ಮಂಡ್ಯ: ಹೆತ್ತ ತಾಯಿಯನ್ನೇ ಗೃಹಬಂಧನಕ್ಕೆ ದೂಡಿದ ನಿರ್ದಯಿ ಪುತ್ರಿ!
ಮಂಡ್ಯ, ಫೆಬ್ರವರಿ 26: ಮಹಿಳೆಯೊಬ್ಬಳು ತನ್ನ ಗಂಡನ ಸಹಕಾರದೊಂದಿಗೆ ವೃದ್ಧ ತಾಯಿ ಮತ್ತು ತಂಗಿಯಿದ್ದ ಮನೆಯನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ. ಅದು ಸಾಧ್ಯವಾಗದೆ ಇದ್ದಾಗ ಅವರಿಬ್ಬರನ್ನು ಗೃಹಬಂಧನದಲ್ಲಿರಿಸಿ ಮಾನಸಿಕ ಹಿಂಸೆ ನೀಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಗೀತಾ ಮತ್ತು ನಾಗರಾಜು ಎಂಬುವರೇ ತಾಯಿಯನ್ನು ಗೃಹಬಂಧನದಲ್ಲಿರಿಸಿದ್ದ ಆರೋಪಿಗಳು. ಸದ್ಯ ಪ್ರಕರಣ ಸ್ಥಳೀಯರಿಂದ ಬೆಳಕಿಗೆ ಬಂದ ಪರಿಣಾಮ ಪೊಲೀಸರ ಸಹಕಾರದಿಂದ ತಾಯಿ ಸುನಂದಮ್ಮ ಮತ್ತು ಬುದ್ದಿಮಾಂದ್ಯ ಮಗಳು ರಮ್ಯಾಳನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ.
ಛಿ, ಇಂಥ ಕಟುಕ ಮಕ್ಕಳೂ ಇರ್ತಾರಾ? ಪುತ್ರಿಯ ಅಮಾನವೀಯತೆಗೆ ತಂದೆ ಸಾವು
ಮಂಡ್ಯದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಸುನಂದಮ್ಮ ಅವರ ಪತಿ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಹೀಗಾಗಿ ಹೌಸಿಂಗ್ ಬಡಾವಣೆಯಲ್ಲಿ ಡೂಪ್ಲೆಕ್ಸ್ ಮನೆಯಲ್ಲಿ ಮಕ್ಕಳೊಂದಿಗೆ ವಾಸಮಾಡುತ್ತಿದ್ದರು. ಈ ನಡುವೆ ಸುನಂದಮ್ಮ ತನ್ನ ಹಿರಿಯ ಮಗಳು ಗೀತಾಳನ್ನು ತಾಲೂಕಿನ ಮುದ್ದೇಗೌಡನದೊಡ್ಡಿ ಗ್ರಾಮದ ನಾಗರಾಜು ಎಂಬಾತನೊಂದಿಗೆ ಮದುವೆ ಮಾಡಿದ್ದರು.
ಮದುವೆ ಬಳಿಕ ಮಗಳು ಗೀತಾ ಮತ್ತು ಅಳಿಯ ನಾಗರಾಜು ಇಬ್ಬರೂ ಹೌಸಿಂಗ್ ಬೋರ್ಡ್ ಕಾಲೋನಿಗೆ ಬಂದು ಎಲ್ಐಜಿ ಮನೆಯನ್ನು ಬಾಡಿಗೆಗೆ ಪಡೆದು ವಾಸ್ತವ್ಯ ಹೂಡಿದ್ದರು. ನಾಗರಾಜು ಪರಂಗಿ ಹಣ್ಣು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಮದುವೆ ಸಮಯದಲ್ಲಿ ಈತನಿಗೆ ದ್ವಿಚಕ್ರ ವಾಹನ, 200 ಗ್ರಾಂ. ಚಿನ್ನಾಭರಣ, 2 ನಿವೇಶನಗಳನ್ನು ನೀಡಿ ಮದುವೆ ಮಾಡಲಾಗಿತ್ತಾದರೂ, ಈತ ಅತ್ತೆ ಇರುವ ಮನೆಯನ್ನು ಹೇಗಾದರೂ ಲಪಟಾಯಿಸಿ ತನ್ನದಾಗಿಸಿಕೊಳ್ಳಲು ಸಂಚು ರೂಪಿಸಿದ್ದದ್ದ.
ವಿಚ್ಛೇದನ ಪಡೆದು ಮನೆಯಲ್ಲಿದ್ದ ಸೇರಿದ ಕಿರಿಮಗಳು ರಮ್ಯಾಳೊಂದಿಗೆ ತಾಯಿ ಸುನಂದಮ್ಮ ವಾಸಿಸುತ್ತಿದ್ದರು. ಇತ್ತ ಹಿರಿಯ ಮಗಳು ಗೀತಾ ಮತ್ತು ಅಳಿಯ ನಾಗರಾಜು ಮನೆಯ ಮೇಲೆ ಕಣ್ಣು ಬಿದ್ದಿದ್ದು, ಸುನಂದಮ್ಮನಿಗೆ ತಿಳಿಯದ ಹಾಗೆ ಮಾರಾಟ ಮಾಡಲು ಹೊಂಚು ಹಾಕಿದ್ದಾರೆ. ಅದು ತಿಳಿದ ಪರಿಣಾಮ ಸುನಂದಮ್ಮ ಮಗಳು ಮತ್ತು ಅಳಿಯನ ಮೇಲೆ ಹರಿಹಾಯ್ದಿದ್ದಾರೆ. ಇದರಿಂದ ಕುಪಿತರಾದ ಅವರು ಸುನಂದಮ್ಮ ಮತ್ತು ರಮ್ಯಾಳನ್ನು ಎರಡು ದಿನಗಳಿಂದ ಗೃಹಬಂಧನದಲ್ಲಿರಿಸಿದ್ದರು.
ನಂತರ ಹರಸಾಹಸ ಮಾಡಿ ಕಿಟಕಿ ಬಾಗಿಲು ತೆರೆದು ಕೂಗಿದ ಪರಿಣಾಮ ನೆರೆಹೊರೆಯವರಿಗೆ ವಿಷಯ ತಿಳಿಸು, ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಲಾಗಿದೆ. ಈ ಸಂಬಂಧ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಪುತ್ರಿ ಮತ್ತು ಅಳಿಯನ ವಿರುದ್ಧ ಪ್ರಕರಣ ದಾಖಲಿದ್ದಾರೆ.