ಶ್ರೀರಂಗಪಟ್ಟಣ ದಸರಾದಲ್ಲಿ ಸ್ಥಳೀಯ ಕಲಾವಿದರಿಗಿಲ್ಲ ಮಣೆ, ಹೊರಗಿನವರಿಗೇ ಮನ್ನಣೆ
ಮಂಡ್ಯ, ಸೆ.30: ಮೇಲೆಲ್ಲಾ ಥಳಕು, ಒಳಗೆಲ್ಲಾ ಹುಳುಕು ಎಂಬ ಮಾತಿನಂತೆ ಶ್ರೀರಂಗಪಟ್ಟಣ ದಸರಾ ಹೆಸರಿಗಷ್ಟೇ ಅದ್ಧೂರಿತನದಿಂದ ಕೂಡಿದ್ದು, ಒಳಹೊಕ್ಕಿ ನೋಡಿದರೆ ಸ್ಥಳೀಯ ಕಲಾವಿದರಿಗೆ ಗೌರವಧನ ಕೊಡುವುದಕ್ಕೂ ಜಿಲ್ಲಾಡಳಿತದ ಬಳಿ ಹಣವೇ ಇಲ್ಲ.
ಸರ್ಕಾರದಿಂದ ಬಿಡುಗಡೆಯಾಗಿರುವ ಅಲ್ಪ ಸ್ವಲ್ಪ ಅನುದಾನ, ಇತರೆ ಮೂಲಗಳಿಂದ ಸಂಗ್ರಹಿಸಿದ ಹಣದಿಂದ ಅದ್ಧೂರಿ ದಸರಾ ಎಂದು ಶಹಬ್ಬಾಸ್ಗಿರಿ ಗಿಟ್ಟಿಸಿಕೊಂಡಿರುವ ಅಧಿಕಾರಿಗಳು ಇದೀಗ ಕಲಾವಿದರಿಗೆ ಕೊಡುವುದಕ್ಕೆ ಹಣವಿಲ್ಲದೆ ಪೇಚಾಡುತ್ತಿದ್ದಾರೆ. ವೇದಿಕೆ ಕಾರ್ಯಕ್ರಮ ಕೊಟ್ಟ ಕಲಾವಿದರು ಹಣವಿಲ್ಲದೆ ಬರಿಗೈಲಿ ವಾಪಸ್ ತೆರಳುತ್ತಿದ್ದು, ಅಧಿಕಾರಿಗಳ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೀಪಾಲಂಕಾರವಿಲ್ಲದೆ ಬಿಕೋ ಎನ್ನುತ್ತಿರುವ ಶ್ರೀರಂಗಪಟ್ಟಣ: ಜನರ ಆಕ್ರೋಶ
ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ಥಳೀಯವಾಗಿ ಹತ್ತಾರು ಕಲಾತಂಡಗಳು ಭಾಗವಹಿಸಿದ್ದವಲ್ಲದೆ, ಶ್ರೀರಂಗ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಸಾಕಷ್ಟು ಸ್ಥಳೀಯ ಕಲಾವಿದರು ಪ್ರದರ್ಶನ ನೀಡುತ್ತಿದ್ದಾರೆ. 2018 ರ ವರೆಗೆ ಶ್ರೀರಂಗಪಟ್ಟಣ ದಸರಾದಲ್ಲಿ ವೇದಿಕೆ ಕಾರ್ಯಕ್ರಮ ಕೊಟ್ಟ ಬಳಿಕ ಅಲ್ಲೇ ಕಲಾವಿದರನ್ನು ಗೌರವಿಸಿ ಗೌರವಧನದ ಚೆಕ್ ನೀಡುತ್ತಿದ್ದರು.
ಗೌರವಧನ ಪಡೆಯಲು ಕಚೇರಿಗೆ ಅಲೆಯಬೇಕಾದ ಸ್ಥಿತಿ!
2019 ರಿಂದ ಕಲಾವಿದರಿಗೆ ನೀಡುವ ಗೌರವಧನವನ್ನು ವಿಳಂಬವಾಗಿ ಕೊಡುವುದಕ್ಕೆ ಶುರು ಮಾಡಿದರು. ದಸರಾ ಮುಗಿದು ಮೂರ್ನಾಲ್ಕು ತಿಂಗಳ ಬಳಿಕ ಕಲಾವಿದರಿಗೆ ಚೆಕ್ ನೀಡುತ್ತಿದ್ದರು. ಈ ಅಲ್ಪ ಹಣ ಪಡೆಯುವುದಕ್ಕಾಗಿ ಕಚೇರಿಗೆ ಅಲೆದೂ ಅಲೆದೂ ಸುಸ್ತಾಗುತ್ತಿದ್ದರು. ದಾಖಲೆಗಳನ್ನು ಕೇಳಿ ಕಲಾವಿದರನ್ನು ಸುಖಾಸುಮ್ಮನೆ ಅಲೆದಾಡಿಸುತ್ತಿದ್ದರು.
