Modi Mandya Visit: ಮಂಡ್ಯಗೆ ಪ್ರಧಾನಿ ಮೋದಿ ಭೇಟಿ, ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ
ಮಂಡ್ಯ, ಮಾರ್ಚ್ 12: ರಾಜ್ಯ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರ್ನಾಟಕಕ್ಕೆ ಮತ್ತೆ ಭೇಟಿ ನೀಡುತ್ತಿದ್ದು, ಈ ಬಾರಿ ಪ್ರಧಾನಿ 16,000 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸುಮಾರು 118 ಕಿಲೋ ಮೀಟರ್ ಉದ್ದದ ಬಹುನಿರೀಕ್ಷಿತ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಉದ್ಘಾಟಿಸಲಿರುವ ಪ್ರಧಾನಿ ಮೋದಿ ಮಂಡ್ಯದಲ್ಲಿ ಮತಬೇಟೆಗೆ ಸಿದ್ಧವಾಗಿದ್ದಾರೆ. ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳ್ನು ಆಯೋಜಿಸಲಾಗಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ಕೂಡ ನಡೆಯಲಿದೆ.

ಈ ವರ್ಷ ಕರ್ನಾಟಕಕ್ಕೆ ಪ್ರಧಾನಿ ಮೋದಿಯವರ ಆರನೇ ಭೇಟಿ ಇದಾಗಿದೆ. ರಾಜ್ಯದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೆ ಅಧಿಕಾರದ ಚುಕ್ಕಾನಿ ಹಿಡಿಯಲು ಯತ್ನಿಸುತ್ತಿರುವ ಬಿಜೆಪಿ ಹಲವು ರಣತಂತ್ರಗಳನ್ನು ಹೂಡುತ್ತಿದೆ. ಈಗಾಗಲೇ ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ಭಾರತ ಚುನಾವಣಾ ಆಯೋಗದ ತಂಡ ರಾಜ್ಯಕ್ಕೆ ಭೇಟಿ ನೀಡುತ್ತಿದೆ.
ಭಾನುವಾರ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಅವರು ಮಂಡ್ಯದಲ್ಲಿ ಪ್ರಮುಖ ರಸ್ತೆ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 3:15ಕ್ಕೆ ಹುಬ್ಬಳ್ಳಿ - ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ನರೇಂದ್ರ ಮೋದಿ ಬೆಳಗ್ಗೆ 10.55ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 11.20ಕ್ಕೆ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ. ಬಳಿಕ ಮಂಡ್ಯದ ಪ್ರವಾಸಿಮಂದಿರ ವೃತ್ತದಿಂದ ನಂದ ಸರ್ಕಲ್ವರೆಗೆ ರೋಡ್ಶೋ ನಡೆಯಲಿದೆ. 11.40ಕ್ಕೆ ಹನಕೆರೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಉದ್ಘಾಟನೆ ಮಾಡಲಿದ್ದಾರೆ.

ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿ ಬೈಜತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಮಧ್ಯಾಹ್ನ 12.15 ರಿಂದ 1.15ರ ವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನ ಮಂಡ್ಯದಲ್ಲಿ ಜನರ ಗಮನ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಒಂದೂವರೆ ಕಿಲೋ ಮೀಟರ್ಗೂ ಹೆಚ್ಚಿನ ಉದ್ದದ ರೋಡ್ ಶೋ ನಡೆಸಲಿದ್ದಾರೆ.
ಮಂಡ್ಯದ ಐಬಿ ವೃತ್ತದಿಂದ ಮೈ ಶುಗರ್ ಫ್ಯಾಕ್ಟರಿ ಸರ್ಕಲ್ವರೆಗೆ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯಲಿದೆ. ಕಾರಿನಲ್ಲಿ ತೆರಳುವ ನರೇಂದ್ರ ಮೋದಿಯವರು ರಸ್ತೆ ಪಕ್ಕದಲ್ಲಿ ನಿಂತು ರೋಡ್ ಶೋ ವೀಕ್ಷಿಸುವ ಗ್ರಾಮಸ್ಥರನ್ನು ಮಾತನಾಡುವ ನಿರೀಕ್ಷೆ ಇದೆ. ರೋಡ್ ಶೋ ಮುಗಿಸಿ ಗೆಜ್ಜಲಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲಿರುವ ಪ್ರಧಾನಿ ಬಳಿಕ ಗೆಜ್ಜಲಗೆರೆ ಸಮೀಪ ನಿರ್ಮಾಣವಾಗಿರುವ ಹೆಲಿಪ್ಯಾಡ್ನಿಂದ ಧಾರವಾಡಕ್ಕೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಭಾಷಣದ ಮೂಲಕ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ಮಾಡಲು ಆಡಳಿತರೂಢ ಬಿಜೆಪಿ ಸಿದ್ಧವಾಗಿದೆ.
ಇನ್ನೂ, ಎನ್ಎಚ್-275 ರ 118-ಕಿಮೀ ಉದ್ದದ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ ಆರು ಪಥದ ಹೆದ್ದಾರಿಯನ್ನು ಒಳಗೊಂಡಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯನ್ನು ರೂ 8,480 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಧಾನ ಮಂತ್ರಿಯವರು ಲೋಕಾರ್ಪಣೆ ಮಾಡಲಿರುವ ಈ ಹೆದ್ದಾರಿ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರು ಗಂಟೆಗಳಿಂದ ಸುಮಾರು 75 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ.
ಇದೇ ವೇಳೆ 92 ಕಿಮೀ ಉದ್ದದ ಮೈಸೂರು - ಕುಶಾಲನಗರ ಚತುಷ್ಪಥ ಹೆದ್ದಾರಿಗೂ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 4,130 ಕೋಟಿ ರೂ.ಗಳ ಯೋಜನೆಯು ಬೆಂಗಳೂರಿನೊಂದಿಗೆ ಕುಶಾಲನಗರದ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎರಡು ನಗರದಗಳ ನಡುವಿನ ಪ್ರಯಾಣದ ಸಮುಯ ಸುಮಾರು 5 ಗಂಟೆಗಳಿಂದ ಕೇವಲ 2.5 ಗಂಟೆಗಳವರೆಗೆ ಇಳಿಸಲು ಸಹಾಯ ಮಾಡುತ್ತದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications