ಗ್ರಾಮ ವಾಸ್ತವ್ಯ ರಾಜಕೀಯ ಸ್ಟಂಟ್ : ಚಲುವರಾಯಸ್ವಾಮಿ
ಮಂಡ್ಯ, ಜೂನ್ 09 : 'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಒಂದು ರಾಜಕೀಯ ಸ್ಟಂಟ್. ಇದರಿಂದ ಯಾವುದೇ ಪ್ರಯೋಜನವಿಲ್ಲ' ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಟೀಕಿಸಿದರು.
ಭಾನುವಾರ ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಅವರು, 'ಗ್ರಾಮ ವಾಸ್ತವ್ಯದಿಂದ ಯಾವುದೇ ಬದಲಾವಣೆಗಳೂ ಆಗದು. ಸಂಕಷ್ಟದಲ್ಲಿ ಇರುವವರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಮಾಡಬೇಕು' ಎಂದರು.
'ಗ್ರಾಮ ವಾಸ್ತವ್ಯದಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಕೆಲಸ ಮಾಡುವ ಮೂಲಕ ಜನರ ಹತ್ತಿರ ತೆರಳಬೇಕು. ಈ ರೀತಿ ಗ್ರಾಮ ವಾಸ್ತವ್ಯದಿಂದ ಒಂದಿಬ್ಬರು ಬಡವರನ್ನು ಮಾತನಾಡಿಸಿ ಅಲ್ಲ. ಸಂಪೂರ್ಣ ರಾಜ್ಯದ ಬಡತನ ನಿವಾರಣೆ ಮಾಡುವ ಯತ್ನ ಮಾಡಬೇಕು' ಎಂದು ಹೇಳಿದರು.

'ರಾಜ್ಯದ ಮುಖ್ಯಮಂತ್ರಿಯಾಗಿ ಸಹಾಯ ಮಾಡುವುದು ದೊಡ್ಡಸ್ತಿಕೆ ಅಲ್ಲ. ಸಿಎಂ ಆದವರು ಈ ನಾಡಿನ 6 ಕೋಟಿ ಜನರಿಗೂ ಸಹಾಯವಾಗುವಂತೆ ಕೆಲಸ ಮಾಡಬೇಕು. ಈ ರೀತಿಯ ಗ್ರಾಮ ವಾಸ್ತವ್ಯದಿಂದ ಖಂಡಿತಾ ಪ್ರಯೋಜನವಿಲ್ಲ' ಎಂದು ಟೀಕೆ ಮಾಡಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನಲ್ಲಿ ಜೂನ್ 21ರಂದು ಹಾಗೂ 22ರಂದು ಗ್ರಾಮ ವಾಸ್ತವ್ಯ ಮಾಡುವ ಮೂಲಕ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಗ್ರಾಮ ವಾಸ್ತವ್ಯ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜನಪ್ರಿಯತೆ ತಂದುಕೊಟ್ಟ ಕ್ರಾರ್ಯಕ್ರಮವಾಗಿದೆ. ಈ ಬಾರಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.












Click it and Unblock the Notifications