ಮಂಡ್ಯದಲ್ಲಿ ರಮ್ಯಾ ಸ್ಪರ್ಧಿಸುತ್ತಾರಾ? ಇಲ್ವಾ? ಓವರ್ ಟು ರಂಜಿತಾ
Recommended Video
ಮಂಡ್ಯ, ಸೆಪ್ಟೆಂಬರ್ 15: ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಅವರನ್ನು ಮತ್ತೊಮ್ಮೆ ತಮ್ಮ ಕ್ಷೇತ್ರದಿಂದ ಸಂಸದೆಯಾಗಿ ನೋಡಲು ಅಲ್ಲಿನ ಜನತೆ ಬಯಸಿದ್ದಾರೋ ಇಲ್ಲವೋ, ಆದರೆ, ಅವರ ತಾಯಿ ರಂಜಿತಾ ಮಾತ್ರ ಮಂಡ್ಯ ಕ್ಷೇತ್ರವನ್ನು ತಮ್ಮ ಕುಟುಂಬದವರು ಉಳಿಸಿಕೊಳ್ಳಬೇಕು ಎಂಬ ಬಯಕೆ ಹೊಂದಿದ್ದಾರೆ.
ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಸದ್ಯ ಎಐಸಿಸಿಯಿಂದ ಉನ್ನತ ಸ್ಥಾನ ಪಡೆದು, ಸಾಮಾಜಿಕ ಜಾಲ ತಾಣಗಳ ಉಸ್ತುವಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ, ಕಾರ್ಯಕರ್ತರಿಗೆ ಅವರನ್ನು ಮತ್ತೊಮ್ಮೆ ಸಂಸದರಾಗಿ ಕಾಣುವ ಬಯಕೆ ಇದೆ ಎಂದು ರಮ್ಯಾ ಅವರ ತಾಯಿ ರಂಜಿತಾ ಅವರು ಹೇಳುತ್ತಾ ಬಂದಿದ್ದಾರೆ.
ರಮ್ಯಾ-ಅಂಬರೀಶ್ ಜಗಳದಲಿ ಮಂಡ್ಯ ಕಾಂಗ್ರೆಸ್ ಮಟಾಷ್!
ಈಗ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ರಮ್ಯಾ ಸ್ಪರ್ಧೆ ವಿಚಾರವಾಗಿ ಎದ್ದಿದ್ದ ಕುತೂಹಲದ ಪ್ರಶ್ನೆಗೆ ರಮ್ಯಾ ಅವರ ತಾಯಿ ರಂಜಿತಾ ಅವರು ಸ್ಪಷ್ಟನೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸುತ್ತಿಲ್ಲ ಎಂದು ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಪರ್ಧೆಯಿದೆ. ಆದರೆ, ಕಾಂಗ್ರೆಸ್ ತನ್ನ ಕ್ಷೇತ್ರ ಮತ್ತೆ ಪಡೆಯಲಿದೆ. ರಮ್ಯಾ ಮಂಡ್ಯ ಜನರ ಸೇವೆ ಮಾಡುತ್ತಾರೆ. ಇಲ್ಲಿನ ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ರಂಜಿತಾ ಅವರು ಹೇಳಿದ್ದರು.
ಇದು ಪಕ್ಷದ ನಿರ್ಧಾರ, ನಾವು ಅದಕ್ಕೆ ಬದ್ಧ
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಸೀಟು ಹಂಚಿಕೆಯ ಬಗ್ಗೆ ಪ್ರಾಥಮಿಕ ಚರ್ಚೆ ಮಾಡಿದ್ದಾರೆ ಎಂಬ ಸುದ್ದಿ ಇದೆ. ಹಳೆ ಮೈಸೂರು ಭಾಗದ ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿದ್ದು, ಕಾಂಗ್ರೆಸ್ 18 ಜೆಡಿಎಸ್ 10 ಸೀಟುಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಇನ್ನು ಮಂಡ್ಯದಲ್ಲಿ ಕಾಂಗ್ರೆಸ್ ಬದಲಿಗೆ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಯಲಿ ಎಂದು ಕಾಂಗ್ರೆಸ್ ವರಿಷ್ಠರು ಸೂಚಿಸಿದ್ದಾರೆ. ಹೀಗಾಗಿ, ರಮ್ಯಾ ಅವರು ಸ್ಪರ್ಧಿಸುತ್ತಿಲ್ಲ ಎಂದು ಅವರ ತಾಯಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ನಿಂದ ಯಾರು ಸ್ಪರ್ಧೆ?
ಮಂಡ್ಯ ಸಂಸದ ಸಿಎಸ್ ಪುಟ್ಟರಾಜು ಅವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. 2019ರ ಸಾರ್ವತ್ರಿಕ ಚುನಾವಣೆ ಮುಂದಿಟ್ಟುಕೊಂಡು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ಮುಂದಾಗಿದೆ.
