ಮಂಡ್ಯ: ಬಾರದ ಬಸ್, ನಿರ್ಜನ ಪ್ರದೇಶದಲ್ಲೇ ಶಾಲಾ ಮಕ್ಕಳ ಪಯಣ
ಮಂಡ್ಯ, ನವೆಂಬರ್ 5 : ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆಯಂತಹ ಘಟನೆಗಳು ಮರುಕಳಿಸುತ್ತಿದ್ದರೂ, ಸರಕಾರ ಮತ್ತು ಸ್ಥಳೀಯ ಆಡಳಿತಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ನಿರ್ಜನ ಪ್ರದೇಶದ ರಸ್ತೆಗಳಲ್ಲಿ ರಕ್ಕಸ ಗುಂಡಿಗಳಿಂದಾಗಿ ಬಸ್ಗಳು ಸೇರಿದಂತೆ ಇತರೆ ವಾಹನಗಳ ಸಂಚರಿಸಲಾಗದ ಪರಿಸ್ಥಿತಿಯೂ ಇದಕ್ಕೆ ಮತ್ತೊಂದು ಪರೋಕ್ಷ ಕಾರಣವಾಗಿದೆ.
ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಿಂದ ಜಕ್ಕನಹಳ್ಳಿಯವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ರಕ್ಕಸಗುಂಡಿಗಳಿರುವ ರಸ್ತೆಯಲ್ಲಿ ಸಂಚರಿಸಲಾಗದೆ ಬಸ್ಗಳು ಊರ ಒಳಗೆ ತೆರಳುತ್ತಿಲ್ಲ. ಇಂತಹ ರಸ್ತೆಗಳಲ್ಲಿ ಶಾಲಾ-ಕಾಲೇಜು ಮಕ್ಕಳು ನಡೆದುಕೊಂಡೇ ಹೋಗುವ ಸ್ಥಿತಿ ಎದುರಾಗಿದೆ.
ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿಚಾರ: ಪರಿಶೀಲನೆ ಹೊಣೆ NHAIಗೆ
ರಾಗಿಮುದ್ದನಹಳ್ಳಿಯಿಂದ ಜಕ್ಕನಹಳ್ಳಿವರೆಗಿನ ರಸ್ತೆ ನಿರ್ಜನ ಪ್ರದೇಶವಾಗಿದೆ. ಇಲ್ಲಿ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ನಡೆದುಕೊಂಡು ಬರುವುದಕ್ಕೆ ಹೆದರುತ್ತಿದ್ದಾರೆ. ಇತ್ತೀಚೆಗೆ ಕಲಬುರಗಿಯಲ್ಲಿ ಶೌಚಕ್ಕೆ ತೆರಳಿದ್ದ ಬಾಲಕಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದ ಕಾಮುಕನೊಬ್ಬ ಅತ್ಯಾಚಾರವೆಸಗಿ ಹತ್ಯೆಗೈದಿರುವುದು, ಕೋಚಿಂಗ್ ಸೆಂಟರ್ನಲ್ಲಿ ಶಿಕ್ಷಕನೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣಗಳಿಂದ ಪೋಷಕರು ಭಯಗೊಂಡಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಬಾಯಲ್ಲಿ ಹೇಳುವ ಸರಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಲಾ ಮಕ್ಕಳು ಒಬ್ಬಂಟಿಯಾಗಿ ಓಡಾಡದಂತೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದು ದುರಂತದ ಸಂಗತಿಯಾಗಿದೆ.
ವಿದ್ಯಾರ್ಥಿಗಳಿಗೆ ನಡೆದು ಹೋಗುವ ಅನಿವಾರ್ಯ
ಇದೇ ಜಾಗದಲ್ಲಿ ಈ ಹಿಂದೆ ಬಸ್ ಇಳಿದು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಕೊಲ್ಲಲಾಹಿತ್ತು. ಇಂತಹ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯರು ನಡೆದುಬರುವ ಸಮಯದಲ್ಲಿ ಅಪಾಯ ಎದುರಾಗುವ ಸಾಧ್ಯತೆಗಳಿದ್ದರೂ, ಆ ಸೂಕ್ಷ್ಮತೆಯನ್ನು ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಅರಿತಿಲ್ಲ. ಅಮಾನುಷ ಕೃತ್ಯಗಳು ನಡೆಯುವುದಕ್ಕೆ ಮುನ್ನ ಎಚ್ಚೆತ್ತುಕೊಂಡು ಅದನ್ನು ತಡೆಯುವುದಕ್ಕೆ ಯಾರೂ ಕ್ರಮ ವಹಿಸುವುದಿಲ್ಲ. ಅವರೆಲ್ಲರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಾದರೆ ಏನಾದರೂ ದುರಂತಗಳು ನಡೆಯಲೇಬೇಕು. ಅಲ್ಲಿಯವರೆಗೆ ಸಮಸ್ಯೆಯ ಗಂಭೀರತೆ ಅರ್ಥವಾಗುವುದೇ ಇಲ್ಲವೇ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.
