ಹಿಂದಿ ಹೇರಿಕೆ ಮಾಡಿದರೆ ದೇಶದಲ್ಲಿ ರಕ್ತಪಾತದ ಎಚ್ಚರಿಕೆ
ಮಂಡ್ಯ, ಫೆಬ್ರವರಿ 14; "ಕರ್ನಾಟಕದಲ್ಲಿ ಕನ್ನಡ ಭಾಷೆಯು ಸಾರ್ವಭೌಮವಾಗಿದ್ದು, ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಹೇರಿಕೆ ಮಾಡಿದರೆ ರಕ್ತಪಾತವೇ ನಡೆಯಲಿದೆ" ಎಂಬ ಎಚ್ಚರಿಕೆಯನ್ನು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.
ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಎಂ. ಎಲ್. ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 9ನೇ ವರ್ಷದ ಡಾ. ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
"ದೇಶದಲ್ಲಿ ಪಂಜಾಬ್, ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಹಿಂದಿ ಭಾಷೆಯಿಲ್ಲ. ಹೀಗಿರುವಾಗ ಹಿಂದಿ ಹೇಗೆ ರಾಷ್ಟ್ರ ಭಾಷೆಯಾಗುತ್ತದೆ?. ಆಯಾ ರಾಜ್ಯಗಳಲ್ಲಿನ ಅವರ ತಾಯಿ ಭಾಷೆಯೇ ಮುಖ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಉತ್ತರ ಭಾರತದ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಹೇರಿಕೆ ಮಾಡಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು.

"ಜನರಲ್ಲಿ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ಬುದ್ಧಿವಂತರಾಗುತ್ತಾರೆ, ಕನ್ನಡ ಮಾಧ್ಯಮದಲ್ಲಿ ಕಲಿತರೆ ದಡ್ಡರಾಗುತ್ತಾರೆ ಎಂಬ ಭಾವನೆ ಹೆಚ್ಚುತ್ತಿದೆ. ಇದು ಭಾಷೆ ಬೆಳವಣಿಗೆಗೆ ಅಡ್ಡಗಾಲಾಗಿದ್ದು ಅದನ್ನು ಬಿಡಬೇಕು. ಕರ್ನಾಟಕದಲ್ಲಿ ಕನ್ನಡವೇ ಅನಿವಾರ್ಯವಾಗಬೆಕು. ಆಗಮಾತ್ರ ಕನ್ನಡದ ಮೇಲೆ ಅಭಿಮಾನ ಹೆಚ್ಚುತ್ತದೆ" ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಎನ್. ಚಲುವರಾಯಸ್ವಮಿ ಮಾತನಾಡಿ, "ಕರ್ನಾಟಕ ಸಂಘ ಉತ್ತಮ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ಸಹಕಾರ ಹೆಚ್ಚಿದೆ. ಇವರಿಗೆ ಮೈಸೂರಿನ ಮೇಲಿರುವಷ್ಟೇ ಅಭಿಮಾನ ಮಂಡ್ಯದ ಮೇಲೆ ಅಷ್ಟೇಯೇ ಇದೆ ಹಾಗಾಗಿ ಸಮಾನವಾಗಿ ನೋಡುತ್ತಾರೆ" ಎಂದರು.
"ಶಿಕ್ಷಣದ ಕೊರತೆಯಿದ್ದ ಕಾಲದಲ್ಲಿ ಅಷ್ಟಾಗಿ ಅಪರಾಧ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಶಿಕ್ಷಣವಂತರಾದ ಮೇಲೆಯೇ ಅಪರಾಧ ಚಟುವಟಿಕೆಗಳು ಹೆಚ್ಚಿವೆ. ರಾಜಕೀಯದಲ್ಲಿ ಬಣ್ಣಬಣ್ಣದ ನಾಟಕವಾಡುವ ಹಾಗು ಮುಖವಾಡ ಹಾಕವ ಮಂದಿಗೆ ಮಾತ್ರ ಅವಕಾಶ ಸಿಗುತ್ತವೆ. ಅವರು ಸುದೀರ್ಘವಾಗಿ ಮುಂದುವರಿಯುತ್ತಾರೆ, ನಾವು ನೇರವಾಗಿ ಮಾತನಾಡಿ ನಿಷ್ಠೂರವಾದಿಗಳಾಗಿದ್ದೇವೆ" ಎಂದು ಹೇಳಿದರು.
ಮಂಡ್ಯ ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರಿಗೆ ಡಾ. ಹಾಮಾನ ಹಿರಿಯ ಪ್ರಶಸ್ತಿಯನ್ನು ಮತ್ತು ರಂಗ ನಿರ್ದೇಶಕ ಪ್ರಮೋದ್ ಶಿಗ್ಗಾಂವ್ ಅವರಿಗೆ ಡಾ.ಹಾಮಾನಾ ಯುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.












Click it and Unblock the Notifications