ಬೆಂಗಳೂರಿನ ರೌಡಿ ಭರತ್ ಹತ್ಯೆಗೈದ ಹಂತಕರ ಬಂಧನ
ಮಂಡ್ಯ, ಆಗಸ್ಟ್. 28 : ಬೆಂಗಳೂರಿನ ಭರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೇಲುಕೋಟೆಗೆ ತೆರಳುತ್ತಿದ್ದ ವೇಳೆ ನಡು ರಸ್ತೆಯಲ್ಲೇ ಭರತ್ ಹತ್ಯೆಯಾಗಿತ್ತು.
ಬಂಧಿತ ಆರೋಪಿಗಳನ್ನು ಮಾಗಡಿ ರಸ್ತೆಯ ಭುವನೇಶ್ವರಿ ನಗರದ ಕೆ.ಜಯರಾಮ, ರವಿ ಅಲಿಯಾಸ್ ಶೆಡ್ ರವಿ, ಜಾನಕಿರಾಮ ಅಲಿಯಾಸ್ ಜಾನಿ, ಎಂ.ಸತೀಶ ಅಲಿಯಾಸ್ ಮಚ್ಚಿ, ಕೆ.ಪಿ.ಅಗ್ರಹಾರದ ಶೇಖರ ಅಲಿಯಾಸ್ ಕುಳ್ಳ, ಮಹಾಲಕ್ಷ್ಮೀ ಲೇಔಟ್ನ ಎನ್.ಸತೀಶ ಅಲಿಯಾಸ್ ಕರಿಯ, ಬಸವೇಶ್ವರ ನಗರದ ಮಂಜುನಾಥ ಅಲಿಯಾಸ್ ಚೋಟು ಎಂದು ಗುರುತಿಸಲಾಗಿದೆ.

ಭರತ್ ರೌಡಿಯಾಗಿದ್ದು ಈತನಿಗೂ ಜಯರಾಮನಿಗೂ ವ್ಯವಹಾರದಲ್ಲಿ ವೈಷಮ್ಯವಿತ್ತು. ಹೀಗಾಗಿ ಭರತ್ನನ್ನು ಮುಗಿಸಲು ಜಯರಾಮ ಸ್ಕೆಚ್ ಹಾಕಿದ್ದನು. ಈ ನಡುವೆ ಭರತ್ ಆ.23ರಂದು ಮೇಲುಕೋಟೆಗೆ ತೆರಳಲು ಸ್ನೇಹಿತರಾದ ಆರ್.ಮುನಿರಾಜು, ಮಂಜುನಾಥ ಹಾಗೂ ಹರ್ಷಿತ್ನೊಂದಿಗೆ ಎರಡು ಬೈಕ್ಗಳಲ್ಲಿ ಹೊರಟಿದ್ದರು.
ಈ ವಿಷಯ ತಿಳಿದ ಜಯರಾಮ ತನ್ನ ಸಹಚರರಾದ ರವಿ, ಜಾನಕಿರಾಮ, ಎಂ.ಸತೀಶ, ಶೇಖರ, ಎನ್.ಸತೀಶ, ಮಂಜುನಾಥ ಅವರೊಂದಿಗೆ ಎರಡು ಕಾರುಗಳಲ್ಲಿ ಹಿಂಬಾಲಿಸಿದ್ದರು. ಭರತ್ ಮತ್ತು ಸ್ನೇಹಿತರು ಬೆಂಗಳೂರಿನಿಂದ ನೆಲಮಂಗಲ, ನೆಲ್ಲೀಗೆರೆ ಕ್ರಾಸ್, ನಾಗಮಂಗಲ ಮಾರ್ಗವಾಗಿ ಮೇಲುಕೋಟೆಗೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಅಂಚೆಚಿಟ್ಟನಹಳ್ಳಿ ಜೋಡಿ ಮಾರ್ಗದಲ್ಲಿ ಬರುತ್ತಿದ್ದರು.
ಈ ವೇಳೆ ಅವರನ್ನು ಹಿಂಬಾಲಿಸಿದ ಜಯರಾಮ ಮತ್ತು ಸಹಚರರು ಬೈಕ್ಗೆ ಡಿಕ್ಕಿ ಹೊಡೆದು ಆತ ನೆಲಕ್ಕೆ ಬೀಳುತ್ತಿದ್ದಂತೆಯೇ ಲಾಂಗ್ ಹಾಗೂ ಡ್ರ್ಯಾಗನ್ನಿಂದ ದಾಳಿ ಮಾಡಿ ಹತ್ಯೆಗೈದು ಪರಾರಿಯಾಗಿದ್ದರು. ಈ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಂತಕರನ್ನು ಬಂಧಿಸಲು ಎಎಸ್ಪಿ ಲಾವಣ್ಯ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಡಿ.ಪಿ.ಧನರಾಜ್, ಪಿಎಸ್ಐ ಬಿ.ಚಿದಾನಂದ, ಕೆ.ಎನ್.ಚಂದ್ರಶೇಖರ್, ಪ್ರಮೋದ್ಕುಮಾರ್ ತಂಡ ರಚನೆ ಮಾಡಲಾಗಿತ್ತು. ಹಂತಕರ ಜಾಡು ಹಿಡಿದು ತೆರಳಿದ ತನಿಖಾ ತಂಡ ಕೊಲೆಯಾದ ಮೂರೇ ದಿನಕ್ಕೆ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೌಡಿ ಭರತ್ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಒಂದು ಡಕಾಯಿತಿ, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಹಾಗೂ ಹಲ್ಲೆ ಸಂಬಂಧ ನಾಲ್ಕು ಪ್ರಕರಣಗಳು ದಾಖಲಾಗಿವೆ.












Click it and Unblock the Notifications