Hanuman Jayanti : ವಿಜೃಂಭಣೆಯ ಹನುಮಜಯಂತಿ, ಮಸೀದಿಗೆ ನುಗ್ಗಲು ಯತ್ನ, ಪೊಲೀಸರ ತಡೆ
ಮಂಡ್ಯ, ಡಿಸೆಂಬರ್ 04: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಭಾನುವಾರ ಹನುಮಜಯಂತಿ ಅಂಗವಾಗಿ ಹನುಮಮಾಲೆ ಧರಿಸಿದ ಸಾವಿರಾರು ಮಾಲಾಧಾರಿಗಳು ಹನುಮ ಸಂಕೀರ್ತನಾ ಶೋಭಾಯಾತ್ರೆಯನ್ನು ಸಡಗರ ಸಂಭ್ರಮದಿಂದ ನಡೆಸಿದರು. ಸಹಸ್ರಾರು ಸಂಖ್ಯೆಯಲ್ಲಿ ಜನ ಭಕ್ತಿ ಭಾವದಲ್ಲಿ ಮಿಂದರು.
ಪಟ್ಟಣದ ಹೊರವಲಯದಲ್ಲಿರುವ ಗಂಜಾಂನಕಾವೇರಿ ನದಿ ದಂಡೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಾ.ಭಾನುಪ್ರಕಾಶ್ಶರ್ಮಾ ವಿಶೇಷ ಪೂಜೆ ಸಲ್ಲಿಸಿ ಆಂಜನೇಸ್ವಾಮಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ 10.30ಕ್ಕೆ ಮೆರವಣಿಗೆಯ ಸಂಕೀರ್ತನಾಯಾತ್ರೆಗೆ ಚಾಲನೆ ದೊರೆಯಿತು.
ಮಾಲಾಧಾರಿಗಳು ಗಂಜಾಂನಿಂದ ಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯದವರೆಗೆ ಸುಮಾರು 6 ಕಿ.ಮೀ ಯಾತ್ರೆ ನಡೆಸಿದರು. ಗಂಜಾಂನ ಬೇಸಿಗೆ ಅರಮನೆ, ಆಸ್ಪತ್ರೆ, ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಪುರಾತನ ಕೋಟೆದ್ವಾರದಲ್ಲಿ ಯಾತ್ರೆಯು ಸಾಗಿ ಬಂತು. ಮಧ್ಯಾಹ್ನ ಸುಮಾರು 2.30ಕ್ಕೆ ಐತಿಹಾಸಿಕ ಮೂಡಲ ಬಾಗಿಲು ಆಂಜನೇಯ ಸ್ವಾಮಿದೇವಾಲಯ ತಲುಪಿ ಸಂಪನ್ನಗೊಂಡಿತು.
ಮೆರವಣಿಗೆಯ ಉದ್ದಕ್ಕೂ ಹಿಂದೂ ಹಾಗೂ ಹನುಮ ಮಾಮಾಲಾಧಾರಿಗಳು ಕೆಸರಿ ದ್ವಜ ಹಿಡಿದು, ಭಗವಾಧ್ವಜಗಳನ್ನು ಬೀಸಿ, ಜೈ ಶ್ರೀರಾಂ, ಶ್ರೀರಾಮ, ಭಜರಂಗಿ ಎಂಬ ಘೋಷಣೆಗಳು ಮೊಳಗಿಸಿದರು. ಮೆರವಣಿಗೆ ಉದ್ದಕ್ಕೂ ಭಜನೆ, ಕೀರ್ತನೆಗಳು ಮೊಳಗಿದವು. ಡೊಳ್ಳುಕುಣಿತ, ನಗಾರಿ, ಗೊಂಬೆಕುಣಿತ, ತಮಟೆ ಹಾಗೂ ಡೊಜೆ ವಾದ್ಯಗಳು ಕೇಳಿ ಬಂದವು. ಪುಟ್ಟ ಮಕ್ಕಳು ಹಾಗೂ ಕೆಲವರು ಶ್ರೀರಾಮ, ಲಕ್ಷ್ಮಣ, ಹನುಮಂತ ವೇಷ ತೊಟ್ಟು ಗಮನ ಸೆಳೆದರು.

ಅಲಂಕಾರಗೊಂಡಿದ್ದ ಪ್ರಮುಖ ಬೀದಿಗಳು
ಗಂಜಾಂನ್ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಯಾತ್ರೆಗೆ ಜನರು ಸಹ ತಮ್ಮತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಸ್ವಾಗತ ಕೋರಿದರು. ಹನುಮ ಮಾಲಾಧಾರಿಗಳಿಗೆ ಮಜ್ಜಿಗೆ, ಪಾಲಕ ನೀಡಿ ಸತ್ಕರಿಸಿದರು. ಹನುಮನ ಉತ್ಸವ ಮೂರ್ತಿಗೆ ಹಣ್ಣು, ಕಾಯಿ ಹೊಡೆದು ಪೂಜೆ ಸಲ್ಲಿಸಿದರು. ಗಂಜಾಂನ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದ ಸಂಕೀರ್ತ ನಾಯಾತ್ರೆ ವೇಳೆ, ಮುಸ್ಲೀಮರೊಬ್ಬರು ತಮ್ಮ ಮನೆ ಮೇಲೆ ಹಾಕಿದ್ದ ಹಸಿರು ಬಣ್ಣದ ಬಾವುಟ ಗಮನಿಸಿದ ಹಿಂದೂ ಕಾರ್ಯಕರ್ತ ತಕ್ಷಣ ಮನೆ ಮೇಲೇರಿ, ಹಸಿರು ಬಾವುಟಕಿತ್ತು ಹಾಕಿ ಕೇಸರಿ ಬಾವುಟ ಹಾಕಿ ಕ್ಷಣಾರ್ಧದಲ್ಲಿ ಕೆಳಗೆ ಹಾರಿದ ಘಟನೆ ನಡೆದಿದೆ.

