ಹಳೇ ಮೈಸೂರು; ಹೀನಾಯ ಸ್ಥಿತಿಯಲ್ಲಿದ್ದ ಕೈ ಪಡೆಗೆ ರಾಹುಲ್ ಗಾಂಧಿ ಟಾನಿಕ್
ಮಂಡ್ಯ, ಅಕ್ಟೋಬರ್, 07: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯನ್ನು ತಲುಪಿತ್ತು. ರಾಹುಲ್ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಿಂದ ಪಕ್ಷ ಬಲವರ್ಧನೆಗೊಳ್ಳುವುದೆ ಎಂಬುದರ ಕುರಿತು ಚರ್ಚೆಗಳು ಗರಿಗೆದರಿವೆ.
2023ರ ವಿಧಾನಸಭಾ ಚುನಾವಣೆ ಇನ್ನು ಏಳು ತಿಂಗಳು ಇರುವಾಗಲೇ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೆಡ್ಡು ಹೊಡೆಯಲು ತಯಾರಾಗುತ್ತಿದೆಯಾ? ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ. ಭಾರತ ಜೋಡೋ ಯಾತ್ರೆ ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯವನ್ನು ಮೂಡಿಸಿದಂತೆ ಕಂಡುಬಂದರೂ, ಚುನಾವಣೆವರೆಗೆ ಈ ಯಾತ್ರೆಯ ಪ್ರಭಾವ ಇರುವುದೇ ಎಂಬುದು ಯಕ್ಷ ಪ್ರಶ್ನೆ ಆಗಿದೆ. ಹಳೇ ಮೈಸೂರು ಭಾಗ ಕಾಂಗ್ರೆಸ್ ಮತ್ತು ಜೆಡಿಎಸ್ನ ಭದ್ರಕೋಟೆಯಾಗಿದೆ. ಅದರಲ್ಲೂ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಕನಿಷ್ಠ ಚೇತರಿಕೆಯನ್ನು ಕಂಡಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲಲು ಶತ ಪ್ರಯತ್ನವನ್ನು ಮಾಡುತ್ತಿದೆ.
ಕಾಂಗ್ರೆಸ್ ಯಾತ್ರೆ ಶ್ರೀರಂಗಪಟ್ಟಣ, ಮೇಲುಕೋಟೆ, ನಾಗಮಂಗಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದೆ. ಈ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ಗಿಂತ ಜೆಡಿಎಸ್ ಹೆಚ್ಚು ಬಲಿಷ್ಠವಾಗಿದೆ. ಅದರಲ್ಲೂ ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಪ್ರಬಲ ಅಭ್ಯರ್ಥಿಯೇ ಇಲ್ಲದಂತಹ ಸ್ಥಿತಿ ನಿರ್ಮಾಣ ಆಗಿದೆ. ಇನ್ನು ನಾಗಮಂಗಲ ಮತ್ತು ಶ್ರೀರಂಗಪಟ್ಟಣದಲ್ಲಿ ಚೆಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಜೆಡಿಎಸ್ ವಿರುದ್ಧ ಗಟ್ಟಿಯಾಗಿ ಹೋರಾಡುವ ಶಕ್ತಿಯನ್ನು ಹೊಂದಿದ್ದಾರೆ. ರಾಹುಲ್ ಯಾತ್ರೆ ಈ ಇಬ್ಬರು ನಾಯಕರಿಗೆ ಮತ್ತಷ್ಟು ಚೈತನ್ಯ ತುಂಬಲಿದ್ದು, ಇತರೆ ಕ್ಷೇತ್ರಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಕೈ ಪಡೆಗೆ ಬಲ ತುಂಬಲಿದ್ದಾರಾ ರಾಹುಲ್?
ಮಂಡ್ಯ ಜಿಲ್ಲೆಯಲ್ಲಿ ಮೇಲುಕೋಟೆ, ಮದ್ದೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ. ಮಂಡ್ಯ ಮತ್ತು ಕೆ.ಆರ್. ಪೇಟೆಯಲ್ಲೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಸದೃಢತೆಯನ್ನು ಕಾಯ್ಡುಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜೋಡೋ ಯಾತ್ರೆ ಚುನಾವಣೆಗೆ ಸಹಕಾರಿ ಆಗುವ ಆಶಾ ಭಾವನೆಯನ್ನು ಮೂಡಿಸಿದೆ. ಕಾಂಗ್ರೆಸ್ ಜೋಡೋ ಯಾತ್ರೆಯ ಮೂಲ ಉದ್ದೇಶವೇ ಬಿಜೆಪಿ ವಿರೋಧಿ ಶಕ್ತಿಗಳನ್ನು ಕ್ರೂಢೀಕರಿಸುವ ಮತ್ತು ಅವುಗಳನ್ನು ಕಾಂಗ್ರೆಸ್ ಪಕ್ಷದ ಮತಗಳನ್ನಾಗಿ ಪರಿವರ್ತಿಸಿಕೊಳ್ಳುವ ಲೆಕ್ಕಾಚಾರವಿದೆ. ಜಿಲ್ಲೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನಷ್ಟೇ ಪಡೆದಿದೆ. ಆದರೂ ವಿವಿಧ ಕ್ಷೇತ್ರಗಳಿಗೆ ಯುವ ನಾಯಕರನ್ನು ಕಣಕ್ಕಿಳಿಸುವ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದೆ.

