ಕೆಆರ್ಎಸ್ ಡ್ಯಾಂ ಮೇಲೆ ಸಂಸದೆ ಸುಮಲತಾ ಫೋಟೋ ಶೂಟ್, ಸಾರ್ವಜನಿಕರು ಕಿಡಿ
ಮಂಡ್ಯ, ಆಗಸ್ಟ್, 17: ಸ್ವಾತಂತ್ರೋತ್ಸವದ ಹಿಂದಿನ ದಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಂಸದೆ ಸುಮಲತಾ ಬಾಗೀನ ಅರ್ಪಿಸಿದ್ದರು. ಅಣೆಕಟ್ಟಿನ ಮೇಲೆ ಜನಸಾಮಾನ್ಯರಿಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.
ಆದರೆ, ಅಲ್ಲಿ ಸುಮಲತಾ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಜನರಿಗೊಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯನಾ? ಎಂದು ಪ್ರಶ್ನಿಸುವುದರ ಮೂಲಕ ಅಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದರು.
ಸಂಸದೆ ಸುಮಲತಾ ವಿರುದ್ಧ ಜನಾಕ್ರೋಶ; ಕೆಆರ್ಎಸ್ ಅಣೆಕಟ್ಟಿನ ಮೇಲೆ ಮಂಡ್ಯ ಸಂಸದೆ ಸುಮಲತಾ ಫೋಟೋ ಶೂಟ್ ಮಾಡಿಸಿಕೊಂಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ಜುಲೈ 21ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾವೇರಿ ಮಾತೆಗೆ ಬಾಗೀನ ಅರ್ಪಿಸಿದ್ದರು.
ಈ ವೇಳೆ ಸಂಸದೆ ಸುಮಲತಾ ಸಹ ಹಾಜರಿದ್ದರು. ಬಳಿಕ ಮತ್ತೆ ಸ್ವಾತಂತ್ರ್ಯೋತ್ಸವದ ಹಿಂದಿನ ದಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಮತ್ತೆ ತಮ್ಮ ಬೆಂಬಲಿಗರೊಂದಿಗೆ ಬಂದು ಬಾಗೀನ ಅರ್ಪಿಸಿದ್ದಾರೆ. ಅಲ್ಲದೇ ಅಣೆಕಟ್ಟಿನ ಮೇಲೆ ಫೋಟೋ ಶೂಟ್ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಣೆಕಟ್ಟಿನ ಮೇಲ್ಭಾಗಕ್ಕೆ ಹೋಗಲು ಸಾಮಾನ್ಯರು, ಬಡವರಿಗೆ ಅವಕಾಶವಿಲ್ಲ. ಆದರೆ ಸಂಸದೆ ಎಂಬ ಕಾರಣಕ್ಕೆ ಡ್ಯಾಂನ ಮೇಲ್ಭಾಗಕ್ಕೆ ತಮ್ಮ ಬೆಂಬಲಿಗರೊಂದಿಗೆ ಗುಂಪಾಗಿ ತೆರಳಿ ಪೋಟೋ ಶೂಟ್ ಮಾಡಿಕೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ದೇಶದ ಬಾವುಟ ಹಿಡಿದು ಫೋಟೋ ಶೂಟ್; ನಂತರ ದೇಶದ ಬಾವುಟ ಹಿಡಿದು ಫೋಟೋ ತೆಗೆಸಿಕೊಂಡಿದ್ದಾರೆ. ಇದರಲ್ಲಿಯೂ ತಪ್ಪು ಹುಡುಕಬಾರದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬೆಂಬಲಿಗರನ್ನು ಕರೆದುಕೊಂಡು ಹೋಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಸಾಮಾನ್ಯ ಜನರಿಗೆ ಈ ರೀತಿಯ ಅವಕಾಶವಿಲ್ಲ. ಹೀಗಿರುವಾಗ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷ ಅಣೆಕಟ್ಟಿನ ಪರಿಶೀಲನೆಗೆಂದು ಬಂದಿದ್ದ ವೇಳೆ ಸುಮಲತಾ ಅವರು ತಮ್ಮ ಫೇಸ್ಬುಕ್ ಲೈವ್ ಮಾಡಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ಬಾರಿಯೂ ತಮ್ಮ ಬೆಂಬಲಿಗರ ಗುಂಪುನ್ನು ಕರೆದುಕೊಂಡು ಹೋಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಸೇರಿದಂತೆ ಹಲವರು ಅಲ್ಲಿನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಲತಾ ವಿರುದ್ಧ ಕಾನುನು ಕ್ರಮಕ್ಕೆ ಒತ್ತಾಯ; ಕೃಷ್ಣರಾಜಸಾಗರ ಆಣೆಕಟ್ಟಿನ ಮೇಲೆ ಫೋಟೋ ಶೂಟ್ ಮಾಡಿಸಿರುವ ಸಂಸದೆ ಸುಮಲತಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕಾನೂನು ಎಲ್ಲರಿಗೂ ಒಂದೇ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದ್ದಾರೆ.













Click it and Unblock the Notifications