ಅಕ್ರಮ ಸಂಬಂಧ; ಶ್ರೀರಂಗಪಟ್ಟಣದ ಲಾಡ್ಜ್ ನಲ್ಲಿ ಮಹಿಳೆ ಬರ್ಬರ ಹತ್ಯೆ
ಮಂಡ್ಯ, ಜೂನ್ 17: ಲಾಡ್ಜ್ ಒಂದರಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದ್ದು, ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದ ವಸತಿ ಗೃಹದಲ್ಲಿ ನಿನ್ನೆ ಮಹಿಳೆಯೊಬ್ಬರನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಗಂಡ ಹೆಂಡತಿ ಎಂದು ಹೇಳಿಕೊಂಡು ಬಂದಿದ್ದ ಇಬ್ಬರು ಲಾಡ್ಜ್ ನಲ್ಲಿ ರೂಂ ಪಡೆದಿದ್ದರು. ಊಟ ತರುವುದಾಗಿ ಹೇಳಿ ಹೊರ ಹೋದ ವ್ಯಕ್ತಿ ಸಂಜೆಯಾದರೂ ವಾಪಸ್ ಬರದಿದ್ದಾಗ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ಮಹಿಳೆ ಕೊಲೆಯಾಗಿರುವ ಸಂಗತಿ ಬೆಳಕಿಗೆ ಬಂದಿತ್ತು.
ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ ಕೇಸ್ : ಶಿಕ್ಷಕ ಅಮಾನತು, ಜೈಲು
ಮಹಿಳೆಯನ್ನು ಕೊಠಡಿಯಲ್ಲಿ ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಿ ಆರೋಪಿ ನಾಪತ್ತೆಯಾಗಿದ್ದ. ಸ್ಥಳಕ್ಕೆ ಭೇಟಿ ನೀಡಿದ್ದ ಶ್ರೀರಂಗಪಟ್ಟಣ ಟೌನ್ ಪೊಲೀಸರು ಪರೀಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದರು. ಮಹಿಳೆಯು ಮೈಸೂರಿನ ಜ್ಯೋತಿ ಎಂಬುವರಾಗಿದ್ದು, ಜೊತೆಗೆ ಬಂದಿದ್ದ ವ್ಯಕ್ತಿಯೂ ಮೈಸೂರಿನವನು ಎಂಬುದು ತಿಳಿದುಬಂದಿತ್ತು. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.|
ಇಂದು ಅನಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ತಮ್ಮಿಬ್ಬರ ನಡುವೆ ಅನೈತಿಕ ಸಂಬಂಧವೇ ಕಾರಣವೆಂದು ಆರೋಪಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಕೊಲೆಯಾದ ಜ್ಯೋತಿ ಮತ್ತು ಆರೋಪಿ ಹತ್ತಿರದ ಸಂಬಂಧಿಗಳಾಗಿದ್ದು, ಇಬ್ಬರು ಬೇರೆ ಬೇರೆ ವಿವಾಹವಾಗಿದ್ದರು. ಇಬ್ಬರ ನಡುವೆ ಹಲವು ವರ್ಷದಿಂದ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಕೊಲೆಯಾದ ಜ್ಯೋತಿ ಸಾಮಾಜಿಕ ಜಾಲತಾಣದಲ್ಲಿ ಬೇರೊಬ್ಬ ಯುವಕನ ಜೊತೆ ಒಡನಾಟ ಇಟ್ಟುಕೊಂಡಿದ್ದು, ಈ ಸಂಗತಿ ಅನಿಲ್ ಗೆ ಇಷ್ಟವಾಗಿರಲಿಲ್ಲ. ಈ ವಿಷಯವಾಗಿ ಜಗಳ ತೆಗೆದು, ಆಕೆಯನ್ನು ಶ್ರೀರಂಗಪಟ್ಟಣದಲ್ಲಿ ಲಾಡ್ಜ್ ನಲ್ಲಿ ಕತ್ತು ಕೊಯ್ದು, 17 ಬಾರಿ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಶ್ರೀರಂಗಪಟ್ಟಣ ಪೊಲೀಸರು ತನಿಖೆ ನಡೆಸಿ ಮೈಸೂರಿನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.