ಸಿಎಂ ಗ್ರಾಮ ವಾಸ್ತವ್ಯದಿಂದ ಸಾಲಗಾರನಾದ ಮನೆ ಮಾಲೀಕ
Recommended Video
ಮಂಡ್ಯ, ಜೂನ್ 12: ಇನ್ನೇನು ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ದಿನಗಣನೆ ಆರಂಭವಾಗಿದೆ. ಗ್ರಾಮ ವಾಸ್ತವ್ಯವಾದರೆ ಆ ಗ್ರಾಮ ಅಭಿವೃದ್ಧಿಯಾಗುತ್ತದೆ ಎಂಬುದು ಜನರ ನಂಬಿಕೆ. ಆದರೆ ಮಂಡ್ಯದ ಗ್ರಾಮಸ್ಥರೊಬ್ಬರು ಸಿಎಂ ಎಚ್ ಡಿಕೆ ಗ್ರಾಮ ವಾಸ್ತವ್ಯದಿಂದ ಸಾಲಗಾರರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ನವಿಲುಮಾರನಹಳ್ಳಿ ಗ್ರಾಮದ ಮಾಯಿಗೌಡ ಎಂಬುವರಿಂದ ಈ ಆರೋಪ ಕೇಳಿಬಂದಿದೆ. 2006ರ ನವೆಂಬರ್ ನಲ್ಲಿ ನವಿಲುಮಾರನಹಳ್ಳಿಯ ಮಾಯಿಗೌಡರ ಮನೆಯಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಇದಕ್ಕೆ ಪೂರ್ವಭಾವಿಯಾಗಿ ಮನೆ ದುರಸ್ತಿ ನಡೆಸಿ, ಮನೆ ಮುಂದಿನ ಗುಂಡಿ ಮುಚ್ಚಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ರಿಪೇರಿ ನಂತರ ಹಣ ನೀಡುವುದಾಗಿ ಭರವಸೆ ನೀಡಿದ್ದರು.
ಅಧಿಕಾರಿಗಳ ಸೂಚನೆಯಂತೆ, 1.20 ಲಕ್ಷ ರೂಪಾಯಿ ಸಾಲ ಮಾಡಿ ಕಾಮಗಾರಿ ಮಾಡಿಸಿದ್ದ ಮಾಯಿಗೌಡರನ್ನು ಈಗ ಕೇಳುವವರೇ ಇಲ್ಲದಂತಾಗಿದೆ. ವಾಸ್ತವ್ಯ ಮಾಡಿ ಹೋದ ಬಳಿಕ ಯಾವ ಬಿಲ್ ಅನ್ನೂ ಅಧಿಕಾರಿಗಳು ಪಾವತಿಸಿಲ್ಲ. ಈ ಕುರಿತು ಸಚಿವ ಸಿ.ಎಸ್.ಪುಟ್ಟರಾಜು ಬಳಿಯೂ ಹಲವು ಬಾರಿ ಮನವಿ ಮಾಡಿದ್ದೆ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಮನೆ ಮಾಲೀಕ ಮಾಯಿಗೌಡನ ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳ ಭರವಸೆಯಂತೆ ಮಾಯಿಗೌಡ ಅವರು 1.20 ಲಕ್ಷ ರೂ. ಸಾಲ ಮಾಡಿ ಕಾಮಗಾರಿ ಮುಗಿಸಿದ್ದರು. ಇದೇ ವೇಳೆ ಸಾಲದ ಒತ್ತಡ ಜಾಸ್ತಿಯಾಗಿರುವುದರಿಂದ ತನ್ನ ಜಮೀನಿನಲ್ಲಿದ್ದ ಮರಗಳನ್ನು ಮಾರಿ ಸಾಲ ತೀರಿಸಿದ್ದಾರೆ. ಸಿಎಂ ಗ್ರಾಮ ವಾಸ್ತವ್ಯದಿಂದ ಊರು ಅಭಿವೃದ್ಧಿ ಕಂಡಿದೆ. ನಮ್ಮ ಮನೆಯಲ್ಲಿ ಸಿಎಂ ಉಳಿದುಕೊಂಡಿದ್ದಕ್ಕೆ ನಾನು ಸಾಲ ಮಾಡಿಕೊಳ್ಳಬೇಕಾಯಾಯಿತು. ಮುಂದಿನದ್ದು ಈ ರೀತಿ ಆಗದಂತೆ ಸಿಎಂ ಎಚ್ಚರ ವಹಿಸಲಿ ಎನ್ನುತ್ತಾರೆ ಮಾಯಿಗೌಡ.












Click it and Unblock the Notifications