ಮಂಡ್ಯ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು
ಮಂಡ್ಯ, ಮಾರ್ಚ್ 30 : ಸಾಲ ಕೊಟ್ಟವನು ಹಿಂತಿರುಗಿಸದೆ ಅಪಪ್ರಚಾರ ಮಾಡಿದ್ದರಿಂದ ನೊಂದು ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಳವಳ್ಳಿ ಪಟ್ಟಣಕ್ಕೆ ಸಮೀಪದ ಗುಳ್ಳಗಟ್ಟ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಜಗದೀಶ ಎಂಬುವರ ಪತ್ನಿ ಸುನಿತಾ (30) ಮತ್ತು ಮಕ್ಕಳಾದ ಪ್ರಿಯಾಂಕ (16) ಹಾಗೂ ಪ್ರಜ್ವಲ್ (13) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಮಗನಿಗಾಗಿ ಶಾಸಕರ ಮನೆ ಎದುರು ತಾಯಿ ಆತ್ಮಹತ್ಯೆ
ಗುಳ್ಳಗಟ್ಟ ಗ್ರಾಮದ ಸುನಿತಾ ಹಾಗೂ ಜಗದೀಶ ಅವರು 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಮಗಳು ಪ್ರಿಯಾಂಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೂರು ವಿಷಯಗಳ ಪರೀಕ್ಷೆಯನ್ನಷ್ಟೆ ಬರೆದಿದ್ದು ಇನ್ನೂ ಮೂರು ವಿಷಯಗಳ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು.
ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿದ್ದು, ಸುನೀತಾ ತನ್ನ ಸಾವಿಗೆ ಪಕ್ಕದ ಮನೆಯವನು ಕಾರಣ ಎಂದು ಹೇಳಿದ್ದಾಳೆ. ಸಾವಿಗೆ ತನ್ನಿಂದ ಸಾಲ ಪಡೆದಿದ್ದ ಮೋಹನ ಹಾಗೂ ತನ್ನ ಗಂಡ ಜಗದೀಶ ಕಾರಣ ಎಂದು ಬರೆದಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅವಳೆಂದರೆ ಎಲ್ಲವೂ... ಅವಳಿಲ್ಲದ ಬದುಕು ಅನೂಹ್ಯ!
ಪ್ರೀತಿಸಿ ವಿವಾಹವಾಗಿದ್ದ ದಂಪತಿ ಅನೂನ್ಯವಾಗಿಯೇ ಇದ್ದರು. ಗಂಡ ಜಗದೀಶ್ ರಾಗಿ ಹುಲ್ಲನ್ನು ಒಕ್ಕಣೆ ಮಾಡುವ ಯಂತ್ರದ ಚಾಲಕನಾಗಿದ್ದು ಚೆನ್ನಾಗಿಯೇ ಸಂಪಾದಿಸುತ್ತಿದ್ದನು. ಇದೇ ಬೀದಿಯಲ್ಲಿ ವಾಸವಾಗಿದ್ದ ಮೋಹನ ಎಂಬಾತ ತನ್ನ ಸಂಕಷ್ಟ ಕಾಲಕ್ಕೆ ಎಂದು ಗೋಗೆರೆದ ಹಿನ್ನೆಲೆಯಲ್ಲಿ ಪ್ರಿಯಾಂಕ ತನ್ನ ಪತಿಗೆ ತಿಳಿಯದಂತೆ ಸಾಲ ನೀಡಿದ್ದಳು.
ತಾನು ಕೊಟ್ಟಿದ್ದ ಹಣವನ್ನು ವಾಪಸ್ ಕೇಳಲು ಹೋದಾಗ ಹೊಸ ವರಸೆ ತೆಗೆದ ಮೋಹನ್ ಹಣ ಕೇಳಿದರೆ ನನಗೂ ನಿನಗೂ ಸಂಬಂಧವಿದೆ ಎಂದು ಊರಲೆಲ್ಲಾ ಪ್ರಚಾರ ಮಾಡುವುದರ ಜೊತೆಗೆ ನಿನ್ನ ಗಂಡನಿಗೂ ಇದೇ ರೀತಿ ಹೇಳುವುದಾಗಿ ಬೆದರಿಕೆ ಹಾಕಿದ್ದ.
ಈ ನಡುವೆ ವಾರಕ್ಕೊಮ್ಮೆ ಮಾತ್ರ ಊರಿಗೆ ಬರುತ್ತಿದ್ದಾತನ ಕಿವಿಗೆ ತನ್ನ ಪತ್ನಿಯ ನಡತೆ ಬಗ್ಗೆ ಅಪಪ್ರಚಾರದ ಮಾತು ಕಿವಿಗೆ ಬೀಳುತ್ತಿದ್ದಂತೆ ಈ ಕುರಿತು ಹೆಂಡತಿಯನ್ನು ಪ್ರಶ್ನಿಸಿದನಲ್ಲದೆ ಇದೇ ವಿಚಾರದ ಬಗ್ಗೆ ಗಂಡ ಹೆಂಡತಿ ನಡುವೆ ಜಗಳ ನಡೆದು ಮನೆಗೆ ಬರುವುದನ್ನೇ ಬಿಟ್ಟಿದ್ದನು.
ಇದರಿಂದ ಮಾನಸಿಕವಾಗಿ ನೊಂದ ಸುನಿತಾ ಗುರುವಾರ ರಾತ್ರಿ ಕೊಠಡಿಯಲ್ಲಿ ಸೀರೆಯೊಂದರ ಎರಡು ತುದಿಯ ಕುಣಿಕೆಗೆ ತನ್ನ ಇಬ್ಬರು ಮಕ್ಕಳನ್ನು ನೇಣಿಗೆ ಬಿಗಿದು ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ನೋಡಿಕೊಂಡಿದ್ದು, ನಂತರ ಮತ್ತೊಂದು ವೇಲ್ನಿಂದ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶವಗಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆಕೆಯ ಡೆತ್ನೋಟ್ ಹಾಗೂ ಮೃತಳ ಸಹೋದರ ಪುಟ್ಟ ಎಂಬಾತ ನೀಡಿದ ದೂರಿನ ಮೇರೆಗೆ ಆಕೆಯ ಬಗ್ಗೆ ಅಪ್ರಚಾರ ನಡೆಸಿದ್ದ ಮೋಹನ ಹಾಗೂ ಪತಿ ಜಗದೀಶನ ವಿರುದ್ದ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.