ತಮಿಳುನಾಡಿಗೆ ಯಾವ ಡ್ಯಾಂನಿಂದ ಎಷ್ಟು ನೀರು ಹರಿಯುತ್ತಿದೆ?
ಮಂಡ್ಯ, ಅಕ್ಟೋಬರ್ 4: ಯಾವುದೇ ಕಾರಣಕ್ಕೂ ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದೇ ಹೇಳುತ್ತಾ ಬಂದಿದ್ದ ರಾಜ್ಯ ಸರಕಾರ ಸೋಮವಾರ ಎರಡೂ ಸದನಗಳಲ್ಲಿ ರೈತರ ಬೆಳೆಗಾಗಿ ಎಂದು ನಿರ್ಣಯ ಕೈಗೊಂಡು, ಸೋಮವಾರ ರಾತ್ರಿಯಿಂದಲೇ ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಂದ ನೀರನ್ನು ಹರಿಸುತ್ತಿದೆ.
ಕೆಆರ್ ಎಸ್ ನಿಂದ 4500, ಕಬಿನಿ ಜಲಾಶಯದಿಂದ 2000 ಕ್ಯೂಸೆಕ್ ನೀರನ್ನು ನದಿಯ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ. ಇನ್ನುಳಿದಂತೆ ಕೆಆರ್ ಎಸ್ ನಿಂದ ನಾಲೆಗಳಿಗೆ ಹರಿಸುತ್ತಿರುವ ನೀರಿನ ಪ್ರಮಾಣದ ವಿವರ ಇಂತಿದೆ:[ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ಮಂಡ್ಯ ರೈತರು ಫುಲ್ ಗರಂ]

ಮೈಸೂರು ಜಿಲ್ಲೆಗೆ ಪೂರೈಕೆ ಮಾಡುವ ವರುಣಾ ನಾಲೆಗೆ 400 ಕ್ಯೂಸೆಕ್, ಮಂಡ್ಯ ಜಿಲ್ಲೆಯ ನಾಲೆಗಳಾದ ವಿ.ನಾಲೆಗೆ 2800 ಕ್ಯೂಸೆಕ್, ಚಿಕ್ಕದೇವರಾಯ ನಾಲೆ - 600 ಮತ್ತು ವಿರಿಜಾ ನಾಲೆಗೆ 400 ಕ್ಯೂಸೆಕ್ ನೀರನ್ನು ಹರಿಯ ಬಿಡಲಾಗಿದ್ದು, ಕೆಆರ್ ಎಸ್ ನಿಂದ ಒಟ್ಟು 8694 ಕ್ಯೂಸೆಕ್ ನೀರನ್ನು ಹರಿಯಬಿಡಲಾಗುತ್ತಿದೆ.
ಬಿಳಿಗುಂಡ್ಲುವಿನಲ್ಲಿ 8000 ಕ್ಯೂಸೆಕ್: ತಮಿಳುನಾಡಿಗೆ ಕೆಆರ್ ಎಸ್ ಮತ್ತು ಕಬಿನಿಯಿಂದ ಒಟ್ಟು 6500 ಕ್ಯೂಸೆಕ್ ನೀರನ್ನು ಹರಿಯಬಿಡಲಾಗಿದೆ. ಆದರೆ ಬಿಳಿಗುಂಡ್ಲುವಿನಲ್ಲಿರುವ ಮಾಪನದ ಪ್ರಕಾರ ಮಂಗಳವಾರ ಬೆಳಗ್ಗೆ 10ರ ಸಮಯದಲ್ಲಿ 8000 ಕ್ಯೂಸೆಕ್ ನೀರು ಹರಿದಿರುವುದು ದಾಖಲಾಗಿದೆ.['ದೊಡ್ಮನೆ'ಗಾಗಿ ಸಾರಿ ಕೇಳಿದರೆ ಕ್ಷಮಿಸಲು ನಾವು 'ದಡ್ಮನೆ'ಯವರೇ?]
ದಸರಾಗೆ ಪ್ರತಿಭಟನೆ ಬಿಸಿ : ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಬರಗಾಲ ಪರಿಸ್ಥಿತಿ ಇದ್ದರೂ ರೈತರ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ರಾಜ್ಯ ಸರಕಾರ ನೀರು ಹರಿಸುತ್ತಿರುವುದನ್ನು ಖಂಡಿಸಿ, ಮೈಸೂರು ದಸರಾ ದಿನ ಅಂದರೆ ಅ.11ರಂದು ರಸ್ತೆ ತಡೆ ಚಳವಳಿ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ನಿರ್ಧರಿಸಿದೆ.












Click it and Unblock the Notifications