ಮಂಡ್ಯ ಉಪ ಚುನಾವಣೆ : ಟಿಕೆಟ್ ಆಕಾಂಕ್ಷಿಗಳಿಗೆ ದೇವೇಗೌಡರ ಷರತ್ತು!
Recommended Video
ಮಂಡ್ಯ, ಅಕ್ಟೋಬರ್ 12 : ನವೆಂಬರ್ 3ರಂದು ನಡೆಯಲಿರುವ ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಬಿಜೆಪಿ ಡಾ.ಸಿದ್ದರಾಮಯ್ಯ ಅವರು ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಮಾಡಿದೆ.
ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ಉಪ ಚುನಾವಣೆ ಕಣಕ್ಕಿಳಿಯಲಿದ್ದಾರೆ. ಜೆಡಿಎಸ್ ಟಿಕೆಟ್ನಿಂದ ಸ್ಪರ್ಧಿಸಲು ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಲಕ್ಷ್ಮೀ ಅಶ್ವಿನ್ ಗೌಡ ಮುಂತಾದವರು ಆಕಾಂಕ್ಷಿಯಾಗಿದ್ದಾರೆ.
ಮಂಡ್ಯ ಲೋಕಸಭೆ ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿ ಅಂತಿಮ
ಆದರೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಟಿಕೆಟ್ ಆಕಾಂಕ್ಷಿಗಳಿಗೆ ಷರತ್ತು ಹಾಕಿದ್ದಾರೆ. ಆದ್ದರಿಂದ, ಇನ್ನೂ ಅಭ್ಯರ್ಥಿ ಅಂತಿಮಗೊಂಡಿಲ್ಲ. ಶನಿವಾರ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ನಿಖಿಲ್, ಪ್ರಜ್ವಲ್ ಚುನಾವಣೆಗೆ ಸ್ಪರ್ಧೆ : ದೇವೇಗೌಡರು ಹೇಳಿದ್ದೇನು?
ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಇದ್ದಾರೆ. ಆದ್ದರಿಂದ, ಪಕ್ಷ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭವಾಗಲಿದೆ ಎಂಬುವುದು ಲೆಕ್ಕಾಚಾರವಾಗಿದೆ. ಆದರೆ, ಅಭ್ಯರ್ಥಿ ಯಾರು? ಎಂಬುದು ಸದ್ಯದ ಪ್ರಶ್ನೆ.
ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್ ಜೊತೆ ಮೈತ್ರಿಗೆ ವಿರೋಧ?
ಮೊಮ್ಮಕ್ಕಳ ಸ್ಪರ್ಧೆ ಇಲ್ಲ
'ಮಂಡ್ಯ ಲೋಕಸಭೆ ಉಪ ಚುನಾವಣೆಗೆ ಪ್ರಜ್ವಲ್ ರೇವಣ್ಣ ಅಥವ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದಿಲ್ಲ' ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
'ಮಂಡ್ಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಅಭ್ಯರ್ಥಿಯಾಗಲಿದ್ದಾರೆ' ಎಂದು ದೇವೇಗೌಡರು ಹೇಳಿದ್ದಾರೆ. ಆದರೆ, ಅಭ್ಯರ್ಥಿ ಯಾರು? ಎಂಬುದು ಇನ್ನೂ ನಿಗೂಢವಾಗಿದೆ.
ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್ನಿಂದ ಅಚ್ಚರಿಯ ಹೆಸರು
ದೇವೇಗೌಡರ ಷರತ್ತು ಏನು?
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, 'ಲೋಕಸಭೆ ಉಪ ಚುನಾವಣೆ ಟಿಕೆಟ್ ನೀಡುತ್ತೇವೆ. ಆದರೆ, ಸಾರ್ವತ್ರಿಕ ಚುನಾವಣೆ ಟಿಕೆಟ್ ಬೇಕು ಎಂದು ಬೇಡಿಕೆ ಇಡುವಂತಿಲ್ಲ. ಮುಂದಿನ ಬೆಳವಣಿಗೆ ನೋಡಿಕೊಂಡು ಅದನ್ನು ನಿರ್ಧಾರ ಮಾಡಲಾಗುತ್ತದೆ' ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಷರತ್ತು ಹಾಕಿದ್ದಾರೆ.
ಟಿಕೆಟ್ ಖಚಿತ ಪಡಿಸಲು ಮನವಿ
ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಲಕ್ಷ್ಮೀ ಅಶ್ವಿನ್ ಗೌಡ ಮುಂತಾದವರು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರು ಮುಂದಿನ ಸಾರ್ವತ್ರಿಕ ಚುನಾವಣೆ ಟಿಕೆಟ್ ಅನ್ನು ನೀಡುವುದಾಗಿ ಭರವಸೆ ನೀಡಬೇಕು ಎಂದು ದೇವೇಗೌಡರಿಗೆ ಮನವಿ ಮಾಡಿದ್ದಾರೆ. ಆದ್ದರಿಂದ, ಅಭ್ಯರ್ಥಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ.
ಅನಗತ್ಯ ಖರ್ಚು
ಎಚ್.ಡಿ.ದೇವೇಗೌಡರ ಷರತ್ತಿನಿಂದಾಗಿ ಟಿಕೆಟ್ ಆಕಾಂಕ್ಷಿಗಳು ಕಂಗಾಲಾಗಿದ್ದಾರೆ. ಉಪ ಚುನಾವಣೆ ಟಿಕೆಟ್ ಪಡೆದರೆ ಸಾರ್ವತ್ರಿಕ ಚುನಾವಣೆ ಟಿಕೆಟ್ ಸಹ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದರು. ಅದರಲ್ಲೂ ಉಪ ಚುನಾವಣೆಗೆ ಹಣ ಖರ್ಚು ಮಾಡಿ ಗೆದ್ದರೆ 4 ತಿಂಗಳು ಮಾತ್ರ ಅಧಿಕಾರ ಇರುತ್ತದೆ. ಮುಂದೆ ಟಿಕೆಟ್ ಸಿಗುವ ಖಾತ್ರಿ ಇಲ್ಲ. ಆದ್ದರಿಂದ, ಸ್ಪರ್ಧೆಗೆ ಕೆಲವರು ಹಿಂದೇಟು ಹಾಕುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಘೋಷಣೆ
ಮಂಡ್ಯ ಲೋಕಸಭೆ ಉಪ ಚುನಾವಣೆಗೆ ಕರ್ನಾಟಕ ಬಿಜೆಪಿ ಡಾ.ಸಿದ್ದರಾಮಯ್ಯ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆರ್.ಅಶೋಕ ಸಮ್ಮುಖದಲ್ಲಿ ಅವರು ಗುರುವಾರ ಬಿಜೆಪಿ ಸೇರಿದ್ದಾರೆ. ಸಿದ್ದರಾಮಯ್ಯ ಅವರು ಮಾಜಿ ಶಾಸಕ ದೊಡ್ಡಬೋರೇಗೌಡ ಅವರ ಪುತ್ರ. ಹೆಚ್ಚುವರಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಕೆಲಸ ಮಾಡಿ ಜುಲೈನಲ್ಲಿ ನಿವೃತ್ತಿ ಹೊಂದಿದ್ದರು. ಈಗ ಚುನಾವಣಾ ಕಣಕ್ಕೆ ಧಮುಕಿದ್ದಾರೆ.