ಮಂಡ್ಯ ಎಕ್ಸಿಟ್ ಪೋಲ್: 4 ರಲ್ಲಿ ಸುಮಲತಾ, 6 ರಲ್ಲಿ ನಿಖಿಲ್ ಗೆಲುವು!
Recommended Video
ಮಂಡ್ಯ, ಮೇ 20: ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಭಾನುವಾರ ಸಂಜೆ ಪ್ರಕಟಗೊಂಡಿದ್ದು, ಬಹುಪಾಲು ಸಮೀಕ್ಷೆಗಳು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ತೋರಿಸಿಕೊಟ್ಟಿವೆ.
ಆದರೆ ಇಡೀ ದೇಶದ ಕುತೂಹಲ ಕೆರಳಿಸಿರುವ ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶದ ಬಗ್ಗೆ ಮಾತ್ರ ಇದುವರೆಗೂ ಸ್ಪಷ್ಟ ಚಿತ್ರಣ ದೊರೆತಿಲ್ಲ. ಒಟ್ಟು 10 ಸಮೀಕ್ಷೆಗಳಲ್ಲಿ 4 ಸಮೀಕ್ಷೆಗಳು ಪಕ್ಷೇತರ ಅಭ್ಯರ್ಥಿ ಅಂದರೆ ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸಬಹುದು ಎಂದಿದ್ದರೆ, 6 ಸಮೀಕ್ಷೆಗಳು ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಬಹುದು ಎಂದಿವೆ.
ಆದರೂ ಮಂಡ್ಯ ಕ್ಷೇತ್ರದ ಬಗ್ಗೆ ಯಾವ ಸಮೀಕ್ಷೆಗಳಿಗೂ ಕರಾರುವಾಕ್ಕಾದ ಫಲಿತಾಂಶ ನೀಡಲು ಸಾಧ್ಯವಾಗಿಲ್ಲ. ಈ ಕ್ಷೇತ್ರದಲ್ಲಿ ಏನಾಗಬಹುದು ಎಂಬುದನ್ನು ಊಹಿಸುವುದು ರಾಜಕೀಯ ಪಂಡಿತರಿಗೂ ಕಷ್ಟವೆನ್ನಿಸಿದ್ದು, ಯಾವುದೇ ಅಭ್ಯರ್ಥಿ ಗೆದ್ದರೂ ಕೆಲವು ನೂರು ಮತಗಳಷ್ಟು ಕಡಿಮೆ ಅಂತರದಿಂದ ಗೆಲುವು ಸಾಧಿಸಬಹುದು ಎನ್ನಲಾಗಿದೆ.

ಸುಮಲತಾಗೆ ಗೆಲುವು ಎಂದ ನಾಲ್ಕು ಸಮೀಕ್ಷೆ
ಆಜ್ ತಕ್ ಮೈ ಇಂಡಿಯಾ, ಸಿವೋಟರ್- ಎಬಿಪಿ ನ್ಯೂಸ್, ನೈಲ್ಸನ್ ಮತ್ತು ರಿಪಬ್ಲಿಕ್ ಟಿವಿ ಜನ್ ಕಿ ಮಾತ್ ಸಮೀಕ್ಷೆಗಳು ಸುಮಲತಾ ಮಂಡ್ಯದಲ್ಲಿ ಗೆಲ್ಲಬಹುದು ಎಂದಿವೆ.

ಆರರಲ್ಲಿ ನಿಖಿಲ್ ಗೆಲುವು
ಚಾಣಕ್ಯ, ಟೈಮ್ಸ್ ನೌ, ನ್ಯೂಸ್-18-IPSOS ಮತ್ತು ಇಂಡಿಯಾ ಟುಡೆ-ಸಿಎನ್ ಎಕ್ಸ್ ಸೇರಿದಂತೆ ಆರು ಸಮೀಕ್ಷೆಗಳು ನಿಖಿಲ್ ಕುಮಾರಸ್ವಾಮಿ ಗೆಲ್ಲಲಿದ್ದಾರೆ ಎಂದಿವೆ.

ಕುಮಾರಸ್ವಾಮಿ ರಾಜಕೀಯ ಭವಿಷ್ಯ
ಮಂಡ್ಯ ಫಲಿತಾಂಶದ ಮೇಲೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವೇ ಅಡಗಿದೆ. ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಬೇರೆಲ್ಲೂ ಪ್ರಚಾರಕ್ಕೆ ತೆರಳದೆ ಮಂಡ್ಯದಲ್ಲೇ ಠಿಕಾಣಿ ಹೂಡಿದ್ದರು. ಕಾಂಗ್ರೆಸ್ ನ ಹಲವು ನಾಯಕರ ನಿಷ್ಠುರ ಕಟ್ಟಿಕೊಂಡೂ, ಮಗನಿಗೆ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿದ್ದರು.

ನಿಖಿಲ್ ಸೋಲಿಗೆ ಕಾಂಗ್ರೆಸ್ಸಿಗರಿಂದಲೇ ಬೆಂಬಲ
ಮಂಡ್ಯದಲ್ಲಿ ನಿಖಿಲ್ ಅವರನ್ನು ಸೋಲಿಸಿ, ಸುಮಲತಾ ಅವರನ್ನು ಗೆಲ್ಲಿಸಲು ಕೆಲವು ಕಾಂಗ್ರೆಸ್ ಕಾರ್ಯಕರ್ತರೇ ಪಣತೊಟ್ಟಿದ್ದರು ಎಂಬ ಬಗ್ಗೆಯೂ ವದಂತಿ ಹಬ್ಬಿತ್ತು. ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಅವರ ಮೇಲೆ ಅಂಥ ಆರೋಪ ಕೇಳಿಬಂದಿತ್ತು. ಜೊತೆಗೆ ಸುಮಲತಾ ಅವರಿಗೆ ಬಿಜೆಪಿಯೂ ಬೆಂಬಲ ಸೂಚಿಸಿ, ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರಲಿಲ್ಲ.












Click it and Unblock the Notifications