ಭಾರತ್ ಜೋಡೋ ಯಾತ್ರೆ ನೋಡಿ ಬಿಜೆಪಿ ಧೈರ್ಯ ಕಳೆದುಕೊಂಡಿದೆ: ಪ್ರಿಯಾಂಕ್ ಖರ್ಗೆ
ಮಂಡ್ಯ, ಅಕ್ಟೋಬರ್ 3 : ಭಾರತ್ ಜೋಡೋ ಯಾತ್ರೆ ಆರಂಭವಾದಾಗಿನಿಂದ ಬಿಜೆಪಿಯವರು ಧೈರ್ಯ ಕಳೆದುಕೊಂಡಿದ್ದಾರೆ. ಏನಾದರೂ ನೆಪವೊಡ್ಡಿ ಕಾಂಗ್ರೆಸ್ ನಾಯಕರ ಮೇಲೆ ಕ್ಷುಲ್ಲಕ ಆರೋಪ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ವೇಳೆ ಶ್ರೀರಂಗಪಟ್ಟಣದ ಪರಿವರ್ತನಾ ಶಾಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ''ರಾಹುಲ್ ಗಾಂಧಿ ಪಾದಯಾತ್ರೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳುವ ಬಿಜೆಪಿ ನಾಯಕರು ಪ್ರತಿ ದಿನ ರಾಹುಲ್ ಗಾಂಧಿ ಬಗ್ಗೆಯೇ ಮಾತನಾಡುತ್ತಾರೆ. ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಭಾರತ್ ಜೋಡೋ ಪಾದಯಾತ್ರೆ ಬಿಜೆಪಿಯವರನ್ನು ಅಧೀರರನ್ನಾಗಿಸಿದೆ'' ಎಂದು ಹೇಳಿದರು.
ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆಯನ್ನು ಮುಂದಿಟ್ಟುಕೊಂಡು ಭಾರತ್ ಜೋಡೋ ಪಾದಯಾತ್ರೆ ನಡೆಸಲಾಗುತ್ತಿದೆ. ಈ ಮೂರು ವಿಚಾರಗಳ ಕುರಿತಂತೆ ರಾಹುಲ್ಗಾಂಧಿ ಸಂಸತ್, ಜನಸಮೂಹ ಹಾಗೂ ಮಾಧ್ಯಮ ಸಂದರ್ಶನದಲ್ಲಿ ಹೇಳಿದರೂ ರಾಹುಲ್ಗೆ ವಾಸ್ತವ ಪರಸ್ಥಿತಿಯ ಬಗ್ಗೆ ಜ್ಞಾನವಿಲ್ಲ ಎಂದು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಅವರಿಗೆ ಈ ಮೂರು ವಿಚಾರಗಳಲ್ಲಿರುವ ಅಂಕಿ-ಅಂಶಗಳೇ ಗೊತ್ತಿಲ್ಲ. ಅದರ ಬಗ್ಗೆ ಅಧ್ಯಯನವನ್ನೂ ಮಾಡಿಲ್ಲ. ಬಿಜೆಪಿ ವಾಟ್ಸಾಪ್ ಯೂನಿವರ್ಸಿಟಿಯವರು ಹೇಳಿದ್ದನ್ನು ಮಾಧ್ಯಮದವರ ಮುಂದೆ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಹೊಸಬಾಳೆ ಪ್ರಶ್ನೆಗೆ ಉತ್ತರಿಸಲಿ
ಬಿಜೆಪಿ ಮುಖಂಡ ರವಿಕುಮಾರ್ ಅವರು ರಾಹುಲ್ ಗಾಂಧಿಯವರಿಗೆ 10 ಪ್ರಶ್ನೆ ಕೇಳಿದ್ದಾರೆ. ಅದಕ್ಕೂ ಮೊದಲು ಆರ್ಎಸ್ಎಸ್ನ ಪ್ರಮುಖ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು ನಿರುದ್ಯೋಗ, ಬಡತನ, ಸಾಮಾಜಿಕ ಅಸಮಾನತೆಯ ಬಗ್ಗೆ ದನಿ ಎತ್ತಿದ್ದಾರೆ. ದೇಶದ 20 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರ ದೈನಂದಿನ ಆದಾಯ 375 ರೂ.ಗೂ ಕಡಿಮೆ ಇದೆ. 4 ಕೋಟಿ ಜನರು ಉದ್ಯೋಗ ವಂಚಿತರಾಗಿದ್ದಾರೆ. ಲೇಬರ್ಸ್ ಸರ್ವೆ ಪ್ರಕಾರ ದೇಶದಲ್ಲಿ ಶೇ.7.6ರಷ್ಟು ನಿರುದ್ಯೋಗವಿದ್ದು, ದೇಶದ ಒಟ್ಟು ಸಂಪತ್ತಿನಲ್ಲಿ ಶೇ.20ರಷ್ಟು ಸಂಪತ್ತು ಶೇ.1ರಷ್ಟು ಜನರ ಕೈಯ್ಯಲ್ಲಿರುವುದಾಗಿ ಹೇಳಿದ್ದಾರೆ. ಬಡತನಕ್ಕೆ ಕೇಂದ್ರ ಮತ್ತು ರಾಜ್ಯಸರಕಾರಗಳೇ ಕಾರಣ ಎಂದು ಕಾಂಗ್ರೆಸ್ ಹೇಳುತ್ತಿಲ್ಲ ಆರ್ಎಸ್ಎಸ್ನವರೇ ಹೇಳುತ್ತಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳು
ರಾಜ್ಯದಲ್ಲಿ ಶಿಕ್ಷಣ ಹಳ್ಳಹಿಡಿಯುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆ ಏನಾದರೂ ಇದೆಯಾ? ಕೊರೊನಾದಿಂದ ಆರ್ಥಿಕ ನಷ್ಟವಾಗಿ ಮಕ್ಕಳು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ಶಾಲೆಗಳು ಮುಚ್ಚುತ್ತಿದ್ದು, ಈ ಬಗ್ಗೆ ಸರ್ಕಾರದ ಬಳಿ ಅಂಕಿ ಅಂಶಗಳು ಇವೆಯಾ ಎಂದು ಪ್ರಶ್ನಿಸಿದರು.

