ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ:ಜ.4ರವರೆಗೆ ಆರೋಪಿಗಳು ಪೊಲೀಸ್ ಕಸ್ಟಡಿಗೆ
ಮದ್ದೂರು, ಡಿಸೆಂಬರ್ 28: ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮದ್ದೂರು ಜೆಎಂಎಫ್ ಸಿ ನ್ಯಾಯಾಲಯಕ್ಕೊಪ್ಪಿಸಿದ್ದು, ನ್ಯಾಯಾಧೀಶರು ಜ. 4ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಪ್ರಸನ್ನ, ಸ್ವಾಮಿ, ಯೋಗೇಶ್ ಹಾಗೂ ಮುತ್ತೇಶ್ ಬಂಧಿತರಾಗಿದ್ದು, ಇವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸದ ವೇಳೆ ನ್ಯಾಯಾಧೀಶರಾದ ಸೋಮನಾಥ ಅವರು ವಿಚಾರಣೆಯನ್ನು ಕಾಯ್ದಿರಿಸಿ ಹೆಚ್ಚಿನ ವಿಚಾರಣೆಗಾಗಿ ಜ.4ರವರೆಗೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ್ ಅವರು, ಮೇಲ್ನೋಟಕ್ಕೆ ಕಳೆದ ಎರಡು ವರ್ಷಗಳ ಹಿಂದೆ ತೊಪ್ಪನಹಳ್ಳಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಪ್ರಕಾಶ್ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಬಂದಿದ್ದು, ವಿಚಾರಣೆಯ ನಂತರಷ್ಟೆ ನಿಜವಾದ ಮಾಹಿತಿ ಹೊರ ಬರಲಿದೆ ಎಂದು ತಿಳಿಸಿದರು.

ಮೂರು ಬೈಕ್ ನಲ್ಲಿ ಬಂದು ಆರೋಪಿಗಳು ಡಿ.24ರ ಸಂಜೆ 4ರ ಸಮಯದಲ್ಲಿ ಪ್ರಕಾಶ್ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು. ಈ ಪೈಕಿ ಡಿ.ಸ್ವಾಮಿಯನ್ನು 25ರ ಬೆಳಗ್ಗೆ ಮಂಡ್ಯ ನಗರದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತಲ್ಲದೆ, ಆತ ನೀಡಿದ ಮಾಹಿತಿ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಟಿ.ಎಸ್. ಪ್ರಸನ್ನ, ಯೋಗೇಶ್ ಉ. ಧಮನ್, ಮುತ್ತೇಶ್ ಅವರ ಬಂಧನಕ್ಕಾಗಿ ಡಿವೈಎಸ್ಪಿ ಶೈಲೇಂದ್ರ, ಸಿಪಿಐಗಳಾದ ಎನ್.ವಿ.ಮಹೇಶ್, ಮಂಜುನಾಥ್, ಹರೀಶ್ಬಾಬು, ಪಿಎಸ್ಐಗಳಾದ ಮಂಜೇಗೌಡ, ಮೋಹನ್ ಡಿ. ಪಟೇಲ್, ಸಂತೋಷ್, ಜಯಸ್ವಾಮಿ, ಶಿವರುದ್ರ, ಮಂಜು, ಶಿವಮಾದಯ್ಯ, ಉಮಾವತಿ, ಎಎಸ್ಐ ಮಹದೇವಯ್ಯ ಹಾಗೂ ಸಿಬ್ಬಂದಿ ಬಲೆ ಬೀಸಿ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಅವಿತು ಕುಳಿತಿದ್ದ ಆರೋಪಿಗಳನ್ನು ಬಂಧಿಸಿ ಕರೆ ತಂದಿದ್ದಾಗಿ ತಿಳಿಸಿದ್ದಾರೆ. ಕೃತ್ಯದಲ್ಲಿ ಇನ್ನೊಬ್ಬ ಭಾಗಿಯಾಗಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಿರುವುದಾಗಿ ಎಸ್ಪಿ ಶಿವಪ್ರಕಾಶ್ ತಿಳಿಸಿದ್ದಾರೆ.
ಇನ್ನು ತೊಪ್ಪನಹಳ್ಳಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ 50 ಮಂದಿ ಪೊಲೀಸರು, ಎರಡು ಕೆಎಸ್ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ. ರಕ್ಷಣೆ ಕೋರಿ ಮನವಿ ಮಾಡಿದ್ದ ಪ್ರಕಾಶ್ ಅವರ ಸ್ನೇಹಿತರ ಮನೆಗಳಿಗೂ ಪೊಲೀಸರನ್ನು ನೇಮಕ ಮಾಡಲಾಗಿದೆ. ಆರೋಪಿಗಳನ್ನು ಗಡಿಪಾರು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದು, ವಿಚಾರಣೆ ನಡೆಸಿದ ಬಳಿಕ ಗಡಿಪಾರು ಮಾಡಲೇಬೇಕಾದಲ್ಲಿ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗಿಯೂ ತಿಳಿಸಿದರು.












Click it and Unblock the Notifications