2020 ಮತ್ತು 2021ರಲ್ಲಿ ಕೊರೋನಾ ಕಾರಣದಿಂದ ಶ್ರೀರಂಗಪಟ್ಟಣ ದಸರಾ ಸರಳವಾಗಿ ನಡೆಯಿತು. ಈಗ ಕೊರೋನಾ ಮರೆಯಾಗಿ ಅದ್ಧೂರಿಯಾಗಿ ಜಿಲ್ಲಾಡಳಿತ ಅದ್ಧೂರಿಯಾಗಿ ದಸರಾ ಆಚರಿಸುತ್ತಿದ್ದರೂ ಕಲಾವಿದರಿಗೆ ಕೊಡುವುದಕ್ಕೆ ಹಣವಿಲ್ಲ ಎಂದ ಮೇಲೆ ಇದೆಂಥಾ ಅದ್ಧೂರಿ ದಸರಾ ಎನ್ನುವುದು ಕಲಾವಿದರ ಪ್ರಶ್ನೆಯಾಗಿದೆ.
ಕಲೆ, ಕಲಾವಿದರನ್ನು ಗೌರವಿಸುವುದು ಅಧಿಕಾರಿಗಳಿಗೆ ಗೊತ್ತಿಲ್ಲ!
ಗೌರವಧನ ವಿಚಾರವಾಗಿ ಕಲಾವಿದರು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಸರ್ಕಾರದಿಂದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಸ್ವಲ್ಪ ಹಣವನ್ನಷ್ಟೇ ಬಿಡುಗಡೆ ಮಾಡಿದೆ. ಪೂರ್ಣ ಹಣ ಬಿಡುಗಡೆ ಮಾಡಿದಾಗ ಸಂಭಾವನೆ ನೀಡುವುದಾಗಿ ಉತ್ತರ ನೀಡುತ್ತಿದ್ದಾರೆ ಎಂದು ಪ್ರದರ್ಶನ ನೀಡಿದ ಕಲಾವಿದರು ತಿಳಿಸಿದರು.
ಸ್ಥಳೀಯ ಕಲಾತಂಡಗಳು ನೀಡುವ ಪ್ರದರ್ಶನಕ್ಕೆ ಗೌರವಧನ ರೂಪದಲ್ಲಿ ಜಿಲ್ಲಾಡಳಿತ ನೀಡುವುದೇ 5 ಸಾವಿರ ರೂಪಾಯಿ. ಆ ಹಣವನ್ನು ನೀಡುವುದಕ್ಕೂ ಸತಾಯಿಸುತ್ತಿದ್ದಾರೆ. ಒಂದು ತಂಡ ಎಂದ ಮೇಲೆ ಆರೇಳು ಜನರಿರುತ್ತಾರೆ. ಇವರು ಕೊಡುವ ಹಣ ಊಟ-ತಿಂಡಿಗೂ ಸಾಲುವುದಿಲ್ಲ. ಅದನ್ನು ಪಡೆಯುವುದಕ್ಕೂ ತಿಂಗಳಾನುಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ನಮ್ಮದಾಗಿದೆ. ಹೀಗಾಗಿ ನಾವು ಕರೆದುಕೊಂಡು ಬಂದಿರುವ ಕಲಾವಿದರಿಗೆ ಸಾಲ ಮಾಡಿ ಹಣ ಕೊಡಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಕಲಾವಿದರನ್ನು ಗೌರವದಿಂದ ನಡೆಸಿಕೊಳ್ಳುವ, ಕಲೆಯನ್ನು ಗೌರವಿಸುವ ಮನೋಭಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಇಲ್ಲದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಕಲಾವಿದರಿಗೆ ಅಲ್ಪ ಗೌರವಧನ, ಕಡೆಗಣನೆ
ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಆಗಮಿಸುವಂತಹ ಕಲಾತಂಡಗಳಿಗೆ ಪ್ರಾಯೋಜಿತ ಸಂಭಾವನೆ ನೀಡಿದರೆ, ದೊಡ್ಡ ದೊಡ್ಡ ಗಾಯಕರು, ಹಾಡುಗಾರರು, ನೃತ್ಯ ಕಲಾವಿದರು, ಚಿತ್ರ ನಟ-ನಟಿಯರು ಸೇರಿದಂತೆ ಖ್ಯಾತ ಕಲಾವಿದರು ಖಾಸಗಿ ಏಜೆನ್ಸಿಗಳ ಮೂಲಕ ದಸರಾದಲ್ಲಿ ಒಂದೆರಡು ಗಂಟೆ ಕಾರ್ಯಕ್ರಮ ನೀಡಿ ಹೋಗುತ್ತಾರೆ. ಅವರಿಗೆಲ್ಲಾ ಲಕ್ಷಾಂತರ ರೂಪಾಯಿ ಹಣವನ್ನು ನೀಡುವ ಜಿಲ್ಲಾಡಳಿತ ಸ್ಥಳೀಯ ಕಲಾವಿದರಿಗೆ ನೀಡುವ ಸಂಭಾವನೆಯನ್ನು ಹೆಚ್ಚಿಸದೆ ಅವರನ್ನು ಕಡೆಗಣಿಸುತ್ತಿದೆ ಎಂದು ಕಲಾವಿದರು ಬೇಸರದಿಂದ ಹೇಳಿದ್ದಾರೆ.