ಭದ್ರತಾ ಹಗ್ಗಕ್ಕೂ ಕಮಿಷನ್ ಕೊಡಬೇಕೆ
ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪೊಲೀಸರು ಸರಿಯಾದ ಭದ್ರತೆ ಒದಗಿಸುತ್ತಿಲ್ಲ. ಮೈಸೂರಿನಿಂದ ಮಂಡ್ಯಗೆ ಯಾತ್ರೆ ಪ್ರವೇಶ ಮಾಡಿದಾಗ ರಾಹುಲ್ ಭದ್ರತೆಗಾಗಿ ಪೊಲೀಸರಲ್ಲಿ ಹಗ್ಗ ಇರಲಿಲ್ಲ. ಇಷ್ಟು ದಿನ ಹಗ್ಗ ಹಿಡಿದು ರಾಹುಲ್ಗೆ ರಕ್ಷಣೆ ಕೊಡುತ್ತಿದ್ದರು. ಇವತ್ತು ಹಗ್ಗ ಇರದ ಕಾರಣ, ಪೊಲೀಸರು ಕೈ ಹಿಡಿದು ರಕ್ಷಣೆ ಕೊಡುತ್ತಿದ್ದರು ಎಂದು ಆರೋಪಿಸಿದರು. ಯಾಕೆ ಹಗ್ಗವನ್ನು ತರಲಿಲ್ಲ ಎಂದು ವಿಚಾರಿಸಿದರೆ, ಮೈಸೂರುನವರು ಹಗ್ಗ ತಂದಿದ್ದರು. ವಾಪಸ್ ತೊಗೊಂಡು ಹೋದರು, ಆದರೆ ಮಂಡ್ಯದವರು ಹಗ್ಗ ಬಿಟ್ಟು ಬಂದಿದ್ದರು ಎಂದು ಆರೋಪಿಸಿದರು. ಈ ಸರಕಾರಕ್ಕೆ ಒಂದು ಹಗ್ಗಕ್ಕೂ ಗತಿ ಇಲ್ಲ, ಅದಕ್ಕೂ ಕಮಿಷನ್ ಕೊಡಬೇಕೆ ಎಂದು ಆರೋಪಿಸಿದರು.

ಪಾದಯಾತ್ರೆಯನ್ನು ದುರ್ಬಲಗೊಳಿಸುವ ಹುನ್ನಾರ
ಇನ್ನು ಮೈಸೂರು ಬಳಿ ರಾಹುಲ್ ಗಾಂಧಿಯವರು ಮಳೆಯಲ್ಲಿ ಮಾತನಾಡುವಾಗಲೂ ಭದ್ರತೆ ಇರಲಿಲ್ಲ, ಕಡಕೋಳ- ಬಂಡಿಪಾಳ್ಯ ರಸ್ತೆಯಲ್ಲಿ ಹೊರಟಾಗಲೂ ಅರ್ಧ ಗಂಟೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದರು. ಈ ಭದ್ರತಾ ವೈಫಲ್ಯಕ್ಕೆ ಯಾರು ಹೊಣೆ? ಶಿಷ್ಟಾಚಾರದಂತೆ ಭದ್ರತೆ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ, ಸರ್ಕಾರ ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಪ್ರಿಯಾಂಕ್ ಕಿಡಿಕಾರಿದರು.












Click it and Unblock the Notifications