ಶೀಘ್ರವೇ ಮಂಡ್ಯ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ: ಸಚಿವ ನಾರಾಯಣಗೌಡ
ಮಂಡ್ಯ, ನವೆಂಬರ್ 19: ಮಂಡ್ಯದಲ್ಲಿ ಕಬ್ಬಿನ ಬೆಳೆಗಾರರ ಸಮಸ್ಯೆ ಇತ್ಯರ್ಥವಾದ ನಂತರ ಹಾಲಿನ ದರದ ಬಗ್ಗೆಯೂ ಚರ್ಚೆ ಮಾಡಲು ಸಭೆ ನಡೆಸಲಾಗುವುದು. ನಮ್ಮ ಸರ್ಕಾರ ರೈತರ ಪರವಾಗಿದೆ ಆತಂಕ ಪಡುವುದು ಬೇಡ, ದಯವಿಟ್ಟು ಧರಣಿ ಹಿಂಪಡೆದುಕೊಳ್ಳಿ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮನವಿ ಮಾಡಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಳೆದ 13 ದಿನಗಳಿಂದ ರೈತ ಸಂಘದಿಂದ ಅನಿರ್ದಿಷ್ಟಾವ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು. "ಶೇಕಡಾ 100ರಲ್ಲಿ 80ರಷ್ಟಾದಾರೂ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತೇವೆ. ಅದೇ ರೀತಿ ಕಬ್ಬಿನ ದರ ನಿಗದಿ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಿಕೊಡುತ್ತೇವೆ", ಎಂದರು.
ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ
ಶಿವಮೊಗ್ಗ ಉಸ್ತುವಾರಿ ಸಚಿವನಾಗಿದ್ದರೂ ಸಹ ಮಂಡ್ಯ ನನ್ನ ಜನ್ಮ ಭೂಮಿ ಆಗಿದೆ. ಆ ಋಣ ತೀರಿಸಲು ಸಾಧ್ಯವಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ದಯಮಾಡಿ ಪ್ರತಿಭಟನೆ ಹಿಂಪಡೆಯಬೇಕು. ಈಗಾಗಲೇ ಕಟಾವಿಗೆ ಬಂದಿರುವ ಬೆಳೆಯ ಕೆಲಸ ಇರುವುದರಿಂದ ಪ್ರತಿಭಟನೆ ಹಿಂಪಡೆಯಿರಿ. ತಕ್ಷಣವೇ ಮುಖ್ಯಮಂತ್ರಿ ಬಳಿ ಕರೆದುಕೊಂಡು ಹೋಗುತ್ತೇವೆ. ರೈತರು ಇಷ್ಟು ದಿನಗಳ ಕಾಲ ಪ್ರತಿಭಟನೆಯನ್ನು ಮಾಡಿರುವುದಕ್ಕೆ ಮೊದಲು ಕ್ಷಮೆ ಕೇಳುತ್ತೇನೆ. ನವೆಂಬರ್ 20ರಂದು ಬಳ್ಳಾರಿಯಲ್ಲಿ ಮುಖ್ಯಮಂತ್ರಿಗಳು ಸಿಗುತ್ತಾರೆ. ಅಲ್ಲಿ ಶೀಘ್ರವಾಗಿಯೇ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತೆ ಒಂದು ಸಭೆಯ ದಿನಾಂಕವನ್ನು ತಿಳಿಸುತ್ತೇನೆ. ಈ ಸಮಾವೇಶದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡಲಾಗುವುದು. ಇದರ ಜೊತೆಗೆ ಸಿಹಿ ಸುದ್ದಿ ನೀಡಲು ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಮುಖಂಡರಾದ ಚಂದಗಾಲು ಶಿವಣ್ಣ, ನಾಗೇಶ್, ಕೆ.ಆರ್.ಪೇಟೆ ಜಯರಾಂ, ಪುಟ್ಟೇಗೌಡ, ಗೂಳೂರು ರಾಮಕೃಷ್ಣ, ಲಕ್ಷ್ಮಣ್ ಚನ್ನಸಂದ್ರ, ಶಿವಳ್ಳಿ ಚಂದ್ರು, ಸೌಭಾಗ್ಯಮ್ಮ, ಲಕ್ಷ್ಮೀ, ವರಲಕ್ಷ್ಮಿ, ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಂಡ್ಯ: ರೈತರ ಪ್ರತಿಭಟನೆಯಲ್ಲಿ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಭಾಗಿ, ಬೆಂಬಲ ಘೋಷಣೆ