ಲೋಕೋಪಯೋಗಿ ಇಲಾಖೆ-ಜಿ.ಪಂ ಇಂದ ಗೊಂದಲ
ಹಾಳಾಗಿರುವ ರಸ್ತೆಯನ್ನು ದುರಸ್ತಿಪಡಿಸುವಂತೆ ಊರಿನ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ರಾಗಿಮುದ್ದನಹಳ್ಳಿ ರಸ್ತೆ ಪೂರ್ಣ ಪ್ರಮಾಣದಲ್ಲಿ ಜಿಲ್ಲಾ ಪಂಚಾಯಿತಿಗೂ ಸೇರಿಲ್ಲ, ಇತ್ತ ಲೋಕೋಪಯೋಗಿ ಇಲಾಖೆಗೂ ಸೇರದೆ ಅತಂತ್ರ ಸ್ಥಿತಿಯಲ್ಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ರಾಗಿಮುದ್ದನಹಳ್ಳಿವರೆಗಿನ ಮೂರೂವರೆ ಕಿ.ಮೀ. ರಸ್ತೆ ಎಲ್ಲಿಂದ ಎಲ್ಲಿಯವರೆಗೆ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆ, ನಂತರದ ರಸ್ತೆ ಯಾರಿಗೆ ಸೇರುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯನ್ನೇ ನೀಡುತ್ತಿಲ್ಲ. ಇದೇ ಕಾರಣಕ್ಕೆ ರಸ್ತೆ ಅಭಿವೃದ್ಧಿಯಾಗುತ್ತಿಲ್ಲ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿಬರುತ್ತಿವೆ.
ರಸ್ತೆ ಸರಿಯಿಲ್ಲವೆಂದು ಬಾರದ ಬಸ್
ರಸ್ತೆ ಸಂಪೂರ್ಣವಾಗಿ ಹಳ್ಳಗಳಿಂದ ಕೂಡಿ, ಹಲವೆಡೆ ಕಲ್ಲುಗಳಿಂದ ತುಂಬಿಕೊಂಡಿದೆ. ಮಳೆ ಬಿದ್ದರಂತೂ ಕೆಸರುಗದ್ದೆಯ ಸ್ವರೂಪ ತಾಳುತ್ತಿದೆ. ಇದರ ನಡುವೆ ಶಾಲಾ ಮಕ್ಕಳು ಹರಸಾಹಸಪಟ್ಟುಕೊಂಡು ರಸ್ತೆಯಲ್ಲಿ ಸಾಗುತ್ತಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಹಿಂದೆ ಸಾರಿಗೆ ಬಸ್ಸು ರಾಗಿಮುದ್ದನಹಳ್ಳಿವರೆಗೆ ಬರುತ್ತಿತ್ತು. ಒಂದು ತಿಂಗಳು ಸಂಚರಿಸಿದ ಬಸ್ಸು ನಂತರ ರಸ್ತೆ ಸರಿಯಿಲ್ಲವೆಂಬ ಕಾರಣಕ್ಕೆ ಊರಿನ ಕಡೆ ಮುಖ ಮಾಡಲೇ ಇಲ್ಲ. ಇದರಿಂದ ಶಾಲಾ ಮಕ್ಕಳು ನಡೆದುಕೊಂಡೇ ವ್ಯಾಸಂಗಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಳಾಗಿರುವ ರಸ್ತೆಯಲ್ಲಿ ಕನಿಷ್ಠ ಗುಂಡಿ ಮುಚ್ಚುವ ಕಾಳಜಿಯೂ ಯಾರಲ್ಲೂ ಇಲ್ಲ. ಗ್ರಾಮ ಪಂಚಾಯಿತಿಯವರು ಈ ರಸ್ತೆ ನಮಗೆ ಬರುವುದಿಲ್ಲವೆಂತಲೂ, ಪಿಡಬ್ಲ್ಯುಡಿ ಇಲಾಖೆಯವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂತಲೂ, ಜಿಲ್ಲಾ ಪಂಚಾಯಿತಿಯವರೂ ಅದೇ ರಾಗ ಹಾಡುತ್ತಾ ರಾಗಿಮುದ್ದನಹಳ್ಳಿ ರಸ್ತೆ ಅಭಿವೃದ್ಧಿಯನ್ನೇ ಮರೆತು ಕುಳಿತಿದ್ದಾರೆ. ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ.
ಸ್ಥಳೀಯ ಜಮೀನು ಮಾಲೀಕರು ಒಪ್ಪಿದರೆ ದುರಸ್ಥಿ
ರಾಗಿಮುದ್ದನಹಳ್ಳಿ ರಸ್ತೆಯನ್ನು ನೋಡಿ ಬಂದಿದ್ದೇನೆ. ರಸ್ತೆಯ ವಿಚಾರದಲ್ಲಿ ಗೊಂದಲವಿದ್ದ ಕಾರಣದಿಂದ ಅಭಿವೃದ್ಧಿಯಾಗಿಲ್ಲ. ರಸ್ತೆ ಹಾದು ಹೋಗಿರುವ ಎರಡೂ ಕಡೆಯ ಜಮೀನಿನವರಿಂದ ರಸ್ತೆ ಮಾಡುವುದಕ್ಕೆ ಯಾವುದೇ ತಕರಾರು ಇಲ್ಲವೆಂದು ಒಪ್ಪಿಗೆ ಪತ್ರ ಬರೆಸಿಕೊಟ್ಟರೆ ಅದನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿಕೊಂಡು ಅಭಿವೃದ್ಧಿಪಡಿಸುವುದಕ್ಕೆ ಅವಕಾಶವಿದೆ ಎಂದು ಮಂಡ್ಯ ತಹಶೀಲ್ದಾರ್ ಕುಂಞ ಅಹಮದ್ ತಿಳಿಸಿದ್ದಾರೆ.