ಮಂಡ್ಯದಲ್ಲಿ ಜಮೀನಿಗೆ ನೀರು ಹರಿಸಲು ಒತ್ತಾಯಿಸಿ 24 ದಿನದಿಂದ ಪ್ರತಿಭಟನೆ
ಮದ್ದೂರು (ಮಂಡ್ಯ), ಜುಲೈ 31: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರ ಪ್ರತಿಕೃತಿ ದಹಿಸುವ ಮೂಲಕ ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆಯುತ್ತಿರುವ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಅಹೋರಾತ್ರಿ ಧರಣಿ ಮುಂದುವರೆಯುತ್ತಿದೆ.
ಈಗಾಗಲೇ ಅಹೋರಾತ್ರಿ ಧರಣಿ 24 ದಿನಗಳನ್ನು ಪೂರೈಸಿದ್ದು, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದರಿಂದ ಧರಣಿ ನಡೆಸುತ್ತಿರುವ ಕಾರ್ಯಕರ್ತರು ಆಕ್ರೋಶಗೊಂಡಿದ್ದು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ.
ಧರಣಿಯಲ್ಲಿ ನಿರತರಾದವರನ್ನುದ್ದೇಶಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್ ಮಾತನಾಡಿ ಕೆಆರ್ಎಸ್ ಅಚ್ಚುಕಟ್ಟು ಭಾಗದ ರೈತರ ಜಮೀನುಗಳಿಗೆ ನೀರು ಬಿಡುಗಡೆಗೊಳಿಸದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದರು. "ತಕ್ಷಣದಿಂದ ನಾಲೆಗೆ ನೀರು ಹರಿಸುವ ಜೊತೆಗೆ ಜಿಲ್ಲೆಯ ಕೆರೆ-ಕಟ್ಟೆಗಳನ್ನು ತುಂಬಿಸಿ ಜನ-ಜಾನುವಾರುಗಳಿಗೆ ನೀರು ಒದಗಿಸಬೇಕು," ಎಂದು ಆಗ್ರಹಿಸಿದರು.
"ಧರಣಿ ನಡೆಸುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲದ ಸರ್ಕಾರ ನೀರು ಹರಿಯಲು ಬಿಟ್ಟು ತೊಂದರೆ ನೀಡುತ್ತಿದೆ. ಇನ್ನಾದರೂ ಬರದಿಂದ ಬಸವಳಿದಿರುವ ರೈತರ ಹಿತ ರಕ್ಷಣೆಗೆ ಮುಂದಾಗಬೇಕು," ಎಂದು ಹೇಳಿದ ಉಮಾಶಂಕರ್, ನಾಲೆಗಳಿಗೆ ನೀರು ಹರಿಸುವ ಸಂಬಂಧ ನಿರ್ಲಕ್ಷ್ಯ ಮುಂದುವರೆದಲ್ಲಿ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಇದೇ ವೇಳೆ ಎಚ್ಚರಿಕೆ ನೀಡಿದರು.