ಮಂಡ್ಯ: ಶೋಕಿಗಾಗಿ ಮೊಬೈಲ್ ಅಂಗಡಿಗೆ ಕನ್ನ: ಮೂವರು ಸೆರೆ
ಮಂಡ್ಯ, ಆಗಸ್ಟ್ 06 : ಓದಿ ಬದುಕು ಕಟ್ಟಿಕೊಳ್ಳುವ ವಯಸ್ಸಿಗೆ ಶೋಕಿಗೆ ಬಿದ್ದು ಮೊಬೈಲ್, ಹಣ ಕಳ್ಳತನ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ಲೀಲಾವತಿ ಬಡಾವಣೆಯ ಸಿ.ಕಿರಣ್ ಅಲಿಯಾಸ್ ಕುಳ್ಳ (19), ಚನ್ನೇಗೌಡ ಬಡಾವಣೆಯ ಸಚಿನ್ ಅಲಿಯಾಸ್ ಚೋರ (18) ಹಾಗೂ ವಿವೇಕಾನಂದ ನಗರ ಬಡಾವಣೆಯ ಗಂಗಾಮತಸ್ಥರ ಬೀದಿಯ ವಿ.ಶಿವರಂಜನ್ ಅಲಿಯಾಸ್ ತರಕಾರಿ (17) ಮೊಬೈಲ್ ಅಂಗಡಿಗೆ ಕನ್ನ ಹಾಕಿ ಸಿಕ್ಕಿಬಿದ್ದವರು.
ಈ ಚಾಲಾಕಿ ಕಳ್ಳರು ಜುಲೈ 16ರಂದು ಹಳೇ ಎಂ.ಸಿ.ರಸ್ತೆಯ ಟಿಎಪಿಸಿಎಂಎಸ್ ವಾಣಿಜ್ಯ ಸಂಕೀರ್ಣದಲ್ಲಿದ್ದ ಮಹಾರಾಜ ಮೊಬೈಲ್ ಸೆಂಟರ್ ಗೆ ಕನ್ನ ಹಾಕಿ ಸುಮಾರು 10 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ಮೊಬೈಲ್ ಹಾಗೂ ಕಾಶ್ ಬಾಕ್ಸ್ ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಿ.ರಾಧಿಕಾ, ಎಎಸ್ಪಿ ಲಾವಣ್ಯ ಹಾಗೂ ಡಿವೈಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಎರಡು ವಿಶೇಷ ತಂಡಗಳನ್ನು ರಚನೆ ಮಾಡಿ ಆರೋಪಿಗಳ ಸೆರೆಗೆ ಬಲೆ ಬೀಸಲಾಗಿತ್ತು.
ಈ ನಡುವೆ ಮದ್ದೂರಿನ ಗೌಡ ಮಟನ್ ಅಂಗಡಿಯ ಬಳಿ ಮೂವರು ಓಡಾಡುತ್ತಿರುವುದು ಕಂಡು ಬಂದಿದೆ. ಇವರನ್ನು ನೋಡಿದ ಮೇಲೆ ಅನುಮಾನ ಬಂದಿದ್ದು, ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಮಹಾರಾಜ ಮೊಬೈಲ್ ಸೆಂಟರ್ ಅಲ್ಲದೆ, ಕೆಮ್ಮಣ್ಣು ನಾಲೆ ಸರ್ಕಲ್ ಬಳಿಯ ಎನ್.ಎಸ್.ಮೊಬೈಲ್ ಅಂಗಡಿಗೂ ತಾವೇ ಕನ್ನ ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ 6 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 49 ಮೊಬೈಲ್ ಹ್ಯಾಂಡ್ ಸೆಟ್ ಹಾಗೂ ಮೂರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಬಳಿಕ ಮದ್ದೂರು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಾಲಾಪರಾಧಿಯಾಗಿರುವ ವಿ.ಶಿವರಂಜನ್ ನನ್ನು ಮಂಡ್ಯ ಬಾಲಮಂದಿರಕ್ಕೆ ಒಪ್ಪಿಸಲಾಗಿದೆ.
ಸಿಪಿಐ ಕೆ.ಪ್ರಭಾಕರ್, ಸಂಚಾರಿ ಠಾಣೆ ಪಿಎಸ್ ಐ ಸಂತೋಷ್, ಕಾನೂನು ಮತ್ತು ಶಿಸ್ತು ವಿಭಾಗದ ಪಿಎಸ್ಐ ಕುಮಾರ್, ಎಎಸ್ ಐ ಗಳಾದ ಬೆಳಗುಳಿ ಮಹದೇವಪ್ಪ, ರಘು ಪ್ರಕಾಶ್, ಮುಖ್ಯ ಪೇದೆ ಕರಿಗಿರಿಗೌಡ, ಅಫೀಜ್ ಪಾಷ, ಸಿಬ್ಬಂದಿ ಶಿವಕುಮಾರ್, ಮಹೇಶ್, ಕುಮಾರಸ್ವಾಮಿ, ವಿಠಲ, ಜಿ.ಕೆ.ಸುಲ್ತಾನ, ಸಿಡಿಆರ್ ವಿಭಾಗದ ರವಿಕಿರಣ್ ಹಾಗೂ ನರಸಿಂಹಮೂರ್ತಿ ಮೊದಲಾದವರು ಕಾರ್ಯಾಚರಣೆಯಲ್ಲಿ ಇದ್ದರು.