ಮಂಡ್ಯದಲ್ಲಿ ಅಂಬರೀಶ್, ರಮ್ಯಾ ಮುಖಾಮುಖಿ ಸ್ಪರ್ಧೆ?
Recommended Video
ಮಂಡ್ಯ, ನವೆಂಬರ್ 14 : ಮಂಡ್ಯ ಜಿಲ್ಲೆಯ ರಾಜಕಾರಣ ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯನ್ನು ಕೈವಶ ಮಾಡಿಕೊಳ್ಳಲು ಜೆಡಿಎಸ್ ದಾಳ ಉರುಳಿಸುತ್ತಿದ್ದು, ಕಾಂಗ್ರೆಸ್ ಆಂತರಿಕ ಕಚ್ಚಾಟವೇ ಪಕ್ಷದ ಹಿನ್ನಡೆಗೆ ಕಾರಣವಾಗುವ ಸಾಧ್ಯತೆ ಇದೆ.
ಮಂಡ್ಯ ಕಾಂಗ್ರೆಸ್ ಶೀತಲ ಸಮರ ತಪ್ಪಿಸಲು ರಮ್ಯಾ ಕ್ಷೇತ್ರ ಬದಲಾವಣೆ?
ಮಾಜಿ ಸಚಿವ ಅಂಬರೀಶ್, ಮಾಜಿ ಸಂಸದೆ ರಮ್ಯಾ ನಡುವಿನ ಭಿನ್ನಮತ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಈಗ ಚುನಾವಣೆ ಸಮೀಪವಾಗುತ್ತಿದ್ದು, ಜಿಲ್ಲೆಯಲ್ಲಿ ಪಕ್ಷವನ್ನು ಯಾರು ಮುನ್ನೆಡೆಸುತ್ತಾರೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮಂಡ್ಯದಲ್ಲಿ ಹೊಸ ಮನೆ ಖರೀದಿ ಮಾಡಿದ ರಮ್ಯಾ
ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಚುನಾವಣೆಯಲ್ಲಿ ಗೆದ್ದ ಬಳಿಕ ಕ್ಷೇತ್ರದಿಂದ ದೂರವಾಗಿದ್ದಾರೆ. ಮಾಜಿ ಸಂಸದೆ ರಮ್ಯಾ ಮೇಲೆಯೂ ಇದೇ ಆರೋಪಗಳು ಕೇಳಿಬರುತ್ತಿವೆ. 2014ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಕ್ಷೇತ್ರದಿಂದ ಬಹುದೂರ ಸಾಗಿದ್ದಾರೆ.
ಮಂಡ್ಯ ರಾಜಕೀಯ : ರವೀಂದ್ರ ಶ್ರೀಕಂಠಯ್ಯಗೆ ಆಹ್ವಾನ ನೀಡಿದ ಎಚ್ಡಿಕೆ!
2018ರ ಚುನಾವಣೆಯಲ್ಲಿ ರಮ್ಯಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅಂಬರೀಶ್ ಜೆಡಿಎಸ್ ಸೇರಲಿದ್ದಾರೆ ಎಂಬ ಗುಸು-ಗುಸು ಹರಿದಾಡುತ್ತಿದೆ. ಅತ್ತ ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯಸ್ವಾಮಿ ಕಾಂಗ್ರೆಸ್ ಸೇರಿ ಜಿಲ್ಲೆಯ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ...
ಅಂಬರೀಶ್ ಜೆಡಿಎಸ್ ಸೇರ್ಪಡೆ?
ಮಂಡ್ಯ ಕ್ಷೇತ್ರದ ಶಾಸಕ, ಮಾಜಿ ವಸತಿ ಸಚಿವ ಅಂಬರೀಶ್ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಬೆಂಬಲಿಗರು ಪಕ್ಷ ಸೇರುವಂತೆ ಒತ್ತಡ ಹಾಕುತ್ತಿದ್ದು, ಅಮರಾವತಿ ಚಂದ್ರಶೇಖರ್ ಅವರ ಮನೆಯಲ್ಲಿ ರಹಸ್ಯ ಸಭೆ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ಅಂಬರೀಶ್ ದೂರವುಳಿದಿದ್ದಾರೆ.