ಲೋಕಸಭೆ ಚುನಾವಣೆಗೆ ಲಕ್ಷ್ಮಿ ಅಶ್ವಿನ್ ಗೌಡ ಅವರು ಜೆಡಿಎಸ್ನಿಂದ ಸ್ಪರ್ಧಿಸುವ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಚಿವ ಎಸ್.ಡಿ. ಜಯರಾಂ ಅವರ ಮಗ ಅಶೋಕ್ ಜಯರಾಂ ಅವರ ಹೆಸರೂ ಇದೆ. ಸ್ವತಃ ದೇವೇಗೌಡ ಅವರೇ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಇನ್ನೂ ಜೀವಂತವಿದೆ.
ನಾನು ಕೂಡಾ ಆಕಾಂಕ್ಷಿಯಾಗಿದ್ದೆ : ರಂಜಿತಾ
ಮಂಡ್ಯದ ವಿಧಾನಸಭಾ ಕ್ಷೇತ್ರ ಚುನಾವಣೆ, ಲೋಕಸಭಾ ಚುನಾವಣೆ ಇರಲಿ ಸ್ಪರ್ಧಿಸುವ ಅವಕಾಶ ಸಿಕ್ಕರೆ ನಾನು ಸ್ಪರ್ಧಿಸುತ್ತಿದ್ದೆ. ರಮ್ಯಾ ಅವರು ದೆಹಲಿ ರಾಜಕೀಯದಲ್ಲಿ ನಿರತರಾಗಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ತಯಾರಿ ನಡೆಯುತ್ತಿದೆ. ಇದಕ್ಕಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ಇನ್ನಷ್ಟು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಹಾಗಾಗಿ, ಮಂಡ್ಯ ಕಡೆ ಬರಲು ಆಗುತ್ತಿಲ್ಲ. ರಮ್ಯಾ ಬದಲಿಗೆ ನೀವೆ ಇಲ್ಲಿಂದ ಸ್ಪರ್ಧಿಸಿ ಎಂದು ಕಾರ್ಯಕರ್ತರು ಕೇಳಿಕೊಂಡಿದ್ದಾರೆ. ಆದ್ರೆ, ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಜನಸೇವೆ ನಮ್ಮ ಗುರಿ ಎಂದು ರಂಜಿತಾ ಹೇಳಿದ್ದಾರೆ.
ಮಂಡ್ಯ ಈಗ ಸಂಪೂರ್ಣ ಜೆಡಿಎಸ್ ಮಯ
ಮಂಡ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲೆ ಕಳೆದುಕೊಂಡಿದೆ. ಅಲ್ಲಿನ ಏಳೂ ಕ್ಷೇತ್ರಗಳು ಜೆಡಿಎಸ್ ತೆಕ್ಕೆಯಲ್ಲಿದೆ. ಲೋಕಸಭೆ ಚುನಾವಣೆಗೂ ಕಾಂಗ್ರೆಸ್ಗೆ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಮೇಲ್ನೋಟಕ್ಕೆ ಅಂಬರೀಷ್ ಹಾಗೂ ರಮ್ಯಾ ನಡುವಿನ ತಿಕ್ಕಾಟವೆ ಇದಕ್ಕೆಲ್ಲ ಕಾರಣ ಎನ್ನಬಹುದಾದರೂ, ಮಂಡ್ಯದಲ್ಲಿ ಕಾಂಗ್ರೆಸ್ ದುಃಸ್ಥಿತಿ ಅನೇಕ ಕಾರಣಗಳಿವೆ. ಆಂತರಿಕ ಜಗಳ, ಪ್ರತಿಷ್ಠೆ, ಜನರ ವಿಶ್ವಾಸ ಗಳಿಸುವಲ್ಲಿ ವಿಫಲ, ಮತದಾರರ ಬಗ್ಗೆ ಜನ ಪ್ರತಿನಿಧಿಗಳ ನಿರ್ಲಕ್ಷ್ಯ, ಹೀಗೆ ಕಾಂಗ್ರೆಸ್ ನಾಯಕರು ತಾವು ಮಾಡಿಕೊಂಡ ತಪ್ಪಿಗೆ ತಮ್ಮನ್ನು ತಾವೇ ಶಪಿಸಿಕೊಳ್ಳುವಂತಾಗಿದೆ. ಇಲ್ಲಿಂದ ಕಾಂಗ್ರೆಸ್ ನಾಯಕರೊಬ್ಬರು ಭರ್ಜರಿಯಾಗಿ ಗೆದ್ದು ಅಧಿಕಾರ ಹಿಡಿಯುವ ತನಕ ಕಾಂಗ್ರೆಸ್ ಗೆ ಪುನಶ್ಚೇತನ ಸಿಗುವುದು ಕಷ್ಟ