ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ವಿವೇಚನೆ ಇಲ್ಲದ ವ್ಯಕ್ತಿ: ಸುಮಲತಾ ಕಿಡಿ
ಮಂಡ್ಯ, ಅಕ್ಟೋಬರ್ 20: ಸಕ್ಕರೆ ನಾಡಿನಲ್ಲಿ ಜೆಡಿಎಸ್ ಶಾಸಕರು ಹಾಗೂ ಸಂಸದೆ ಸುಮಲತಾ ನಡುವಿನ ವಾಕ್ಸಮರಗಳು ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಮೊನ್ನೆ ಮೊನ್ನೆಯಷ್ಟೇ ಕಮಿಷನ್ ಆರೋಪಕ್ಕೆ ಆಣೆ ಪ್ರಮಾಣ ಮಾಡುವ ಚಾಲೆಂಜ್ಗೆ ಸಿದ್ದ ಎಂದು ಹೇಳಿದ್ದ ಸುಮಲತಾ ಮತ್ತೆ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸುಮಲತಾ ಆಣೆ ಪ್ರಮಾಣದ ಚಾಲೆಂಜ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದ ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ, ನಾವು ನಿತ್ಯ ದೇವರ ಪೂಜೆ ಮಾಡುವವರು, ದೆವ್ವದ ಜೊತೆ ಯಾರಾದ್ರೂ ಆಣೆ ಪ್ರಮಾಣಕ್ಕೆ ಹೋಗ್ತಾರಾ? ಸಂಸದೆ ಮಾತು ಕೇಳಿದ್ರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದ ರೀತಿ ಆಗುತ್ತಿದೆ ಎಂದು ತಿರುಗೇಟು ನೀಡಿದ್ದರು.
ಹೊಸಕೋಟೆಯಲ್ಲಿ ಹಳೆ ಕಾಂಗ್ರೆಸಿಗರ ಮುನಿಸು, ರಾಜೀನಾಮೆ!
ಅಲ್ಲದೆ ನಾವು ದೇವರ ಅವರು ಆಣೆ ಪ್ರಮಾಣಕ್ಕೆ ಕರೆದಾಕ್ಷಣ ನಾವು ಹೋಗಲಾಗುವುದಿಲ್ಲ. ಜೊತೆಗೆ ಸುಮಲತಾ ಜತೆಯಲ್ಲಿರುವವರು ಭ್ರಷ್ಟಾತಿಭ್ರಷ್ಟರು. ಮೈಸೂರು ಬೆಂಗಳೂರು ಹೈವೇ ಕಾಮಗಾರಿಯಲ್ಲಿ ನೂರಾರು ಕೋಟಿ ಅಕ್ರಮ ನಡೆದಿದೆ. ಆ ಅಕ್ರಮಗಳಲ್ಲಿ ಸುಮಲತಾ ಬೆಂಬಲಿಗರು ಭಾಗಿಯಾಗಿದ್ದಾರೆ. ರೈತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿರುವ ಜನ. ನೂರಾರು ಎಕರೆಗೆ ನಕಲಿ ದಾಖಲೆ ಸೃಷ್ಟಿಸಿ ಹಣ ಮಾಡಿದ ದೊಡ್ಡ ಗ್ಯಾಂಗ್ ಸಂಸದರ ಸುತ್ತಾ ಇದೆ. ಇವರು ನಮ್ಮ ಶಾಸಕರ ಬಗ್ಗೆ ಮಾತನಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಇನ್ನು ಸುಮಲತಾ ಏಟ್ರಿಯಾ ಹೋಟೆಲ್ಗ ಏಕೆ ಹೋಗಿದ್ದರು? ಹೋಟೆಲ್ನಲ್ಲಿ ಕುಳಿತು ಅವರು ಏನು ಮಾಡಿದರು ಎಂಬುದರ ವಿಡಿಯೋ ದಾಖಲೆಗಳಿವೆ. ಸೂಕ್ತ ಸಂದರ್ಭದಲ್ಲಿ ಆ ವಿಡಿಯೋ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಸುಮಲತಾ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರವೀಂದ್ರ ಕಿಡಿ ಕಾರಿದ್ದರು.