ಮಸೀದಿಗೆ ನುಗ್ಗಲು ಯತ್ನ, ಪೊಲೀಸರ ತಡೆ
ಜಾಮಿಯಾ ಮಸೀದಿ ಬಳಿ ಸಂಕೀರ್ತನಾ ಯಾತ್ರೆ ಆಗಮಿಸುತ್ತಿದ್ದಂತೆ ಮಲಾಧಾರಿ ಯುವಕನೊಬ್ಬ ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ ಹತ್ತಿ ಮಸೀದಿ ಬಳಿ ತೆರಳಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆದು ಹಿಂದಕ್ಕೆ ತಳ್ಳಿದ ಘಟನೆ ನಡೆದಿದೆ. ಈ ಘಟನೆಯಿಂದ ಎಚ್ಚೆತ್ತ ಪೊಲೀಸರು ಸ್ಥಳದಲ್ಲಿ ಸೂಕ್ತ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪಟ್ಟಣ ಹಾಗೂ ಗಂಜಾಂನಲ್ಲಿ ನಿಗಾ ವಹಿಸಿದ್ದರು.

2 ಸಾವಿರ ಪೊಲೀಸರ ನಿಯೋಜನೆ
ಹನುಮ ಮಾಲಾಧಾರಿಗಳು ಯಾತ್ರೆ ತೆರಳಲಿರುವ ಪಟ್ಟಣ ಹಾಗೂ ಗಂಜಾಂನ ಪ್ರಮುಖ ಮಾರ್ಗ ಸೇರಿದಂತೆ ವಿವಿಧ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶವಾದಕಾರಣ 1 ಪೊಲೀಸ್ ವರಿಷ್ಠಾಧಿಕಾರಿ, 1 ಅಪರ ಪೊಲೀಸ್ ವರಿಷ್ಠಾಧಿಕಾರಿ, 6 ಡಿವೈಸ್ಪಿ, 20 ಸಿಪಿಐ, 40 ಪಿಎಸ್ಐ, 70 ಎಎಸ್ಐ, 750 ಮುಖ್ಯ ಪೇದೆ, 5 ಕೆಎಸ್ಆರ್ಪಿ ತುಕಡಿ, 8 ಡಿಎಆರ್, 2 ಕ್ಯೂಆರ್ಡಿ ಸೇರಿದಂತೆ ಸುಮಾರು 2 ಸಾವಿರ ಪೊಲೀಸ್ರನ್ನು ನಿಯೋಜನೆ ಜೊತೆಗೆ ಡ್ರೋಣ್ ಹಾಗೂ ಮೊಬೈಲ್ ಕಮಾಂಡೊ ಕಣ್ಗಾವಲುಗಳನ್ನು ಇರಿಸಲಾಗಿತ್ತು. ಜೊತೆಗೆ ಜಾಮಿಯಾ ಮಸೀದಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಮಸೀದಿ ಮುಂದಿ ರಾಮ, ಹನುಮ ಜೈಕಾರ
ಪಟ್ಟಣ ಪುರಸಭೆ ವೃತ್ತದ ಬಳಿ ಸಂಕೀರ್ತನಯಾತ್ರೆ ಬಂದ ವೇಳೆ ಹನುಮ ಮಾಲಾಧಾರಿಗಳು ಜಾಮೀಯ ಮಸೀದಿ ಮುಂದೆ ರಾಮ, ಹನುನಿಗೆ ಜೈಕಾರ ಕೂಗಿದರು. ಇದೇ ವೇಳೆ ಮಾಲಾದಾರಿಗಳು ಮಸೀದಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ನೂಕು ನುಗ್ಗಲು ಏರ್ಪಟ್ಟು, ಕೆಲ ಕಾಲ ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಮಂಡ್ಯ, ರಾಮನಗರ, ಮೈಸೂರು, ಮದ್ದೂರು, ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಶ್ರೀರಂಗಪಟ್ಟಣ ಸುತ್ತಮುತ್ತಲ ಗ್ರಾಮಗಳಿಂದ ಸುಮಾರು 15-20 ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಈ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಧಾರ್ಮಿಕ ವಿಧಿ ವಿಧಾನಗಳಂತೆ ಮಾಲಾಧಾರಿಗಳು ಮೂಡಲ ಬಾಗಿಲು ಆಂಜನೇಯಸ್ವಾಮಿದೇವಾಲಯದಲ್ಲಿತಮ್ಮ ಮಾಲೆಗಳನ್ನು ವಿಸರ್ಜಿಸಿದರು.












Click it and Unblock the Notifications