ಮಂಡ್ಯ: ಪಂಪ್ಸೆಟ್ಗೆ ಮೀಟರ್ ಅಳವಡಿಸಲು ಬಂದರೆ ಸಿಎಂ ಕುರ್ಚಿ ಮುರಿಯುತ್ತೇವೆ: ರೈತಸಂಘ
ಮಂಡ್ಯ, ಸೆಪ್ಟೆಂಬರ್ 19 : ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲು ಬಂದರೆ ನಾವು ಮುಖ್ಯಮಂತ್ರಿಗಳ ಕುರ್ಚಿ ಕಾಲನ್ನು ಮುರಿಯಬೇಕಾಗುತ್ತದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಗುಡುಗಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕಳೆದ ಜುಲೈ 11ರಂದು ನಾವು ಪ್ರತಿಭಟನೆ ನಡೆಸಿದ ವೇಳೆ ಮಾತುಕತೆಗೆ ಬನ್ನಿ, ನಿಮ್ಮೆಲ್ಲಾ ಸಮಸ್ಯೆಗಳನ್ನೂ ಬಗೆಹರಿಸುತ್ತೇನೆ ಎಂದು ವಾರದ ಗಡುವು ನೀಡಿದ್ದರು. ನಾವು ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಾಗ ಆತ್ಮೀಯತೆಯಿಂದ ಸ್ಪಂದಿಸಿ ಈಗ ಒಂದೂವರೆ ತಿಂಗಳಾದರೂ, ನಮ್ಮ ಬೇಡಿಕೆಗಳು ಈಡೇರಿಲ್ಲ. ಇದು ಡಬಲ್ ಇಂಜಿನ್ ಸರಕಾರದ ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಮಂಡ್ಯ: ಹೆಜ್ಜಾರ್ಲೆ ಪಕ್ಷಿಗೆ ಜಿಪಿಎಸ್ ಅಳವಡಿಸಿದ ವಿಜ್ಞಾನಿಗಳು; ದೇಶದಲ್ಲೇ ಮೊದಲ ಯಶಸ್ವಿ ಪ್ರಯೋಗ
ವಿದ್ಯುತ್ ಉತ್ಪಾದನೆ, ಸಂಪರ್ಕ ಹಾಗೂ ನಿರ್ವಹಣಾ ಹೊಣೆಗಳನ್ನು ಅದಾನಿ, ಅಂಬಾನಿಗೆ ಕೊಡಲು ಮುಂದಾಗಿರುವ ಈ ಸರಕಾರದಿಂದ ರೈತರು ಯಾವ ಸೌಲಭ್ಯವನ್ನು ನಿರೀಕ್ಷಿಸಲೂ ಸಾಧ್ಯವಾಗುತ್ತಿಲ್ಲ.1983ರಲ್ಲಿ ಗೂಂಡೂರಾವ್ ಅವರೊಂದಿಗೆ ರೈತ ಮುಖಂಡರಾದ ಎಂ.ಡಿ. ಸುಂದರೇಶ್ ಹಾಗೂ ನಂಜುಂಡಸ್ವಾಮಿ ಅವರು ಮಾತನಾಡಿದ ಪರಿಣಾಮ 5 ಎಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡಲು ಒಪ್ಪಿದ್ದರು. ಆನಂತರದಲ್ಲಿ ಕೆ.ಎಸ್. ಪುಟ್ಟಣ್ಣಯ್ಯನವರ ನೇತೃತ್ವದಲ್ಲಿ ನಡೆದ ಹೋರಾಟದಿಂದ 10 ಎಚ್ಪಿವರೆಗಿನ ಬಳಕೆಗೆ ಮೀಟರ್ ಇರುವುದಿಲ್ಲ. ಈಗಿನ ಸರಕಾರ ರೈತರ ಮೇಲೆ ಬರೆ ಎಳೆಯಲು ಹೊರಟಿದ್ದು, ಮೀಟರ್ ಅಳವಡಿಸಿ ರೈತರಲ್ಲೂ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಭೂಮಿ ಮಾರಾಟ ಹೆಚ್ಚಳ
