ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಮಂದಿರವಾಗಿ ಪರಿವರ್ತಿಸಬೇಕು ಎಂದ ಗೋ ಮಧುಸೂದನ್
ಮಂಡ್ಯ, ಜೂನ್ 4: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಮಂದಿರವನ್ನಾಗಿ ಪರಿವರ್ತನೆಯಾಗಬೇಕು, ಅದೇ ಜಾಗದಲ್ಲಿ ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ಮತ್ತೆ ನೆಲೆ ನಿಲ್ಲಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂಧನ್ ಪ್ರತಿಪಾದಿಸಿದ್ದಾರೆ.
ಶನಿವಾರ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾಮೀಯಾ ಮಸೀದಿ ಇರುವ ಜಾಗದಲ್ಲಿ ಈ ಹಿಂದೆ ಶ್ರೀ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಿತ್ತು. ಅದು ಇತಿಹಾಸದ ಸತ್ಯವಾಗಿದ್ದು, ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು. ಟಿಪ್ಪು ಸುಲ್ತಾನ್ ಅದನ್ನು ಮಸೀದಿಯಾಗಿ ಪರಿವರ್ತಿಸಿದನು ಎಂದು ಇತಿಹಾಸಕಾರರೇ ಹೇಳುತ್ತಿದ್ದಾರೆ. ಹೀಗಿರುವಾಗ ಅದನ್ನು ಬಿಟ್ಟುಕೊಡುವಂತೆ ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಲ ಹೆಚ್ಚಾಗಿದೆ; ಸಿ. ಟಿ. ರವಿ
ಮೂಲ ಮಂದಿರವನ್ನು ಬಿಟ್ಟುಕೊಡಲು ಜಾಮೀಯಾ ಮಸೀದಿಯನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನಾತ್ಮಕ ನಡೆಯನ್ನು ಅನುಸರಿಸಬೇಕಾಗುತ್ತದೆ. ಕಾನೂನು ಪ್ರಕಾರವೇ ದೇವಾಲಯವನ್ನು ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಇತಿಹಾಸವನ್ನು ಮರೆಮಾಚಿರುವ ಬಗ್ಗೆ ಬೇಸರ:
ಇದೊಂದೇ ಅಲ್ಲ. ಟಿಪ್ಪು ಅರಮನೆ ಹಿಂಭಾಗ ಪ್ರಾಚೀನ ಕಾಲದ ಈಶ್ವರನ ದೇವಸ್ಥಾನವಿತ್ತು. ಅದರ ಗೋಪುರದಿಂದ ಅರಮನೆ ಒಳಭಾಗ ಕಾಣುತ್ತದೆ ಎಂಬ ಕಾರಣಕ್ಕೆ ಆ ಗೋಪುರವನ್ನು ಒಡೆದು ಹಾಕಲಾಯಿತು. ಅದೇ ರೀತಿ ನಿಮಿಷಾಂಬ ದೇವಾಲಯದ ಹಿಂದೆ ಗೋಸೇಗೌಡರ ಗಲ್ಲಿಯಲ್ಲಿದ್ದ ಪುರಾತನ ಕಾಲದ ದೇವಸ್ಥಾನವನ್ನು ಕೆಡವಿ ಉರ್ದು ಶಾಲೆಯನ್ನಾಗಿ ಮಾಡಿಕೊಳ್ಳಲಾಗಿದೆ. ಇಂತಹ ಇತಿಹಾಸದ ಅನೇಕ ಸತ್ಯಗಳನ್ನು ಮರೆಮಾಚಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಧಾರ್ಮಿಕ ಸ್ಥಳಗಳ ಕಾನೂನುಗಳಿಗೆ ತಿದ್ದುಪಡಿ:
ರಾಜ್ಯಸಭಾ ಚುನಾವಣೆಯ ನಂತರದಲ್ಲಿ 1991ರ ಧಾರ್ಮಿಕ ಸ್ಥಳಗಳ ಕಾನೂನು ಸೇರಿದಂತೆ ಹಲವು ಕಾನೂನುಗಳಲ್ಲಿ ಕೇಂದ್ರ ಸರ್ಕಾರವು ಬದಲಾವಣೆಯನ್ನು ತರಲಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂಧನ್ ಹೇಳಿದರು.
ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಇತಿಹಾಸದ ಘಟನೆಗಳಿಗೆ 70 ವರ್ಷಗಳ ಹಿಂದೆ ಮಾಡಿಕೊಂಡ ಕಾನೂನನ್ನು ಜೋಡಣೆ ಮಾಡಲಾಗುವುದಿಲ್ಲ. ಈ ಧಾರ್ಮಿಕ ಸ್ಥಳಗಳ ಕಾನೂನು ಹಿಂದೆಯೇ ಬದಲಾಗಬೇಕಿತ್ತು. ವಾಜಪೇಯಿ ಅಧಿಕಾರದಲ್ಲಿದ್ದಾಗ ನಮಗೆ ಪೂರ್ಣ ಬಹುಮತವಿರಲಿಲ್ಲ. ಈ ರಾಜ್ಯಸಭಾ ಚುನಾವಣೆ ನಂತರ ಬಹುಮತ ದೊರಕಲಿದ್ದು ಪ್ರಮುಖ ಕಾನೂನುಗಳಿಗೆ ತಿದ್ದುಪಡಿ ತರಲಾಗುವುದು ಎಂದರು.