ಶ್ರೀರಂಗಪಟ್ಟಣ ದಸರಾಗೆ ಆಹ್ವಾನ ನೀಡುವ ಸಮಯದಲ್ಲೂ ಕಲಾವಿದರನ್ನು ಗೌರವಪೂರ್ವಕವಾಗಿ ಆಹ್ವಾನಿಸುವುದಿಲ್ಲ. ನಾಳೆ ನಿಮ್ಮ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿದೆ. ನಿಮಗೆ ಕೊಡುವ ಸಂಭಾವನೆ 5 ಸಾವಿರ ರೂ. ಅದನ್ನು ವೇದಿಕೆಯಲ್ಲೇ ಕೊಡುವುದಿಲ್ಲ. ಸ್ವಲ್ಪ ತಡವಾಗಿ ನೀಡುತ್ತೇವೆ. ಬರ್ತೀರಾ. ಇಲ್ಲವಾ... ಹೇಳಿ. ನೀವು ಬರುತ್ತೀರಿ ಎಂದರೆ ನಾವು ಟಿಕ್ ಹಾಕಿಕೊಳ್ಳುತ್ತೇವೆ ಎಂದು ಕಾಟಾಚಾರಕ್ಕೆ ಕಲಾವಿದರನ್ನು ಕರೆಯುವಂತೆ ಕರೆಯುತ್ತಾರೆ. ಕಲಾವಿದರಿಗೆ ವಿಧಿ ಇಲ್ಲ. ಯಾವುದೇ ಕಾರ್ಯಕ್ರಮಗಳಿಲ್ಲದೆ ಖಾಲಿ ಕುಳಿತಿರುವ ಬದಲು ದಸರಾದಲ್ಲಿ ಕಾರ್ಯಕ್ರಮದಲ್ಲಾದರೂ ಪ್ರದರ್ಶನ ಕೊಟ್ಟು ಕಾಸು ನೋಡೋಣವೆಂದರೆ ಅಲ್ಲೂ ಖಾಲಿ ಕೈ ಎಂದು ನಿರಾಸೆಯಿಂದ ಬೇಸರ ಹೊರಹಾಕಿದ್ದಾರೆ.
ಸರ್ಕಾರದಿಂದ ಹಣ ಬಂದ ಮೇಲೆ ಗೌರವಧನ ನೀಡಲಾಗುತ್ತದೆ
"ಸ್ಥಳೀಯ ಕಲಾವಿದರನ್ನು ಕಡೆಗಣಿಸುವ ಮಾತೇ ಇಲ್ಲ. ಸಂಭಾವನೆ ಬಗ್ಗೆ ತಹಸೀಲ್ದಾರ್ ಜೊತೆ ಮಾತನಾಡಿದೆ. ಪ್ರತಿ ವರ್ಷವೂ ಸರ್ಕಾರದಿಂದ ಹಣ ಬಂದ ಮೇಲೆ ಗೌರವಧನ ನೀಡಲಾಗುತ್ತಿದೆ. ಅದೇ ರೀತಿ ಈ ಬಾರಿಯೂ ನೀಡಲಾಗುವುದು ಎಂದಿದ್ದಾರೆ. ಏಜೆನ್ಸಿ ಮೂಲಕ ಹಾಗೂ ಹೊರಗಿನಿಂದ ಬಂದಿರುವ ದೊಡ್ಡ ಕಲಾವಿದರಿಗೂ ಈಗಲೇ ಹಣ ಕೊಟ್ಟಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿದ ಬಳಿಕವೇ ಅವರಿಗೂ ಸಂಭಾವನೆ ನೀಡಲಾಗುತ್ತದೆ" ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.