ಈಗಾಗಲೇ ಭೂಸುಧಾರಣಾ ಕಾಯ್ದೆಗೆ ತಂದ ತಿದ್ದುಪಡಿಗಳಿಂದಾಗಿ ಶೇ. 47ರಷ್ಟು ಕೃಷಿ ಭೂಮಿ ಮಾರಾಟ ಹೆಚ್ಚಳವಾಗಿದೆ. ಬಡ ರೈತರು, ಸಣ್ಣ ಹಿಡುವಳಿದಾರರು ಕೃಷಿ ಭೂಮಿಯನ್ನು ಬಿಡುಗಾಸಿಗೆ ಮಾರಾಟ ಮಾಡಿಕೊಂಡು ನೆಲೆ ಕಳೆದುಕೊಳ್ಳುತ್ತಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತನ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ಸೆ.30. ರಿಂದ ಮಂಡ್ಯ ಮೈ ಶುಗರ್ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಸಚಿವ ಕೆ.ಗೋಪಾಲಯ್ಯ
ಗೂಂಡಾಗಿರಿ ರಾಜಕಾರಣಕ್ಕೆ ಅವಕಾಶ ಕೊಡಬಾರದು
ನಾವು ಗಣಿ ನಿಷೇಧ ಮಾಡಿ ಕೆ.ಆರ್.ಎಸ್ ಉಳಿಸಿ ಸಂರಕ್ಷಿಸಬೇಕೆಂಬ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಿದ್ದೇವೆ. ಇತ್ತೀಚೆಗೆ ಪರೀಕ್ಷಾರ್ಥ ಸ್ಪೋಟ ನಡೆಸಲು ಬಂದ ತಂಡವನ್ನು ವಾಪಸ್ಸು ಕಳುಹಿಸಿದ್ದೆವು. ಆದರೆ, ಅಲ್ಲಿನ ಶಾಸಕರು ಗೂಂಡಾಗಿರಿ ವರ್ತನೆ ತೋರುತ್ತಿದ್ದಾರೆ. ಅಕ್ರಮ ಸಾಗಾಣೆಯಲ್ಲಿ ತೊಡಗಿದ್ದ ಲಾರಿಗಳನ್ನು ತಡೆಹಿಡಿದಿದ್ದ ಗಣಿ ಅಧಿಕಾರಿಗಳ ಮೇಲೆ ಗೂಂಡಾ ವರ್ತನೆ ತೋರಿ ಲಾರಿಗಳನ್ನು ಬಿಡಿಸಿ ಕಳುಹಿಸಿದ್ದಾರೆ. ಮುಂದೆ ಮಂಡ್ಯದಲ್ಲಿ ಇಂತಹ ಗೂಂಡಾಗಿರಿ ರಾಜಕಾರಣಕ್ಕೆ ಅವಕಾಶಕೊಡದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
ಹಸಿರು ಶಕ್ತಿ, ಯುವ ನಾಯಕತ್ವ ವಿಜೃಂಭಿಸಬೇಕು
ಇನ್ನು ಮುಂದೆ ಜಿಲ್ಲೆಯಲ್ಲಿ ಯುವ ಶಕ್ತಿ ಉದಯಿಸುವ ಎಲ್ಲಾ ಲಕ್ಷಣಗಳಿದ್ದು, ರೈತ ಸಂಘದಿಂದ ದರ್ಶನ್ ಪುಟ್ಟಣ್ಣಯ್ಯ, ಎಸ್.ಸಿ.