ಬಿಜೆಪಿ ವಿರೋಧಿ ಮತಗಳನ್ನು ಸೆಳೆಯುವ ಪ್ಲಾನ್
ಜೆಡಿಎಸ್ ಕೂಡ ತನ್ನ ಮೂಲ ನೆಲೆಯನ್ನು ಉಳಿಸಿಕೊಳ್ಳುವ ಹೋರಾಟವನ್ನು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತಗಳನ್ನು ಒಗ್ಗೂಡಿಸಿಕೊಳ್ಳುವುದರ ಜೊತೆಗೆ ಬಿಜೆಪಿ ವಿರೋಧಿ ಮತಗಳನ್ನು ಕ್ರೂಢೀಕರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಆದರೆ ಈ ಯಾತ್ರೆಯಲ್ಲಿ ದಲಿತ, ರೈತ, ಮಹಿಳಾ ಮತ್ತು ಕಾರ್ಮಿಕ ಚಳವಳಿಯ ಶಕ್ತಿಗಳು ಕಾಂಗ್ರೆಸ್ ಬೆಂಬಲಕ್ಕೆ ನಿಂತಂತೆ ಕಂಡುಬರುತ್ತಿಲ್ಲ.

ಭಾರತ್ ಜೋಡೋ ಯಾತ್ರೆಗೆ ಫಲ ಸಿಗುತ್ತದೆಯಾ?
ಸಾಂಕೇತಿಕವಾಗಿ ರೈತ ಸಂಘ ಹೆಜ್ಜೆ ಹಾಕಿದ್ದನ್ನು ಹೊರತುಪಡಿಸಿದರೆ, ಬಿಜೆಪಿ ವಿರುದ್ಧ ಜಿಲ್ಲೆಯಲ್ಲಿ ಮತ್ತು ಹಳೇ ಮೈಸೂರು ಭಾಗದಲ್ಲಿ ನಿರಂತರ ಹೋರಾಟಗಳನ್ನು ಸಂಘಟನೆಗಳು ನಡೆಸುತ್ತಿವೆ. ಆದರೆ ಇದೇ ಸಂಘಟನೆಗಳು ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಜೋಡಿ ಆಗದಿರುವುದು ಯಾತ್ರೆಯ ಮೂಲ ಆಶಯ ಅನುಷ್ಠಾನಕ್ಕೆ ಬಂದಂತಾಗಲಿಲ್ಲ ಎನ್ನುವುದು ಗೋಚರವಾಗುತ್ತಿದೆ.

ಪ್ರಮುಖ ಕ್ರೇತ್ರಗಳ ಮೇಲೆ ಕೈ ಪಡೆ ಕಣ್ಣು
ಯಾತ್ರೆಯ ಆರಂಭದಿಂದಲೂ ಬಿಜೆಪಿಯ ಆಡಳಿತದ ಲೋಪಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಹಾಗೂ ಪಕ್ಷಾತೀತವಾಗಿ ನಡೆಸುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ಆದರೆ ಬಿಜೆಪಿಯ ಪ್ರತಿರೋಧ ಸಂಘಟನೆಗಳನ್ನು ಯಾತ್ರೆಯಲ್ಲಿ ಇನ್ನಷ್ಟು ಬಳಸಿಕೊಂಡಿದ್ದರೆ ಅದು ಮುಂದಿನ ಚುನಾವಣೆಗೂ ಸಹಕಾರಿ ಆಗುತ್ತಿತ್ತು ಎಂಬುದು ಹಲವರ ಅಭಿಪ್ರಾಯ ಆಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ ನಡೆಸಿದ ಯಾತ್ರೆಯಿಂದಾಗಿ ಕಾಂಗ್ರೆಸ್ಗೆ ಕನಿಷ್ಠ ಚೈತನ್ಯ ಬಂದಂತಾಗಿದೆ. ಹಾಗೂ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಿದಂತಾಗಿದೆ. ಇದು ಚುನಾವಣೆಯಲ್ಲಿ ಮತಗಳಾಗಿ ಎಷ್ಟು ಮಟ್ಟದಲ್ಲಿ ಪರಿವರ್ತನೆ ಆಗುತ್ತದೆ ಎಂಬುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications