ಅಕ್ಟೋಬರ್ 9 ರಿಂದ 11ರ ತನಕ ಶ್ರೀರಂಗಪಟ್ಟಣ ದಸರಾ
ಮಂಡ್ಯ, ಸೆಪ್ಟೆಂಬರ್ 21; ಮೈಸೂರು ದಸರಾದಂತೆಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ದಸರಾ ಅಕ್ಟೋಬರ್ 9 ರಿಂದ 11ರ ತನಕ ನಡೆಯಲಿದೆ. ಅಕ್ಟೊಬರ್ 9 ರಂದು ಜಂಬೂಸವಾರಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ರೇಷ್ಮೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ನೇತೃತ್ವದಲ್ಲಿ 2021ರ ಶ್ರೀರಂಗಪಟ್ಟಣ ದಸರಾ ಸಿದ್ಧತೆ ಪೂರ್ವಭಾವಿ ಸಭೆ ನಡೆಯಿತು.
"ಅಕ್ಟೋಬರ್ 9, 10 ಮತ್ತು 11 ರಂದು ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ನಡೆಸಲು ನಿರ್ಧರಿಸಲಾಗಿದ್ದು, ಅರ್ಥಪೂರ್ಣ ದಸರಾ ಆಚರಣೆಗೆ ಕ್ರಮ ಕೈಗೊಳ್ಳಬೇಕು. ಅಕ್ಟೊಬರ್ 9 ರಂದು ಜಂಬೂಸವಾರಿ ನಡೆಯಲಿದ್ದು, ಅಂಬಾರಿ ಆನೆತರಲು ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆಯೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸಚಿವರು ತಿಳಿಸಿದರು.

ಶ್ರೀರಂಗಪಟ್ಟಣ ದಸರಾ ಅಂಗವಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆವತಿಯಿಂದ ಫಿಟ್ ಇಂಡಿಯಾ, ಕಬ್ಬಡ್ಡಿ, ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾತಂಡಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿಯನ್ನು ಆಯೋಜನೆ ಮಾಡಲಾಗುತ್ತದೆ.
ಶ್ರೀರಂಗಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಿಗೆ ದೀಪಾಲಂಕಾರದ ವ್ಯವಸ್ಥೆ ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಕೋವಿಡ್ ಸಂದರ್ಭದಲ್ಲಿ ಸೇವೆ ನೀಡಿದವರನ್ನು ಗುರುತಿಸಿ ಸನ್ಮಾನಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ದಸರಾ ಅಂಗವಾಗಿ ಪಾಂಡವಪುರದ ಕೆರೆತೊಣ್ಣುರು, ಕೆಆರ್ಎಸ್ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿ ಹಾಗೂ ಜಲಕ್ರೀಡೆಗಳನ್ನು ಆಯೋಜಿಸಿ. ದಸರಾ ಕಾರ್ಯಕ್ರಮ ಯಶಸ್ವಿಯಾಗುವ ನಿಟ್ಟಿನಲ್ಲಿ ವೇದಿಕೆ ನಿರ್ಮಾಣ, ವಿದ್ಯುತ್ ಸಂಪರ್ಕ ವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಂಡ್ಯ ದಸರಾ ಪ್ರಯುಕ್ತ ಪ್ರವಾಸಿ ತಾಣಗಳ ಶುಚಿತ್ವ, ಬನ್ನಿಮಂಟಪ ಜಂಬೂಸವಾರಿ ಹೊರಡುವ ರಾಜಬೀದಿಗಳ ಸ್ವಚ್ಛತೆ, ಶುಚಿತ್ವ ಕೈಗೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನವನ್ನು ಏರ್ಪಡಿಸಿ, ಜನರಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ತಪಾಸಣಾ ಶಿಬಿರ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ವಸ್ತು ಪ್ರದರ್ಶನ ಹಾಗೂ ಕೋವಿಡ್ 3 ನೇ ಅಲೆಯ ಬಗ್ಗೆ ಅರಿವು, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಜರ್, ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಚಿವರು ಸೂಚನೆ ಕೊಟ್ಟರು.
2021ರ ಶ್ರೀರಂಗಪಟ್ಟಣ ದಸರಾ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಸಂಸ್ಥಾಪಕರಾದ ಡಾ. ಭಾನುಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು.
ವಿಜಯನಗರ ಸಾಮ್ರಾಜ್ಯವಿದ್ದಾಗ ಹಂಪಿಯಲ್ಲಿ ನಡೆಯುತ್ತಿದ್ದ ದಸರಾ ಮಹೋತ್ಸವ ಕ್ರಿ. ಶ. 1610ರಿಂದ ಯದು ವಶಂದ ಒಡೆಯರ್ ಅರಸರ ಮೊದಲ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ಆರಂಭವಾಯಿತು. ಈಗ ವಿಶ್ವವಿಖ್ಯಾತವಾಗಿರುವ ಮೈಸೂರು ದಸರಾ ಮೊದಲು ಆರಂಭವಾಗಿದ್ದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ.
ಸುಮಾರು ಮೂರು ದಶಕಗಳ ಕಾಲ ಆಶ್ಚಿಜ ಮಾಸದಲ್ಲಿ ರಂಗನಾಥಸ್ವಾಮಿ ದೇವಾಲಯದ ಬಳಿಯ ಅರಮನೆಯ ಆವರಣದಲ್ಲಿ 10 ದಿನಗಳ ಕಾಲ ದಸರಾ ನಡೆಯುತ್ತಿತ್ತು. ಮಹಾರಾಜರೇ ಖುದ್ದಾಗಿ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ದಸರಾ ಸಂದರ್ಭದಲ್ಲಿ ಕವಿಗೋಷ್ಠಿ, ಜಾನಪರ ಆಟೋಟ, ಟಗರು, ಕಾಳಗ ಮುಂತಾದ ಚಟುವಟಿಕೆಗಳು ನಡೆಯುತ್ತಿದ್ದವು. ಈಗಲೂ ಮೂರು ದಿನ ಶ್ರೀರಂಗಪಟ್ಟಣ ದಸರಾ ನಡೆಯುತ್ತಿದೆ.












Click it and Unblock the Notifications