ಏಕರೂಪ ನಾಗರಿಕ ಸಂಹಿತೆ ಜಾರಿ:
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ, ಜನಸಂಖ್ಯಾ ನಿಯಂತ್ರಣ ಕಾಯ್ದೆಗಳನ್ನು ಜಾರಿಗೊಳಿಸಲಾಗುವುದು. ಆ ಮೂಲಕ ದೇಶದಲ್ಲಿ ಹೊಸ ಬದಲಾವಣೆ ತರುವುದಾಗಿ ಎಂದು ಗೋ ಮಧುಸೂದನ್ ತಿಳಿಸಿದರು. ಕಾಶಿಯ ಜ್ಞಾನವಾಪಿ, ಮಥುರಾ ಸೇರಿದಂತೆ ಒಂದು ಸಾವಿರದಷ್ಟು ದೇವಾಲಯಗಳ ಮೇಲೆ ಮಸೀದಿ ಕಟ್ಟಲಾಗಿದೆ. ಅವೆಲ್ಲವೂ ಹಿಂದುಗಳಿಗೆ ವಾಪಸ್ ದೊರಕಬೇಕು. ಸಾವಿರಾರು ವರ್ಷಗಳ ಹಿಂದೆ ಮುಸ್ಲಿಂ ದಾಳಿಕೋರರು ಹಿಂದುಗಳು ಮತ್ತು ದೇಗುಲಗಳ ಮೇಲೆ ನಡೆಸಿದ ದಾಳಿಯನ್ನು ಮೌನದಿಂದ ಸಹಿಸಿಕೊಳ್ಳಲಾಗುವುದಿಲ್ಲ. ದಾಳಿಕೋರ ಮುಸಲ್ಮಾನ ದೊರೆಗಳ ಮೇಲೆ ಭಾರತೀಯ ಮುಸಲ್ಮಾನರು ವಿಶೇಷ ಪ್ರೀತಿ-ಒಲವು ಏಕೆ ತೋರಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಸುಳ್ಳು ಇತಿಹಾಸ ತಿಳಿಸುವುದು ನ್ಯಾಯಸಮ್ಮತವಲ್ಲ:
ದಾಳಿಕೋರ ಮುಸ್ಲಿಂ ದೊರೆಗಳ ಮನಸ್ಥಿತಿಗಳು ಈ ಮಣ್ಣಿನ ಮಕ್ಕಳ ಸ್ವಾಭಿಮಾನವನ್ನು ತುಳಿಯುವುದಾಗಿತ್ತು ಅದಕ್ಕಾಗಿ ಹಿಂದೂ ಸ್ತ್ರೀಯರ ಮೇಲೆ ಅತ್ಯಾಚಾರ ನಡೆಸಿದರು. ಈ ದೇಗುಲಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸಿದರು. ಈ ಇತಿಹಾಸವನ್ನು ಇತಿಹಾಸವಾಗಿಯೇ ಜನರ ಮುಂದಿಡಬೇಕು. ಅದನ್ನು ಮರೆಮಾಚುವುದರಿಂದ ಸುಳ್ಳು ಇತಿಹಾಸವನ್ನು ತಿಳಿಸಿದಂತಾಗುವುದು. ಅದು ನ್ಯಾಯಯುತವಲ್ಲ ಎಂದು ಪ್ರತಿಪಾದಿಸಿದರು.
ಜೈನ, ಬೌದ್ಧ ಸೇರಿದಂತೆ ಇತರೆ ಧರ್ಮದ ದೇವಾಲಯಗಳ ವಿಷಯದಲ್ಲಿ ಯಾವುದೇ ಗೊಂದಲಗಳೂ ಇಲ್ಲ. ಮಸೀದಿ ಇರುವ ಜಾಗಗಳಲ್ಲೇ ಅನುಮಾನಗಳು, ದೇಗುಲಗಳಿದ್ದ ಕುರುಹುಗಳು ಕಂಡುಬರುತ್ತಿವೆ. ವಾಸ್ತವದಲ್ಲಿ ಅವು ಸತ್ಯವಾಗುತ್ತಿವೆ. ಈ ಸತ್ಯವನ್ನು ಒಪ್ಪಿಕೊಂಡು ಪ್ರಾಚೀನ ದೇವಾಲಯಗಳನ್ನು ಹಿಂದೂಗಳಿಗೆ ನೀಡಬೇಕಲ್ಲವೇ. ಈ ಉದಾರತೆ ಮುಸಲ್ಮಾನರಲ್ಲಿ ಬಂದಾಗ ಸಹಬಾಳ್ವೆ, ಸೌಹಾರ್ದತೆ ಸಾಧ್ಯವಾಗುತ್ತದೆ ಎಂದು ಹೇಳಿದರು.