ಮಂಡ್ಯ:ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಪಿತೃಪಕ್ಷ ಜೋರು
ಮಂಡ್ಯ, ಸೆಪ್ಟೆಂಬರ್ 24 : ಬೆಲೆ ಏರಿಕೆಯ ಬಿಸಿಯ ನಡುವೆಯೂ ಪಿತೃಗಳನ್ನು ಆರಾಧಿಸುವ ಮಹರ್ನಮಿ ಹಬ್ಬ (ಮಹಾಲಯ ಅಮಾವಾಸ್ಯೆ) ಆಚರಣೆಗೆ ಜಿಲ್ಲಾದ್ಯಂತ ಜನರು ಬಿರುಸಿನ ತಯಾರಿ ನಡೆಸಿದ್ದಾರೆ. ಉತ್ತಮ ಮಳೆಯಾಗಿರುವುದರಿಂದ ಸಂಭ್ರಮದಲ್ಲಿರುವ ಗ್ರಾಮೀಣ ಜನರು ಅದ್ಧೂರಿಯಾಗಿ ಹಬ್ಬ ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ.
ಮಹರ್ನವಮಿ ಮುನ್ನಾ ದಿನವಾದ ಶನಿವಾರ ಮಂಡ್ಯ ನಗರ ಹಾಗೂ ಇತರ ತಾಲೂಕು ಕೇಂದ್ರಗಳಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿ ಬಿರುಸಾಗಿತ್ತು. ಮಾರುಕಟ್ಟೆಗಳಲ್ಲಿ ಜನಜಂಗುಳಿಯೇ ನೆರೆದಿತ್ತು. ಹಬ್ಬಕ್ಕೆ ಬೇಕಾದ ಎಡೆಸಾಮಾನು, ಬಟ್ಟೆ, ಹಣ್ಣು, ಹೂವು ಹಾಗೂ ಇತರ ವಸ್ತುಗಳ ಖರೀದಿ ಪ್ರಕ್ರಿಯೆ ಭರ್ಜರಿಯಾಗಿ ನಡೆದಿತ್ತು. ಹಿಂದಿನ ದಿನವೇ ಹಬ್ಬಕ್ಕೆ ಬೇಕಾದ ಬಹುತೇಕ ಅಗತ್ಯ ವಸ್ತುಗಳನ್ನು ಖರೀದಿಸುವುದರಿಂದ ನಗರದ ಪೇಟೆಬೀದಿ, ಹಳೇ ಎಂ.ಸಿ.ರಸ್ತೆಯಲ್ಲಿ ಕಿಕ್ಕಿರಿದ ಜನಸಂದಣಿ ನೆರೆದಿತ್ತು. ಹೂವು ಮತ್ತು ಹಣ್ಣುಗಳ ವ್ಯಾಪಾರ ಬಿರುಸಿನಿಂದ ಸಾಗಿತ್ತು.

ಎಡೆ ಸಾಮಾನಿಗೆ ಬೇಡಿಕೆ
ಪಿತೃಪಕ್ಷದಲ್ಲಿ ಮೃತಪಟ್ಟ ಹಿರಿಯರಿಗೆ ಎಡೆ ಇಡುವುದು ವಾಡಿಕೆ. ಮಾಂಸದೂಟದ ಜೊತೆಗೆ ಎಡೆ ಸಾಮಾನುಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಸಾಮಾನುಗಳನ್ನು ಮಾರುವವರು ಹೆಜ್ಜೆಗೊಬ್ಬರಂತೆ ಸ್ಟಾಲ್ ಹಾಕಿಕೊಂಡಿದ್ದಾರೆ. ಅರಿಶಿನ-ಕುಂಕುಮ, ಧೂಪ, ಕರ್ಪೂರ, ಗಂಧದ ಪುಡಿ, ಎಲೆ-ಅಡಿಕೆ, ಬಾಚಣಿಗೆ, ವಿಭೂತಿ, ದಾರ, ಬಳೆ ಮುಂತಾದ ವಸ್ತುಗಳನ್ನು ಒಳಗೊಂಡ ಎಡೆ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಎಡೆ ಸಾಮಾನು ಒಂದು ಕಟ್ಟು 20 ರೂ ಮತ್ತು 30 ರೂ. ದರದಲ್ಲಿ ಮಾರಾಟವಾಗುತ್ತಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಎಡೆ ಸಾಮಾನಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಠಿಯಾಗಿತ್ತು.
ಹೊಸ ಬಟ್ಟೆ ಖರೀದಿ
ಮಂಡ್ಯ ಭಾಗದಲ್ಲಿ ಪಿತೃಪಕ್ಷಕ್ಕೆ ಹೆಚ್ಚಿನ ಆದ್ಯತೆ ಇರುವುದರಿಂದ ಹಬ್ಬದ ಪ್ರಯುಕ್ತ ಬಟ್ಟೆ ಅಂಗಡಿಗಳಲ್ಲಿ ಹೊಸ ಬಟ್ಟೆ ಖರೀದಿಗೆ ಜನ ಮುಗಿಬಿದ್ದಿದ್ದರು. ಹಿರಿಯರಿಗೆ ಎಡೆ ಇಡಲು ಬೇಕಾದ ಬಿಳಿ ವಸ್ತ್ರ, ಟವೆಲ್, ಪಂಚೆ, ಸೀರೆಗಳ ಖರೀದಿಯಲ್ಲಿ ಜನರು ತೊಡಗಿದ್ದರಲ್ಲದೆ, ಹಬ್ಬದ ಸಲುವಾಗಿ ತಾವೂ ಸೇರಿದಂತೆ ಮಕ್ಕಳು ಹೊಸ ಬಟ್ಟೆ ಖರೀದಿಸುತ್ತಿದ್ದದ್ದು ಕಂಡು ಬಂದಿತು.

ಹಣ್ಣು-ತರಕಾರಿ ಬೆಲೆ ಹೆಚ್ಚಳ ಮಹಾಲಯ ಅಮಾವಾಸ್ಯೆ ಪ್ರಯುಕ್ತ ನಗರ ಸೇರಿ ಜಿಲ್ಲೆಯ ವಿವಿಧೆಡೆ ಪಿತೃಪಕ್ಷ ಇರುವ ಕಾರಣ ಹೂವು-ಹಣ್ಣು, ತರಕಾರಿ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದುದು ಕಂಡುಬಂದಿತು.












Click it and Unblock the Notifications