ನಾನು ಮಂಡ್ಯದ ಮಣ್ಣಿನ ಮಗ : ಯಡಿಯೂರಪ್ಪ ಭಾವುಕ ಭಾಷಣ!
Recommended Video

ಮಂಡ್ಯ, ಅಕ್ಟೋಬರ್ 16 : 'ನಾನು ಮಂಡ್ಯ ಜಿಲ್ಲೆಯ ಮಣ್ಣಿನ ಮಗ. ಆದರೆ, ನನ್ನ ಹುಟ್ಟೂರಿನ ಜನರು ನನಗೆ ಅಧಿಕಾರ ಕೊಡಲಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆ ಬಳಿಕ ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ಬಿಜೆಪಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 'ಶಿವಮೊಗ್ಗ, ಜಮಖಂಡಿ, ಬಳ್ಳಾರಿಯಲ್ಲಿ ಗೆದ್ದಾಗಿದೆ. ಮಂಡ್ಯದಲ್ಲಿ ನಮ್ಮನ್ನು ಗೆಲ್ಲಿಸಿ' ಎಂದರು.
ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಡಾ.ಸಿದ್ದರಾಮಯ್ಯ, ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಕಣದಲ್ಲಿದ್ದಾರೆ....

ನಾನು ಮಂಡ್ಯದ ಮಣ್ಣಿನ ಮಗ
ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ನಾನು ಮಂಡ್ಯ ಜಿಲ್ಲೆಯ ಮಣ್ಣಿನ ಮಗ. ಆದರೆ, ನನ್ನ ಹುಟ್ಟೂರಿನ ಜನರು ನನಗೆ ಅಧಿಕಾರ ನೀಡಲಿಲ್ಲ. ಶಿವಮೊಗ್ಗದಲ್ಲಿ ಜನರು ನನ್ನನ್ನು 7 ಬಾರಿ ಶಾಸಕ, ಒಮ್ಮೆ ಸಂಸದ ನನ್ನಾಗಿ ಮಾಡಿದರು. ಈ ಬಾರಿ ಜಿಲ್ಲೆಯ ಎಲ್ಲಾ ಕ್ಷೇತ್ರಕ್ಕೂ ನಾನು ಪ್ರವಾಸ ಮಾಡುತ್ತೇನೆ. ಪಕ್ಷದ ಅಭ್ಯರ್ಥಿ ಗೆಲ್ಲಿಸಿ' ಎಂದರು.

ಶಿವಮೊಗ್ಗದಲ್ಲಿ ಪುತ್ರ ಸ್ಪರ್ಧೆ
'ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ನನ್ನ ಪುತ್ರ ಸ್ಪರ್ಧಿಸಿದ್ದಾನೆ. ಆದರೆ, ನನಗೆ ಮಂಡ್ಯ ಮುಖ್ಯ. ಮಂಡ್ಯದ ಉಪ ಚುನಾವಣೆಯನ್ನು ದೇಶದ ಪ್ರಧಾನಿ ಗಮನಿಸುತ್ತಿದ್ದಾರೆ. ನಾನು ಈ ತಿಂಗಳ 23 ಮತ್ತು 26ರಂದು ಪುನಃ ಮಂಡ್ಯ ಪ್ರವಾಸ ಮಾಡುತ್ತೇನೆ. ಮಂಡ್ಯದಲ್ಲಿ ಪಕ್ಷವನ್ನು ಗೆಲ್ಲಿಸುವುದು ನಿಮ್ಮ ಜವಾಬ್ದಾರಿ' ಎಂದರು.

ಜೆಡಿಎಸ್ ಕಾಲು ಹಿಡಿದಿದ್ದಾರೆ
'ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಆದರೆ, ಶಿವಮೊಗ್ಗ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಲು ಸಾಧ್ಯವಾಗಲಿಲ್ಲ. ಜೆಡಿಎಸ್ ಪಕ್ಷದವರ ಕಾಲು ಹಿಡಿದು ಅವರ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ನವರು ಅಧಿಕಾರವನ್ನು ಜೆಡಿಎಸ್ನವರಿಗೆ ಒತ್ತೆ ಇಟ್ಟಿದ್ದಾರೆ' ಎಂದು ಯಡಿಯೂರಪ್ಪ ಟೀಕಿಸಿದರು.

5 ಉಪ ಚುನಾವಣೆ ಗೆಲ್ಲಬೇಕು
'ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿಯೂ ನಾವು ಗೆಲುವು ಸಾಧಿಸಬೇಕು. ಇದಕ್ಕಾಗಿ ನಾನು ಪಣ ತೊಟ್ಟಿದ್ದೇನೆ. ಶಿವಮೊಗ್ಗ, ಬಳ್ಳಾರಿ, ಜಮಖಂಡಿಯಲ್ಲಿ ನಾವು ಗೆದ್ದಾಗಿದೆ. ಮಂಡ್ಯದಲ್ಲಿ ನಮ್ಮನ್ನು ಗೆಲ್ಲಿಸಿ' ಎಂದು ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ಅನುದಾನ ನೀಡಿದ್ದೇನೆ
'ನನ್ನ ಅವಧಿಯಲ್ಲಿ ಮಂಡ್ಯ ಜಿಲ್ಲೆಗೆ ಕೋಟ್ಯಾಂತರ ರೂ. ಅನುದಾನ ನೀಡಿದ್ದೇನೆ. ಸರ್ವರಿಗೂ ಸಮಪಾಲು ನೀಡುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದಿದ್ದೇನೆ. ಕುಮಾರಸ್ವಾಮಿ ಮಂಡ್ಯಕ್ಕೆ ಏನು ಮಾಡಿದ್ದಾರೆ? ಎಂದು ಅವರನ್ನು ಕೇಳಿ' ಎಂದು ಹೇಳಿದರು.












Click it and Unblock the Notifications