ಕನಗನಮರಡಿ ಬಸ್ ದುರಂತದ ಜಾಗದಲ್ಲಿ ಮೇಕೆ ಬಲಿ, ಶಾಂತಿ ಹೋಮಕ್ಕೆ ನಿರ್ಧಾರ
ಮಂಡ್ಯ, ಡಿಸೆಂಬರ್ 6 : ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿಯ ಭೀಕರ ಬಸ್ ದುರಂತ ಪ್ರಕರಣ ಸಂಭವಿಸಿ ಎರಡು ವಾರಕ್ಕೆ ಸಮೀಪ ಬಂತು ಆದರೂ ಕನಗನಮರಡಿ, ವದೇ ಸಮುದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಭಯದ ವಾತಾವರಣವೊಂದು ನೆಲೆಯಾಗಿದೆ.
ಆ ದುರ್ಘಟನೆಗೂ ಮೊದಲು ಈ ರಸ್ತೆಯಲ್ಲಿ ನಾಲೆಯ ಅಕ್ಕ- ಪಕ್ಕದ ಜಮೀನುಗಳ ರೈತರು ರಾತ್ರಿಯಿಡೀ ಯಾವುದೇ ಹೆದರಿಕೆ ಇಲ್ಲದೆ ತಿರುಗಾಡುತ್ತಿದ್ದರು. ಆದರೆ ಬಸ್ ದುರಂತ ಬಳಿಕ ಇಲ್ಲಿನ ಗ್ರಾಮಸ್ಥರು ತಮ್ಮ ಮನೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇನ್ನು ಹೇಳಿ ಕೇಳಿ ಹಳ್ಳಿ ಜನರಲ್ಲಿ ದೆವ್ವ- ಭೂತದ ಭೀತಿ ಇದ್ದೇ ಇದೆ.
ಆದರೆ ಬಸ್ ದುರಂತದಲ್ಲಿ ಮೂವತ್ತು ಮಂದಿ ಸಾವನ್ನಪ್ಪಿದ ನಂತರ ಕನಗನಮರಡಿ, ವದೇ ಸಮುದ್ರದ ಜನರಲ್ಲಿ ಭೀತಿ ಮತ್ತಷ್ಟು ಹೆಚ್ಚಾಗಿದೆ. ಭಯಗೊಂಡಿರುವ ಸುತ್ತಮುತ್ತಲ ಗ್ರಾಮಸ್ಥರು ಪರಿಹಾರಕ್ಕಾಗಿ ಜ್ಯೋತಿಷಿಯೊಬ್ಬರ ಮೊರೆ ಹೋಗಿದ್ದಾರೆ. ಈ ಜ್ಯೋತಿಷಿಯು ಸರಣಿ ಅಪಘಾತದ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ ಎನ್ನಲಾಗಿದೆ.

ಜ್ಯೋತಿಷಿ ಸೂಚನೆ ಮೇರೆಗೆ ಹೋಮ ಹಾಗೂ ಮೇಕೆ ಬಲಿ
ಖಾಸಗಿ ಬಸ್ ನಾಲೆಗೆ ಉರುಳಿ ಮೂವತ್ತು ಮಂದಿ ಸಾವನ್ನಪ್ಪಿದ ಜಾಗದಲ್ಲಿ ಜ್ಯೋತಿಷಿ ಸೂಚನೆ ಮೇರೆಗೆ ಹೋಮ ನಡೆಸಲು ಗ್ರಾಮದ ಜನರು ನಿರ್ಧರಿಸಿದ್ದಾರೆ. ಡಿಸೆಂಬರ್ 23ರಂದು ಈ ಜಾಗದಲ್ಲಿ ಮೇಕೆ ಬಲಿ ನೀಡಿ, ಬೆಳಗ್ಗೆಯಿಂದ ಸಂಜೆಯವರೆಗೂ ಶಾಂತಿ ಹೋಮ ನಡೆಸಲು ಊರಿನ ಯಜಮಾನರು ನಿರ್ಧರಿಸಿದ್ದಾರೆ. ಇನ್ನು ಕನಗನಮರಡಿ ಬಳಿ ಬಸ್ ದುರಂತದಲ್ಲಿ ಮೃತಪಟ್ಟ ವದೇ ಸಮುದ್ರ ಗ್ರಾಮದ 8 ಮಂದಿಗೆ ಸಾಮೂಹಿಕವಾಗಿ ತಿಥಿ ಮಾಡಲಾಯಿತು. ಕಮಲಮ್ಮ, ರತ್ನಮ್ಮ, ಶಶಿಕಲಾ, ಚಿಕ್ಕಯ್ಯ ಹಾಗೂ ಮಕ್ಕಳಾದ ರವಿಕುಮಾರ್, ಪ್ರಶಾಂತ್, ಪವಿತ್ರಾ ಅಂತ್ಯಕ್ರಿಯೆ ಮಾಡಿದ್ದ ಸ್ಥಳದಲ್ಲಿ ನಡೆದ ತಿಥಿ ಕಾರ್ಯದಲ್ಲಿ ಊರಿನ ಜನರು ಭಾಗವಹಿಸಿದ್ದರು.

