ಸಚಿವರು ಸಮರ್ಥನೆ ನೀಡಿದರು.

ವಿಧಾನಪರಿಷತ್ ಅನ್ನು ಚಿಂತಕರ ಚಾವಡಿ

ವಿಧಾನಪರಿಷತ್ ಅನ್ನು ಚಿಂತಕರ ಚಾವಡಿ

"ಪುನರ್ವಸತಿ ಕೇಂದ್ರವಾಗಿ ಮಾರ್ಪಟ್ಟಿರುವ ವಿಧಾನಪರಿಷತ್ ಅನ್ನು ಚಿಂತಕರ ಚಾವಡಿಯನ್ನಾಗಿಯೇ ಮಾಡುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಆ ಕಾರಣದಿಂದಲೇ ಆಯಾ ಕ್ಷೇತ್ರದ ಸಾಧಕರನ್ನೇ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲು ಮುಂದಾಗಿದೆ. ವಿಧಾನ ಪರಿಷತ್ತಿಗೆ ಶಿಕ್ಷಣ, ಸಾಹಿತ್ಯ, ಬರಹಗಾರರು ಹೀಗೆ ಹಲವು ಕ್ಷೇತ್ರಗಳ ತಜ್ಞರು ಆಯ್ಕೆಯಾಗುವ ವಾಡಿಕೆ ಇತ್ತು. ಇತ್ತೀಚಿನ ದಿನಗಳಲ್ಲಿ ಅದು ಪುನರ್ವಸತಿ ಕೇಂದ್ರವಾಗಿದೆ. ಅದನ್ನು ಮತ್ತೆ ಸರಿದಾರಿಗೆ ತರುವ ಉದ್ದೇಶ ಬಿಜೆಪಿಯದ್ದಾಗಿದ್ದು, ಪದವೀಧರ ಕ್ಷೇತ್ರ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವವರನ್ನೇ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ" ಎಂದು ಸದಾನಂದ ಗೌಡರು ವಿವರಿಸಿದರು.

"ವಿಧಾನ ಪರಿಷತ್ತಿನಲ್ಲಿ ನಮ್ಮ ಪಕ್ಷಕ್ಕೆ ಬಹುಮತವಿಲ್ಲದ ಕಾರಣ ವಿಧಾನ ಸಭೆಯಲ್ಲಿ ಅನುಮೋದನೆ ಪಡೆಯುತ್ತಿದ್ದ ಬಿಲ್‌ಗಳು ಮೇಲ್ಮನೆಯಲ್ಲಿ ಅನೇಕ ರಾಜಕಾರಣದ ಕಾರಣಗಳಿಂದಾಗಿ ಬಿದ್ದು ಹೋಗುತ್ತಿದ್ದವು. ಈಗ ನಮ್ಮ ಸಂಖ್ಯೆ 6 ರಿಂದ 11ಕ್ಕೇರಿದೆ. ಇನ್ನೂ ನಮ್ಮ ಶಕ್ತಿ ಸಾಲದಾಗಿದ್ದು, ಹೆಚ್ಚಿನ ಶಕ್ತಿಯ ಅಗತ್ಯತೆ ಇದೆ" ಎಂದು ಸದಾನಂದ ಗೌಡರು ಹೇಳಿದರು.

ನಾವು ಗೆದ್ದೇ ಗೆಲ್ಲುತ್ತೇವೆ: ಸದಾನಂದಗೌಡ ವಿಶ್ವಾಸ

ನಾವು ಗೆದ್ದೇ ಗೆಲ್ಲುತ್ತೇವೆ: ಸದಾನಂದಗೌಡ ವಿಶ್ವಾಸ

"ರೈತ ಸಂಘ, ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ನೋಂದಣಿ ಮಾಡಿಸಿದ್ದಾರೆ. ನಮ್ಮ ಅಭ್ಯರ್ಥಿಗೆ ಪ್ರಬಲವಾದ ಅಭ್ಯರ್ಥಿಗಳು ಯಾರೂ ಇಲ್ಲ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ನೂರಾರು ನಿಲುವುಗಳು, ಅದೇ ರಾಜ್ಯ ಸರ್ಕಾರದ ನಿಲುವುಗಳು ನಮ್ಮ ಜೊತೆ ಇವೆ. ಶೇ. 60ರಷ್ಟು ನಮಗೆ ಮತಗಳು ಬರುತ್ತವೆ. ಉಳಿದ ಶೇ. 40ಮತಗಳನ್ನು ಮೂವರು ಅಭ್ಯರ್ಥಿಗಳು ಹಂಚಿಕೊಳ್ಳಲಿದ್ದಾರೆ. ಹೀಗಾಗಿ ನಮಗೆ ಯಾರೂ ಪ್ರತಿಸ್ಪರ್ಧಿಗಳಿಲ್ಲ ಎಂದು ಹೇಳಿದರು. ಪ್ರತಿ 25 ಮತದಾರರನ್ನು ಗಮನಿಸಲು ನಮ್ಮಲ್ಲಿ ಓರ್ವ ಘಟ ನಾಯಕರನ್ನು ನೇಮಿಸಲಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 2200 ಮಂದಿ ಘಟಕ ನಾಯಕರು ಕೆಲಸ ಮಾಡುತ್ತಿದ್ದಾರೆ. ಎಲ್ಲ ಘಟ ನಾಯಕರೂ ತಮಗೆ ವಹಿಸಿರುವ ಮತದಾರರನ್ನು ನಿತ್ಯ ಭೇಟಿ ಮಾಡಿ ಮನವಿ ಮಾಡುತ್ತಿದ್ದಾರೆ. ಇದರೊಂದಿಗೆ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರು, ಪ್ರಮುಖರು, ಕಾರ್ಯಕರ್ತರು ಟೊಂಕ ಕಟ್ಟಿ ನಿಂತಿದ್ದಾರೆ. ಹೀಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ" ಎಂದು ಸದಾನಂದ ಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸಭಾ ಟಿಕೆಟ್ ಹಂಚಿಕೆಯಲ್ಲೂ ಭಿನ್ನಮತ ಇಲ್ಲ

