ಮಂಡ್ಯ: ದಶಕಗಳ ಬಳಿಕ ಶಂಭುಲಿಂಗೇಶ್ವರ ದೇಗುಲಕ್ಕೆ ದಲಿತರ ಪ್ರವೇಶ
ಪಾಂಡವಪುರ, ಡಿಸೆಂಬರ್ 7: ಮುಜರಾಯಿ ಇಲಾಖೆಗೆ ಸೇರಿದ ತಾಲೂಕಿನ ಚಾಗಶೆಟ್ಟಹಳ್ಳಿ ಗ್ರಾಮದ ಶಂಭುಲಿಂಗೇಶ್ವರ ದೇವಾಲಯದಲ್ಲಿ ಎಂ.ಬೆಟ್ಟಹಳ್ಳಿ ಗ್ರಾಮದ ದಲಿತರು ಗುರುವಾರ ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.
ನೂರಾರು ವರ್ಷಗಳ ಪುರಾತನ ದೇವಾಲಯವಾದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ದಲಿತರು ದೇವಾಲಯ ಪ್ರವೇಶ ಮಾಡುತ್ತಿರಲಿಲ್ಲ. ಪ್ರವೇಶಕ್ಕೆ ಯಾವುದೇ ನಿರ್ಬಂಧವೂ ಇರಲಿಲ್ಲ. ಹೀಗಿದ್ದು ದಲಿತರು ಮತ್ತು ಸವರ್ಣಿಯರ ನಡುವೆ ಸಂಪರ್ಕದ ಕೊರತೆಯಿಂದ ಮಾತ್ರ ದಲಿತರು ದೇವಾಲಯಕ್ಕೆ ಹೋಗುತ್ತಿರಲಿಲ್ಲ.

ಶ್ರೀಶಂಭುಲಿಂಗೇಶ್ವರ ಸ್ವಾಮಿಯ ಬಂಡಿ ಉತ್ಸವದ ಬಂಡಿ ಕಟ್ಟುವ ವಿಚಾರದಲ್ಲಿ ಜಗಳವಾಗಿ ಕಳೆದ 20 ವರ್ಷಗಳಿಂದ ಗ್ರಾಮದಲ್ಲಿ ಬಂಡಿ ಉತ್ಸವ ಹಾಗೂ ಲಕ್ಷದೀಪೋತ್ಸವ ನಿಂತುಹೋಗಿತ್ತು. ಆದರೆ, ಕಳೆದ ಮಾರ್ಚ್ ತಿಂಗಳಲ್ಲಿ ಪೊಲೀಸರು ಗ್ರಾಮದ ಸಭೆ ನಡೆಸಿ ಸೌಹಾರ್ಧಯುತವಾಗಿ ಬಂಡಿ ಉತ್ಸವ ಆಚರಣೆ ಮಾಡಿದರು.

ಈ ಬಾರಿಯ ಕಾರ್ತಿಕ ಮಾಸದಲ್ಲಿ ಎರಡೂ ಪಂಗಡದ ಮುಖಂಡರು ತಾಲೂಕು ಆಡಳಿತದ ನೇತೃತ್ವದಲ್ಲಿ ಸಭೆ ಸೇರಿ ಯಾವುದೇ ವೈಮನಸ್ಸು ಇಲ್ಲದೆ ಲಕ್ಷದೀಪೋತ್ಸವ ನಡೆಸಿದ್ದರು. ಇದರ ಮಧ್ಯೆ ಕೆಲವು ದಲಿತ ಯುವಕರು ಶಂಭುಲಿಂಗೇಶ್ವರ ದೇವಾಲಯದಲ್ಲಿ ದಲಿತರನ್ನು ಸೇರಿಸುತ್ತಿಲ್ಲ ಎಂದು ತಾಲೂಕು ಆಡಳಿತಕ್ಕೆ ದೂರು ನೀಡಿದ ಪರಿಣಾಮ ಶ್ರೀರಂಗಪಟ್ಟಣ ಡಿವೈಎಸ್ಪಿ ವಿಶ್ವನಾಥ್ ನೇತೃತ್ವದಲ್ಲಿ ಎಂ.ಬೆಟ್ಟಹಳ್ಳಿ ಗ್ರಾಮದ ಕೆಲವು ದಲಿತ ಯುವಕರು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.












Click it and Unblock the Notifications