ಮೇಲುಕೋಟೆಯ ಚೆಲುವರಾಯಸ್ವಾಮಿ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಸಂಪನ್ನ
ಮೇಲುಕೋಟೆ, ಜುಲೈ 28: ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿಯ ರೋಹಿಣಿ ನಕ್ಷತ್ರದ ಶುಭ ದಿನವಾದ ಭಾನುವಾರ ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಪವಿತ್ರ ಕಲ್ಯಾಣಿಯಲ್ಲಿ ತೀರ್ಥ ಸ್ನಾನ ನೆರವೇರುವುದರೊಂದಿಗೆ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಸಂಪನ್ನಗೊಂಡಿತು.
ಶ್ರೀದೇವಿ- ಭೂದೇವಿಯರೊಂದಿಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ನೆರವೇರಿದ ನಂತರ ಪವಿತ್ರ ಕಲ್ಯಾಣಿಯ ಗಜೇಂದ್ರ ವರದನ ಸನ್ನಿಧಿಯ ಮುಂಭಾಗ ಸ್ನಪನ ಶೆಲ್ವರಿಗೆ ವೇದಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು. ಆ ನಂತರ ಕಲ್ಯಾಣಿಯಲ್ಲಿ ತೀರ್ಥಸ್ನಾನ, ಪೂಜಾ ಕೈಂಕರ್ಯ ಮುಕ್ತಾಯಗೊಳಿಸಲಾಯಿತು.
ಮೇಲುಕೋಟೆ ಚಲುವನ ದರ್ಶನ ಪಡೆದ ಯಡಿಯೂರಪ್ಪ
ವರಾಹ ಕುಂಡದಲ್ಲಿ ತೀರ್ಥಸ್ನಾನ: ಪ್ರತಿ ಬ್ರಹ್ಮೋತ್ಸವದ ತೀರ್ಥಸ್ನಾನವೂ ಕಲ್ಯಾಣಿಯ ಉತ್ತರ ಭಾಗದಲ್ಲಿ ನೆರವೇರುತ್ತಿತ್ತು. ಇನ್ಫೋಸಿಸ್ ಫೌಂಡೇಷನ್ ನಿಂದ ಕಲ್ಯಾಣಿಯ ಜೀರ್ಣೋದ್ಧಾರ ಮಾಡುತ್ತಿದ್ದು, ಈ ಭಾಗದಲ್ಲಿ ನೀರು ಕಡಿಮೆಯಿದ್ದ ಕಾರಣ ಕಲ್ಯಾಣಿಯ ಪೂರ್ವಭಾಗದ ವರಾಹ ಕುಂಡದಲ್ಲಿ ತೀರ್ಥಸ್ನಾನದ ವಿಧಿ- ವಿಧಾನಗಳನ್ನು ನೆರವೇರಿಸಲಾಯಿತು.
ಭಾನುವಾರ ಸಂಜೆ ಪರಕಾಲ ಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವ ನಂತರ ಪಟ್ಟಾಭಿರಾಮ ತಿರುಕ್ಕುಲ ಉತ್ಸವ ನಡೆಯುವುದರೊಂದಿಗೆ ಮಹೋತ್ಸವ ಸಂಪನ್ನಗೊಂಡಿತು. ರಾಜ್ಯವೂ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.