ರಾಜ್ಯ ಸಭಾ ಟಿಕೆಟ್ ಹಂಚಿಕೆಯಲ್ಲೂ ಭಿನ್ನಮತ ಇಲ್ಲ

"ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ರಾಜ್ಯಸಭಾ ಟಿಕೆಟ್ ಹಂಚಿಕೆಯಲ್ಲೂ ಭಿನ್ನಮತ ಇಲ್ಲ. ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ಕೊಟ್ಟಿದ್ದೇವೆ. ಎಲ್ಲರನ್ನೂ ಮುಟ್ಟುವ ಕೆಲಸ ನಮ್ಮ ಪಕ್ಷ ಮಾಡಿದೆ. ಗೆಲ್ಲುವ ಪಕ್ಷ. ಆದ ಕಾರಣ ಆಕಾಂಕ್ಷಿತರ ಪಟ್ಟಿಯೂ ಹೆಚ್ಚಿರುತ್ತದೆ. ಕೆಲವೊಮ್ಮೆ ಆಯ್ಕೆ ಸಂದರ್ಭದಲ್ಲಿ ಗೊಂದಲ ಸಹಜ. ಆದರೆ ವಾಸ್ತವವಾಗಿ ಎಲ್ಲರ ಸಹಮತ ಪಡೆದು ಕೋರ್ ಕಮಿಟಿಯಲ್ಲಿ ತೀರ್ಮಾನವಾಗುತ್ತದೆ" ಎಂದು ಜಗ್ಗೇಶ್ ಆಯ್ಕೆಯನ್ನು ಸಮರ್ಥಿಸಿಕೊಂಡರು. "ವಿಧಾನಸಭೆ ಚುನಾವಣೆಗೆ ಹೆಚ್ಚು ಸಕ್ರಿಯವಾಗಿರುವವರು ಬೇಕಾಗುತ್ತಾರೆ. ಈ ಚುನಾವಣೆಗೆ ಸಕ್ರಿಯ ಇಲ್ಲದಿದ್ದರೂ ಪರವಾಗಿಲ್ಲ. ಹಾಗಾಗಿ ಸಕ್ರಿಯವಿಲ್ಲದ ಜಗ್ಗೇಶ್ ಅವರನ್ನು ರಾಜ್ಯಸಭೆಗೆ ಸೂಕ್ತ ಅಭ್ಯರ್ಥಿ ಎಂದು ತೀರ್ಮಾನಿಸಲಾಗಿದೆ" ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಅತೃಪ್ತರು ನಮ್ಮನ್ನು ಬೆಂಬಲಿಸಬಹುದು

ಕಾಂಗ್ರೆಸ್ ಅತೃಪ್ತರು ನಮ್ಮನ್ನು ಬೆಂಬಲಿಸಬಹುದು

"ರಾಜ್ಯಸಭಾ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿಯನ್ನೂ ಕಣಕ್ಕಿಳಿಸಿದ್ದೇವೆ. ನಮ್ಮಲ್ಲಿ 31 ಮತಗಳಿವೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಅಸಮಾಧಾನ ಇರುವವರು ನಮ್ಮ ಪಕ್ಷದ ಅಭ್ಯರ್ಥಿಗೆ ಪ್ರಾಶಸ್ತ್ಯ ಮತ ನೀಡಬಹುದು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಜುಗಲ್‌ಬಂದಿ ಸಹ ವರ್ಕೌಟ್ ಆಗಬಹುದು. ಇವರಿಬ್ಬರಿಗೂ ಬುದ್ದಿ ಕಲಿಸುವ ಆಲೋಚನೆ ಆ ಪಕ್ಷದಲ್ಲಿ ನಡೆಯುತ್ತಿದೆ. ಅದು ನಮ್ಮ ಪಕ್ಷಕ್ಕೆ ವರದಾನವಾಗಿ ಬಿಜೆಪಿಗೆ ಹೆಚ್ಚಿನ ಮತಗಳು ಹರಿದುಬರಲಿವೆ" ಎಂದು ಸದಾನಂದ ಗೌಡರು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+