ಮಳವಳ್ಳಿ ಅತ್ಯಾಚಾರ: ಅನಧಿಕೃತವಾಗಿ ಟ್ಯೂಶನ್ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಡಿಡಿಪಿಐ ಎಚ್ಚರಿಕೆ
ಮಂಡ್ಯ, ಅಕ್ಟೋಬರ್ 19: ಮಳವಳ್ಳಿಯಲ್ಲಿ ಟ್ಯೂಶನ್ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದ ಶಿಕ್ಷಕನೇ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿ ಹತ್ಯೆ ಮಾಡಿದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದ ಬೆನ್ನಲ್ಲೆ ಎಚ್ಚೆತ್ತುಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಾದ್ಯಂತ ಇರುವ ಅನಧಿಕೃತ ಟ್ಯೂಶನ್ ಸೆಂಟರ್ಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಮುಚ್ಚಲು ಆದೇಶ ನೀಡಿದೆ.
ಮಂಡ್ಯ ಡಿಡಿಪಿಐ ಜವರೇಗೌಡರು ಈ ಬಗ್ಗೆ ಎಲ್ಲಾ ತಾಲೂಕು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಅನಧಿಕೃತ ಟ್ಯೂಶನ್ ಸೆಂಟರ್ಗಳನ್ನು ಬಂದ್ ಮಾಡಬೇಕು, ಸರಕಾರಿ, ಅನುದಾನ, ಅನುಧಾನ ರಹಿತ ಶಿಕ್ಷಕರು ಅನುಮತಿಯಿಲ್ಲದೆ ಟ್ಯೂಶನ್ ಮಾಡುತ್ತಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ಮಳ್ಳವಳ್ಳಿಯಲ್ಲಿ ಅತ್ಯಾಚಾರ; ಮೃತೆ ಬಾಲಕಿ ಕುಟುಂಬಕ್ಕೆ ಜಮೀರ್ 5 ಲಕ್ಷ ನೆರವು
ಒಂದು ವೇಳೆ ಅನುಮತಿ ಪಡೆಯದೇ ಟ್ಯೂಶನ್ ನಡೆಸುತ್ತಿದ್ದರೆ ಅಂತಹ ಸೆಂಟರ್ಗಳನ್ನು ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ. ಇನ್ನು ಬಿಇಒ ನೀಡಿದ ವರದಿ ಆಧರಿಸಿ ಮಳವಳ್ಳಿಯಲ್ಲಿ ಅತ್ಯಾಚಾರ ನಡೆದಿದ್ದ ಟ್ಯೂಶನ್ ಸೆಂಟರ್ಅನ್ನು ರದ್ದು ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಟ್ಯೂಶನ್ ಸೆಂಟರ್ಗಳನ್ನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅತ್ಯಾಚಾರ ಮಾಡಿದ್ದು ಶಿಕ್ಷಕನಲ್ಲ
ಮಳವಳ್ಳಿಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದ ಹತ್ಯೆ ಮಾಡಿದ್ದ ಆರೋಪಿ ಯಾವುದೇ ಅನುದಾನಿತ ಅಥವಾ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿರಲಿಲ್ಲ. ಆತ ಟ್ಯೂಶನ್ ಸೆಂಟರ್ನಲ್ಲಿ ವ್ಯವಸ್ಥಾಪಕನಾಗಿದ್ದ, ಆತನಿಂದ ಈ ಕೃತ್ಯ ನಡೆಸಿದ್ದಾನೆ. ಈಗಾಗಲೆ ಆ ಟ್ಯೂಶನ್ ಸೆಂಟರ್ಅನ್ನು ರದ್ದುಗೊಳಿಸಲಾಗಿದೆ ಎಂದು ಜವರೇಗೌಡರು ಮಾಹಿತಿ ನೀಡಿದರು.
ಟ್ಯೂಶನ್ ಸೆಂಟರ್ ಲೈಸೆನ್ಸ್ ಕಡ್ಡಾಯ
ಜಿಲ್ಲೆಯಲ್ಲಿ ಅಧಿಕೃತ ಟ್ಯೂಶನ್ ಮಾಡಬೇಕೆಂದರೆ, ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾಯ್ದೆಯ ಪ್ರಕಾರ 5 ಸಾವಿರ ಠೇವಣಿ ಕಟ್ಟಿ ನೋಂದಣಿ ಮಾಡಿಕೊಳ್ಳಬೇಕು. 1 ಲಕ್ಷ ಭದ್ರತಾ ಠೇವಣಿಯನ್ನು ಇಟ್ಟಿರಬೇಕು. ಇದರ ಜೊತೆಗೆ ಟ್ಯೂಶನ್ ಮಾಡುವ ಸ್ಥಳದಲ್ಲಿ ಎಲ್ಲಾ ಮೂಲಭೂತ ಸೌಲಭ್ಯ, ಸಿಸಿ ಟಿವಿ ಕ್ಯಾಮೆರಾ, ಗಾಳಿ-ಬೆಳಕು ಇರುವ ಕಟ್ಟಡ, ಅರ್ಹ ಶಿಕ್ಷಕರ ಹಾಗೂ ಅವರು ಪಾಠ ಮಾಡುವ ಸಿಲಬಸ್ಗಳ ಸಂಪೂರ್ಣ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಿ ಅನುಮತಿ ಮಾಡಬೇಕೆಂದು ಡಿಡಿಪಿಐ ಮಾಹಿತಿ ನೀಡಿದರು.
ಅನಧಿಕೃತ ಟ್ಯೂಶನ್ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ
ಮಳವಳ್ಳಿಯಲ್ಲಿ ಅಹಿತಕರ ಘಟನೆ ನಡೆದಿರುವ ಹಿನ್ನೆಲೆ ನಮ್ಮ ಜಿಲ್ಲೆಯಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲು ಇನ್ನೆರಡು ವಾರಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಅನಧಿಕೃತ ಟ್ಯೂಶನ್ ಸೆಂಟರ್ಗಳನ್ನು ಪತ್ತೆ ಹಚ್ಚಿ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಜವರೇಗೌಡ ತಿಳಿಸಿದ್ದಾರೆ.
ಸಿಎಂ ಪರಿಹಾರ ನಿಧಿಯಿಂದ ಪರಿಹಾರ
ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದ ಸಂತ್ರಸ್ತ ಬಾಲಕಿ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂಗಳನ್ನು ಪರಿಹಾರ ಮಂಜೂರು ಮಾಡಲಾಗಿತ್ತು. ಈ ಚೆಕ್ಅನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮೃತ ಬಾಲಕಿ ಕುಟುಂಬಕ್ಕೆ ಹಸ್ತಾಂತರಿಸಿ ಸಾಂತ್ವನ ಹೇಳಿದರು.
ಇನ್ನು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಕೂಡ ಬಾಲಕಿ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಲ್ಲದೆ 5 ಲಕ್ಷ ರೂಗಳನ್ನು ನೀಡಿದ್ದಾರೆ.
ಕಮಿಷನ್ ಆರೋಪ; ಜೆಡಿಎಸ್ ಶಾಸಕರಿಗೆ ಆಣೆ ಪ್ರಮಾಣ ಮಾಡಲು ಸುಮಲತಾ ಪಂಥಾಹ್ವಾನ