ಮಧುಚಂದನ್, ಪ್ರಸನ್ನ ಎನ್. ಗೌಡರಂತಹ ಯುವ ನಾಯಕರ ನಾಯಕತ್ವ ಹೊಸ ನಡೆ ನುಡಿಯ ರಾಜಕಾರಣವನ್ನು ಹುಟ್ಟುಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ಹಸಿರು ಟವಲನ್ನು ಎಚ್ಚರಿಕೆಯಿಂದ ಬಳಸಬೇಕಾದ ಅನಿವಾರ್ಯತೆ ಇದೆ. ಅತ್ಯಮೂಲ್ಯ ಉದ್ದೇಶದಿಂದ ರೂಪಿತವಾದ ಹಸಿರು ಟವಲನ್ನು ಕೆಲವು ಡೀಲ್ಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ತಿಲಾಂಜಲಿ ಹಾಡಬೇಕಿದೆ. ಹಿರಿಯರ ತ್ಯಾಗ, ಬಲಿದಾನಕ್ಕೆ ಅಪಚಾರವಾಗಬಾರದು. ಹಾಗಾಗಿ ಮಂಡ್ಯದಲ್ಲಿ ರೈತರ ರಾಜಕಾರಣಕ್ಕೆ ಇರುವ ಅವಕಾಶ ಮತ್ತೆಲ್ಲೂ ಇಲ್ಲದಾಗಿದ್ದು, ಜಿಲ್ಲೆಯ ಕನಿಷ್ಠ ನಾಲ್ಕೈದು ಕ್ಷೇತ್ರಗಳಲ್ಲಾದರೂ ಹಸಿರು ಶಕ್ತಿ, ಯುವ ನಾಯಕತ್ವ ವಿಜೃಂಭಿಸಬೇಕೆಂದು ಕರೆ ನೀಡಿದರು.
ಬಿಜೆಪಿ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ವಹಿಸುತ್ತಿದೆ
ಕಾರ್ಯಕ್ರಮ ಉದ್ಘಾಟಿಸಿದ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ್ ಮಾತನಾಡಿ, ''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ತಪ್ಪಿದ್ದು ನಿಜ. ಪ್ರಧಾನಿ ಮೋದಿ ಜನರನ್ನು ನಿರಂತರವಾಗಿ ವಂಚಿಸುತ್ತಾ ಬಂದಿದ್ದಾರೆ. ನರೇಂದ್ರಮೋದಿ ಅಧಿಕಾರಕ್ಕೆ ಬರುತ್ತಲೆ ರೈತರ ಸಾಲ ಮನ್ನಾ ಮಾಡುತ್ತೇನೆಂದು ಘಂಟಾಘೋಷವಾಗಿ ಹೇಳಿ ಇಂದಿಗೆ 8 ವರ್ಷ ಕಳೆದಿದೆ. ಆದರೆ, ಅವರು ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ಕೊಡುವ ಪ್ರಯತ್ನದಲ್ಲಿ ತೊಡಗಿದ್ದಾರೆಂದು'' ಕಿಡಿಕಾರಿದರು
ನಮ್ಮದು ಡಬಲ್ ಇಂಜಿನ್ ಸರ್ಕಾರ ಎನ್ನು ಅವರ ಸರ್ಕಾರದಲ್ಲಿ ಸಿಂಗಲ್ ಪಿಸ್ಟನ್ ಮಾತ್ರವಿದೆ. ಇದರಿಂದ ಅವರಿಗೆ ಶಕ್ತಿಯೇ ಇಲ್ಲ. ಕೃಷಿಗೆ ಬೇಕಾದ ವಸ್ತುಗಳು ದುಬಾರಿಯಾಗಿದ್ದರೂ, ಅಕ್ಕಿ, ಪುರಿಯ ಮೇಲೂ ಜಿಎಸ್ಟಿ ಹಾಕಿ ರೈತರನ್ನು ಸತಾಯಿಸುತ್ತಿದ್ದಾರೆ. ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಪ್ರಯತ್ನ ಮಾಡಿದರೆ ನಾವು ಮೀಟರ್ಗಳನ್ನು ಕಿತ್ತು ಕೆ.ಆರ್.ಎಸ್.ಗೆ ಬಿಸಾಡುತ್ತೇವೆ ಎಂದು ಎಚ್ಚರಿಸಿದರು.