ಮಕ್ಕಳನ್ನು ನೆನೆದರೆ ಅನ್ನ ಗಂಟಲಿಗೆ ಇಳಿಯುತ್ತಿಲ್ಲ
ಮೃತಪಟ್ಟವರ ಸಮಾಧಿಯ ಮೇಲೆ ಕುಟುಂಬದವರು ತಿಂಡಿ-ತಿನಿಸುಗಳನ್ನು ಇಟ್ಟಿದ್ದರು. ಮೃತರನ್ನು ನೆನಪಿಸಿಕೊಂಡು ಬಿಕ್ಕಿಬಿಕ್ಕಿ ಅತ್ತರು. ಇವರನ್ನು ಗ್ರಾಮದ ಜನರು ಸಂತೈಸಿದರು. ಮಕ್ಕಳ ಪೋಷಕರು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಮಕ್ಕಳನ್ನು ಕಳೆದುಕೊಂಡಾಗಿನಿಂದ ಅನ್ನ ಗಂಟಲಿಗೆ ಇಳಿಯುತ್ತಿಲ್ಲ. ಅವರಿಂದ ತಿಥಿ ಮಾಡಿಸಿಕೊಳ್ಳಬೇಕಿದ್ದವರು ನಾವು. ಅವರಿಗೇ ತಿಥಿ ಕಾರ್ಯ ಮಾಡುವಂತಾಗಿದ್ದು ದುರಂತ. ಕುಂತಲ್ಲಿ- ನಿಂತಲ್ಲಿ ನೆನಪಾಗಿ ಕಾಡುತ್ತಾರೆ. ತಟ್ಟೆಯಲ್ಲಿ ಹಾಕೊಂಡ ಅನ್ನ ಗಂಟಲಿಗಿಳಿಯದು ಎಂದು ಕುಟುಂಬದವರು ಗದ್ಗದಿತರಾದರು.

ಎಂಥವರ ಕರುಳನ್ನು ಹಿಂಡುವಂಥ ದೃಶ್ಯ
ನಮಗೆಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಕೊರತೆ ಮಾಡಿರಲಿಲ್ಲ. ಅವರು ಕೇಳಿದ ತಿಂಡಿಗಳನ್ನೂ ಮಾಡಿಕೊಡುತ್ತಿದ್ದೆವು. ಮಕ್ಕಳು ತಿಂದು ಖುಷಿ ಪಡುತ್ತಿದ್ದವು. ಈಗ ನೋಡಿ, ಈ ತಿಂಡಿಗಳನ್ನು ಅವರ ಎದೆಯ ಮೇಲೆ ಇಡುವಂತಾಗಿದೆ. ಕಾಗೆ ರೂಪದಲ್ಲಾದರೂ ಬಂದು ತಿನ್ನಲಿ ಎಂದು ಗೋಳಾಡುತ್ತಿದ್ದ ದೃಶ್ಯ ಎಂತಹವರ ಕರುಳನ್ನೂ ಹಿಂಡುತ್ತಿತ್ತು. ಮೃತಪಟ್ಟವರ ಕುಟುಂಬದವರು ಅವರ ಮನೆಯಲ್ಲಿ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಿದ್ದರು. ಬಂಧುಗಳು ಭಾಗವಹಿಸಿದ್ದರು.

ದೆವ್ವ-ಭೂತ ಎಂಬ ನಂಬಿಕೆ ಬೇಡ
ವದೇಸಮುದ್ರ ಗ್ರಾಮದಲ್ಲಿ ಬೀಡುಬಿಟ್ಟಿರುವ ಪಾಂಡವಪುರದ ವಿಜ್ಞಾನ ಕೇಂದ್ರದ ಸದಸ್ಯರು, 'ದೆವ್ವ-ಭೂತ ಎಂಬ ನಂಬಿಕೆ ಬೇಡ. ಸತ್ತವರೆಲ್ಲ ದೆವ್ವವಾಗಿದ್ದಾರೆ ಎಂಬುದೆಲ್ಲ ಸುಳ್ಳಿನ ಕಂತೆ. ಭಯ ಬೇಡ' ಎಂದು ಜನರಿಗೆ ಧೈರ್ಯ ತುಂಬಿ ಜಾಗೃತಿ ಮೂಡಿಸಿದರು. ಡಿಸೆಂಬರ್ 7ರಂದು ಸಂಜೆ 6ಕ್ಕೆ ಗ್ರಾಮಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೃತರ ಕುಟಂಬದವರಿಗೆ ಪರಿಹಾರ ಧನದ ಚೆಕ್ ವಿತರಣೆ ಮಾಡಲಿದ್ದಾರೆ.












Click it and Unblock the Notifications