ರಮ್ಯಾ, ಅಂಬರೀಶ್ ಮುಖಾಮುಖಿ?
ಮಂಡ್ಯ ರಾಜಕೀಯ ವಲಯದ ಸುದ್ದಿಗಳ ಪ್ರಕಾರ ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಮಂಡ್ಯ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅಂಬರೀಶ್ ಅವರು ಜೆಡಿಎಸ್ ಸೇರಿದರೆ ಮಂಡ್ಯ ಕ್ಷೇತ್ರದಲ್ಲಿ ರಮ್ಯಾ, ಅಂಬರೀಶ್ ಮುಖಾಮುಖಿಯಾಗಿ ಸ್ಪರ್ಧಿಸಲಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ದಾಳ
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ದಾಳ ಉರುಳಿಸಿದ್ದು, ಬಂಡಾಯ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ಟಾಂಗ್ ನೀಡಿದ್ದಾರೆ. ರವೀಂದ್ರ ಶ್ರೀಕಂಠಯ್ಯ ಅವರ ಮನೆಗೆ ಭೇಟಿ ಕೊಟ್ಟು, ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ರವೀಂದ್ರ ಶ್ರೀಕಂಠಯ್ಯ ಅವರು ಜೆಡಿಎಸ್ ಸೇರುವುದು ಬಹುತೇಕ ಖಚಿತವಾಗಿದೆ.
ನಾಗಮಂಗಲದಲ್ಲಿ ಕೆ.ಸುರೇಶ್ ಗೌಡ
ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಕೆ.ಸುರೇಶ್ ಗೌಡ ಜೆಡಿಎಸ್ ಸೇರಿದ್ದಾರೆ. ಚೆಲುವರಾಯಸ್ವಾಮಿ ಕಾಂಗ್ರೆಸ್ ಸೇರಿ ಚುನಾವಣೆಗೆ ಸ್ಪರ್ಧಿಸಿದರೆ, ಅವರ ವಿರುದ್ಧ ಅಭ್ಯರ್ಥಿ ಸಿದ್ಧವಾಗಿದ್ದಾರೆ.
ಜಿಲ್ಲೆಯ ಹಿಡಿತ ಯಾರ ಕೈಗೆ?
ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಅಂಬರೀಶ್, ರಮ್ಯಾ ಜಟಾಪಟಿಯಿಂದಾಗಿ ಕಾಂಗ್ರೆಸ್ ಕೈತಪ್ಪುತ್ತಿರುವ ಜಿಲ್ಲೆಯ ರಾಜಕಾರಣವನ್ನು ಚೆಲುವರಾಯಸ್ವಾಮಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಜೆಡಿಎಸ್ ಶಕ್ತಿ ಹೆಚ್ಚುತ್ತಿದೆ
ಕಾಂಗ್ರೆಸ್ ಪಕ್ಷದಲ್ಲಿದ್ದ ಕೆ.ಸುರೇಶ್ ಗೌಡ ಮತ್ತು ಎಲ್.ಆರ್.ಶಿವರಾಮೇಗೌಡ ಜೆಡಿಎಸ್ ಸೇರಿದ್ದಾರೆ. ಮಂಡ್ಯ ಸಂಸದ ಸ್ಥಾನವೂ ಜೆಡಿಎಸ್ ಕೈಯಲ್ಲಿ ಇದೆ. ದಿನದಿಂದ ದಿನಕ್ಕೆ ಜೆಡಿಎಸ್ ಜಿಲ್ಲೆಯಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಚನ್ನಪಟ್ಟಣದಿಂದ ಬಂದ್ರು ಸಿಪಿ?
ಈಗಾಗಲೇ ಬಿಜೆಪಿ ಸೇರಿರುವ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರು ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂಬುದು ಹೊಸ ಸುದ್ದಿ. ಬಿಜೆಪಿಯೂ ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯವಾದರೆ ಮಂಡ್ಯ ಜಿಲ್ಲೆಯ ಈ ಬಾರಿಯ ಚುನಾವಣೆ ಕುತೂಹಲ ಮೂಡಿಸಲಿದೆ.