ಮಂಡ್ಯದಲ್ಲಿ ಕಹಳೆ ಊದಿದ ಸುಮಲತಾಗೆ ಬಿಜೆಪಿ, ಕಾಂಗ್ರೆಸ್ ಜೈಕಾರ
ಮಂಡ್ಯ, ಮಾರ್ಚ್ 30 : ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿರುವ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಶುಕ್ರವಾರ ದೊರೆತ ಅಧಿಕೃತ ಚಿಹ್ನೆಯಂತೆ ಕಹಳೆ ಊದುವ ಮೂಲಕ ಕೀಲಾರ ಗ್ರಾಮದಲ್ಲಿ ಅದ್ಧೂರಿ ಪ್ರಚಾರ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶನಿವಾರ ನಡೆದ ಈ ಪ್ರಚಾರ ಕಾರ್ಯಕ್ರಮಕ್ಕೆ ಅಚ್ಚರಿಯೆಂಬಂತೆ, ಪ್ರಥಮ ಬಾರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಬಾವುಟಗಳೊಂದಿಗೆ ಸಾಕ್ಷಿಯಾದರು. ಇನ್ನು ಕೆಲ ಜೆಡಿಎಸ್ ಕಾರ್ಯಕರ್ತರು ಕೂಡ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸುವುದು ಬಾಕಿಯಿದೆ.
ಎಚ್ಡಿಕೆ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ: ಸುಮಲತಾ
ಸುಮಲತಾ ಅವರು ಕೀಲಾರದಲ್ಲಿ ರೋಡ್ ಶೋ ನಡೆಸಿದ ವೇಳೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭ ಸುಮಲತಾ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಷಭೇದ ಮರೆತು ಸುಮಲತಾ ಅವರಿಗೆ ಜೈಕಾರ ಹೇಳುವ ಮೂಲಕ ಗಮನ ಸೆಳೆದರು.
ಪ್ರಚಾರ ಮೆರವಣಿಗೆಯಲ್ಲಿ ನೆರೆದಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸುವ ಮೂಲಕ ಸುಮಲತಾ ಅಂಬರೀಶ್ ಅವರ ಪರವಾಗಿ ಜೈಕಾರ ಕೂಗಿದರು ಮತ್ತು ಕಹಳೆ ಮೊಳಗಿಸಿದರು. ಈ ವೇಳೆ ಪ್ರಚಾರದುದ್ದಕ್ಕೂ ಸುಮಲತಾ ಕಹಳೆ ಹಿಡಿದು ಗಮನ ಸೆಳೆದರು. ಈ ಬೆಳವಣಿಗೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಮತ್ತು ಕುಮಾರಸ್ವಾಮಿ ಅವರಿಗೆ ನಡುಕ ತಂದರೂ ಅಚ್ಚರಿಯಿಲ್ಲ.
ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?
ಮತವನ್ನು ಯಾಚಿಸಿ ಮಾತನಾಡಿದ ಸುಮಲತಾ ಅವರು, ನನಗೆ ಯಾರ ಅನುಕಂಪವೂ ಬೇಡ, ಆದರೆ ಜನರ ಪ್ರೀತಿ ಬೇಕು. ಅಂಬರೀಶ್ ಅಗಲಿದ ನಂತರ ಆ ನೋವನ್ನು ಕಳೆದುಕೊಳ್ಳಲು ನಾನು ಜನರ ಮುಂದೆ ನಿಂತಿರುವುದಾಗಿ ಭಾವುಕರಾಗಿ ನುಡಿದರು. ಸುಮಲತಾ ಅವರ ಪ್ರತಿ ನುಡಿಗೂ ಚಪ್ಪಾಳೆಗಳು ಬೀಳುತ್ತಿದ್ದವು.
ನನಗೆ ನೋವಾದಾಗ ನನ್ನ ಜೊತೆಗಿದ್ದ ಮಂಡ್ಯದ ಜನರನ್ನು ನಾನು ಎಂದೂ ಮರೆಯುವುದಿಲ್ಲ ಎಂದಲ್ಲರದೆ, ಕುರ್ಚಿಗೆ ಗೌರವ ಕೊಡದೆ, ಮಹಿಳೆ ಎನ್ನುವುದನ್ನು ನೋಡದೆ ಮುಖ್ಯಮಂತ್ರಿ, ಸಚಿವರು ಮಾತನಾಡ್ತಿದ್ದಾರೆ. ನನ್ನ ಮುಖದಲ್ಲಿ ನೋವಿಲ್ಲ ಅಂತಾರೆ. ನಾನು ನೋವು ಮರೆಯಲು ಜನರ ಮುಂದೆ ಬಂದಿರುವುದಾಗಿ ಕುಮಾರಸ್ವಾಮಿ ಮತ್ತು ರೇವಣ್ಣ ಅವರಿಗೆ ಸುಮಲತಾ ಟಾಂಗ್ ನೀಡಿದರು.
ರಾಜಕೀಯಕ್ಕೆ ಬರಲು ಪ್ರಮುಖ ಕಾರಣ ಕಾಂಗ್ರೆಸ್ ಕಾರ್ಯಕರ್ತರು:ಸುಮಲತಾ ಸಂದರ್ಶನ
ಕಾಂಗ್ರೆಸ್ ಕಾರ್ಯಕರ್ತರು ಬಾವುಟ ಹಿಡಿದು ನನ್ನ ಮುಂದೆ ಬಂದಿದ್ದಾರೆ. ರೈತ ಸಂಘ, ಕಾಂಗ್ರೆಸ್, ಬಿಜೆಪಿ ಮೂರು ಶಕ್ತಿ ನನ್ನ ಜೊತೆ ಇದೆ. ಇಂತಹ ಬೆಂಬಲ ದೇಶದಲ್ಲಿ ಯಾರಿಗೆ ಸಿಕ್ಕಿದೆ ಹೇಳಿ ಎಂದು ಸುಮಲತಾ ಪ್ರಶ್ನಿಸಿದರು.
ಅಂಬರೀಷ್ ಇಲ್ಲ ನಾನು ಸ್ಪರ್ಧೆ ಮಾಡಿದ್ದೇನೆ ಎನ್ನುವ ಒಂದು ಕಾರಣಕ್ಕೆ ನನ್ನ ಬಗ್ಗೆ ಮಾತನಾಡ್ತಾರೆ. ಅದಕ್ಕೆ ಜನರೇ ಉತ್ತರ ಕೊಡುತ್ತಾರೆ. ನನ್ನ ಹೆರಿನಲ್ಲಿ ಮೂರು ಮಹಿಳೆಯರನ್ನು ಅಭ್ಯರ್ಥಿ ಹಾಕಿದ್ದಾರೆ. ಇನ್ನು ಏನೇನು ಕುತಂತ್ರ ಮಾಡುತ್ತಾರೋ ಮಾಡಲಿ. ಆದರೆ ಯಾವುದಕ್ಕೂ ನಾನು ಬಗ್ಗುವುದಿಲ್ಲ ಎಂದು ಹೇಳಿದರು.