ಏಟ್ರಿಯಾ ಹೋಟೆಲ್ ಮಾಲೀಕರು ಕುಟುಂಬದ ಸ್ನೇಹಿತರು
ಈ ವಿಚಾರವಾಗಿ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಸುಮಲತಾ, ಅವರ ಬಳಿ ಅದ್ಯಾವ ವಿಡಿಯೋ ಇದೆ ಬಿಡುಗಡೆ ಮಾಡಲಿ, ಇಲ್ಲ ಯಾವ ಕ್ಲಿಪ್ ಬೇಕೆಂದು ಹೇಳಿದರೆ ನಾನೇ ಪೆನ್ಡ್ರೈವ್ಗೆ ಹಾಕಿ ಕಳಿಸಿಕೊಡುವುತ್ತೇನೆ. ಏಟ್ರಿಯಾ ಹೋಟೆಲ್ ಮಾಲೀಕರು 40 ವರ್ಷದಿಂದ ನಮ್ಮ ಕುಟುಂಬದ ಸ್ನೇಹಿತರು. ನಾನು ಏಟ್ರಿಯಾ ಹೋಟೆಲ್ಗೆ ದಿನ ಹೋಗುತ್ತೇನೆ ಕೇಳೋರು ಯಾರು. ನಮ್ಮ ಕುಟುಂಬದ ಯಾವುದೇ ಸಮಾರಂಭ ಇರಲಿ ಅದು ಏಟ್ರಿಯಾ ಹೋಟೆಲ್ನಲ್ಲಿ ನಡೆಯುತ್ತದೆ. ಎಷ್ಟು ವಿಡಿಯೋಗಳು ಬೇಕು ನಾನೇ ಕೊಡುತ್ತೀನಿ. ಪೆನ್ಡ್ರೈವ್ ಮೂಲಕ ಕಳಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ದೆವ್ವ ಕರೆದರೆ ಹೋಗಲು ಆಗುತ್ತಾ..?: ಸುಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಕಿಡಿ
ಆಣೆ-ಪ್ರಮಾಣಕ್ಕೆ ಹೋಗಲು ಪ್ರತಿಷ್ಠೆಯಿಲ್ಲ
ನಂತರ ಸುಮಲತಾ ಅಂಬರೀಶ್ ಕರೆದಾಗ ಆಣೆ ಪ್ರಮಾಣಕ್ಕೆ ನಾವ್ಯಾಕೆ ಹೋಗಬೇಕು ಎಂಬ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಕರೆದಾಗ ಬರೋದು ಬೇಕಿಲ್ಲ. ಅವರು ಕರೆದಾಗ ನಾನು ಹೋಗುತ್ತೇನೆ. ಅದರಲ್ಲೇನು ಪ್ರತಿಷ್ಠೆ ಇಲ್ಲ. ಯಾಕಂದ್ರೆ ಸತ್ಯ ಎಲ್ಲಿರುತ್ತೆ ಅಲ್ಲಿ ಭಯ ಇರಲ್ಲ. ಎಲ್ಲಿಗೆ ಕರೆದರು ಬರುವುದಕ್ಕೂ ಸುಮಲತಾ ಅಂಬರೀಶ್ ಸಿದ್ಧರಿದ್ದಾರೆ. ಜೆಡಿಎಸ್ ಶಾಸಕರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸಿಗುತ್ತಿಲ್ಲ ಎಂದು ಕಿಡಿಕಾರಿದರು.
ಜನರೇ ಬುದ್ದಿಕಲಿಸಲಿದ್ದಾರೆ
ಮೈತುಂಬ ದುರಹಂಕಾರ ತುಂಬಿದ್ದಾಗ ವಿವೇಚನೆಗೆ ಜಾಗವೆಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಜನಗಳೇ ಅವರನ್ನ ಸರಿಯಾಗಿ ಬುದ್ದಿ ಕಲಿಸುತ್ತಾರೆ ಅವರು ಯಾವ ವಿಷಯ ಮಾತನಾಡುತ್ತಿದ್ದೇನೆ ಎಂಬುದರ ಅರಿವೇ ಅವರಿಗಿಲ್ಲ. ಜನರ ಕೆಲಸ ಮಾಡದೇ ನನ್ನನ್ನು ಟಾರ್ಗೆಟ್ ಮಾಡೋದೆ ಕೆಲಸ ಅನ್ಕೊಂಡಿದ್ದಾರೆ. ನಾನು ಕರೆಯೋದು, ಅವರು ಕರೆಯೋದು ಬೇಕಿಲ್ಲ. ಜನರೇ ಬುದ್ದಿಕಲಿಸಿ ಟಾಟಾ ಬಾಯ್ ಹೇಳಿ ಮನೆಗೆ ಕಳುಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಕಮಿಷನ್ ಆರೋಪಕ್ಕೆ ಆಣೆ ಪ್ರಮಾಣದ ಚಾಲೆಂಜ್
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಂಸದೆ ಸುಮಲತಾ ಮತ್ತು ಬೆಂಬಲಿಗರು ಕಮಿಷನ್ ಪಡೆದಿದ್ದಾರೆ ಜೆಡಿಎಸ್ ಶಾಸಕರು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸುಮಲತಾ ನಾನು ಯಾವುದೇ ಕಮಿಷನ್ ಪಡೆದಿಲ್ಲ, ಬೇಕಾದರೆ ಮೇಲುಕೋಟೆ ದೇವಾಲಯದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ದ ಎಂದು ಪಂತಾಹ್ವಾನ ನೀಡಿದ್ದರು.