ಮಂಡ್ಯ ಉಪ ಚುನಾವಣೆ : ಅಂಬರೀಶ್ ಭೇಟಿಯಾದ ಎಲ್.ಆರ್.ಶಿವರಾಮೇಗೌಡ
ಮಂಡ್ಯ, ಅಕ್ಟೋಬರ್ 17 : ಮಂಡ್ಯ ಕ್ಷೇತ್ರದ ಲೋಕಸಭೆ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರು ಇಂದು ಮಾಜಿ ಸಚಿವ ಅಂಬರೀಶ್ ಅವರನ್ನು ಭೇಟಿಯಾದರು. ನವೆಂಬರ್ 3ರಂದು ಲೋಕಸಭೆ ಉಪ ಚುನಾವಣೆ ನಡೆಯಲಿದೆ.
ಬೆಂಗಳೂರಿನ ಅಂಬರೀಶ್ ನಿವಾಸದಲ್ಲಿ ಎಲ್.ಆರ್.ಶಿವರಾಮರಾಮೇಗೌಡ ಅವರು ಅಂಬರೀಶ್ ಭೇಟಿ ಮಾಡಿದರು. ಉಪ ಚುನಾವಣೆಯಲ್ಲಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಅಗತ್ಯ ಸಹಕಾರ ನೀಡುವುದಾಗಿ ಅಂಬರೀಶ್ ಭರವಸೆ ನೀಡಿದರು.
ತಮ್ಮ ಪರವಾಗಿ ಪ್ರಚಾರ ನಡೆಸಲು ಬರಬೇಕು ಎಂದು ಶಿವರಾಮೇಗೌಡ ಅವರು ಅಂಬರೀಶ್ ಅವರಿಗೆ ಮನವಿ ಮಾಡಿದರು. ಆದರೆ, ಪ್ರಚಾರಕ್ಕೆ ಬರುವ ಕುರಿತು ಅಂಬರೀಶ್ ಅವರು ಯಾವುದೇ ಭರವಸೆ ನೀಡಿಲ್ಲ. ಚುನಾವಣೆಯಲ್ಲಿ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಕಣದಲ್ಲಿದ್ದಾರೆ. ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಅವರು ಅಭ್ಯರ್ಥಿ..

ಅಂಬರೀಶ್ ಹೇಳಿದ್ದೇನು?
ಎಲ್.ಆರ್.ಶಿವರಾಮೇಗೌಡ ಅವರು ಇಂದು ಮಾಜಿ ಸಚಿವ ಅಂಬರೀಶ್ ಅವರನ್ನು ಭೇಟಿ ಮಾಡಿದರು. 'ನಿಂತ ಎಲ್ಲಾ ಚುನಾವಣೆಗಳಲ್ಲೂ ಸೋತಿದ್ದೀಯಾ, ಈ ಬಾರಿಯಾದರೂ ಗೆಲ್ಲು' ಎಂದು ಅಂಬರೀಶ್ ಶಿವರಾಮೇಗೌಡರಿಗೆ ಹೇಳಿದರು.

ಅಂಬರೀಶ್ ರಾಜಕೀಯದಿಂದ ದೂರ
2018ರ ವಿಧಾನಸಭೆ ಚುನಾವಣೆ ಸಮಯದಿಂದ ಅಂಬರೀಶ್ ಅವರು ರಾಜಕೀಯದಿಂದ ದೂರವಾಗಿದ್ದಾರೆ. 2013ರ ಚುನಾವಣೆಯಲ್ಲಿ ಮಂಡ್ಯದಿಂದ ಗೆದ್ದಿದ್ದ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆಗಿದ್ದರು. ಆದರೆ, 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದರು. ಚುನಾವಣೆಗೂ ಸ್ಪರ್ಧೆ ಮಾಡಿರಲಿಲ್ಲ.

ಜೆಡಿಎಸ್ ಜೊತೆಗಿದ್ದಾರೆ
ಅಂಬರೀಶ್ ಅವರು 2018ರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿದ್ದರು. ತಾವು ಚುನಾವಣೆಗೆ ನಿಲ್ಲದಿದ್ದರೂ ತಮ್ಮ ಅಭಿಮಾನಿಗಳಿಗೆ ಜೆಡಿಎಸ್ ಬೆಂಬಲಿಸುವಂತೆ ಸೂಚಿಸಿದ್ದರು. ಆದರೆ, ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಮತದಾನದ ದಿನವೂ ಜೆಡಿಎಸ್ ನಾಯಕ, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಕಾರಿನಲ್ಲಿ ಮಂಡ್ಯಕ್ಕೆ ಹೋಗಿ ಮತದಾನ ಮಾಡಿದ್ದರು.

ಪ್ರಚಾರಕ್ಕೆ ಬರ್ತಾರಾ ಅಂಬರೀಶ್
ಎಲ್.ಆರ್.ಶಿವರಾಮೇಗೌಡ ಅವರು ತಮ್ಮ ಪರವಾಗಿ ಪ್ರಚಾರ ನಡೆಸಲು ಬರಬೇಕು ಎಂದು ಅಂಬರೀಶ್ ಅವರಿಗೆ ಮನವಿ ಮಾಡಿದರು. ಆದರೆ, ಅಂಬರೀಶ್ ಯಾವುದೇ ಭರವಸೆಯನ್ನು ನೀಡಿಲ್ಲ. ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ.












Click it and Unblock the Notifications