ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಶಾಸಕನ ಮಗ
ಮಂಡ್ಯ, ಏಪ್ರಿಲ್ 25: ಮಂಡ್ಯ ಜಿಲ್ಲಾ ಪತ್ರಕರ್ತರಿಗೆ ಕೋವಿಡ್ 19 ತಪಾಸಣೆ ಮಾಡುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯ ಶ್ರೀಕಂಠೆಗೌಡ ಮಗ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.
ನಮ್ಮ ಮನೆ ಬಳಿ ಕೋವಿಡ್ 19 ತಪಾಸಣೆ ನಡೆಸಬೇಡಿ ಎಂದು ಮಂಡ್ಯದ ಅಂಬೇಡ್ಕರ್ ಭವನಕ್ಕೆ ಅಲ್ಲಿನ ನಿವಾಸಿಗಳನ್ನು ಕರೆದುಕೊಂಡು ಬಂದು ಆರೋಗ್ಯಾಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಶಾಸಕ ಶ್ರೀಕಂಠೆಗೌಡ ಕೂಡ ಹಾಜರಿದ್ದರು. ಇದನ್ನು ಪ್ರಶ್ನಿಸಲು ಮುಂದಾದ ಪತ್ರಕರ್ತರ ಮೇಲೆ ಶ್ರೀಕಂಠೆಗೌಡ ಮಗ ದರ್ಪ ಮೆರದಿರುವ ಘಟನೆ ಇಂದು ನಡೆದಿದೆ.
ಈ ಕುರಿತು ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಡಿಸಿ ಮತ್ತು ಎಸ್ಪಿ ಗೆ ದೂರು ನೀಡಲಾಗಿದೆ.

ಘಟನೆ ಬಗ್ಗೆ ಮಂಡ್ಯ ಡಿಸಿ ಡಾ.ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, ಕೋವಿಡ್ ಪರೀಕ್ಷೆಗೆ ಒಳಪಡುತ್ತಿದ್ದ ಪತ್ರಕರ್ತರ ಮೇಲೆ ಹಲ್ಲೆ ಮತ್ತು ನಿಂದನೆ ಆಗಿರುವ ಬಗ್ಗೆ ದೂರು ಬಂದಿದೆ. ಹಲ್ಲೆ ಮತ್ತು ನಿಂದನೆ ಬಗ್ಗೆ ವೀಡಿಯೋ ಸಹ ಸಿಕ್ಕಿದೆ. ಸ್ಥಳೀಯ ವಿಧಾನ ಪರಿಷತ್ ಸದಸ್ಯರು ಹಾಗೂ ಅವರ ಬೆಂಬಲಿಗರು ಇದರಲ್ಲಿ ಭಾಗಿ ಆಗಿದ್ದಾರೆ. ಕಾನೂನಾತ್ಮಕವಾಗಿ ನಾವು ಕ್ರಮ ಕೈಗೊಳ್ಳುತ್ತೇವೆ. ಪತ್ರಕರ್ತರು ಕೊರೊನಾ ಸಂದರ್ಭದಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ. ಅವರ ಮೇಲೆ ಹಲ್ಲೆ ಮಾಡುವುದು ತಪ್ಪು. ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.












Click it and Unblock the Notifications