ಮಾ.12, ನವೀನ್ ಕುಮಾರ್ ಬಂಧನ ಖಂಡಿಸಿ ಮದ್ದೂರು ಬಂದ್
ಮದ್ದೂರು, ಮಾರ್ಚ್ 9: ರಾಜ್ಯದಲ್ಲಿ ನಿರಂತರ ನಡೆಯುತ್ತಿರುವ ಹಿಂದೂಗಳ ಹತ್ಯೆ ಹಾಗೂ ಹಿಂದೂ ಯುವ ಸೇನೆ ಅಧ್ಯಕ್ಷ ಕೆ. ಟಿ. ನವೀನ್ ಕುಮಾರ್ ಬಂಧನ ಖಂಡಿಸಿ ಹಿಂದೂಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾರ್ಚ್ 12ರಂದು ಮದ್ದೂರು ಬಂದ್ಗೆ ಕರೆ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ಹಿಂದೂಪರ ವಿವಿಧ ಸಂಘಟನೆಗಳ ಸಭೆ ಬಳಿಕ ಭಜರಂಗ ಸೇನೆ ರಾಜ್ಯಾಧ್ಯಕ್ಷ ಬಿ. ಮಂಜುನಾಥ್ ನೇತೃತ್ವದಲ್ಲಿ ಹೊರಗೆ ಬಂದು ರಾಜ್ಯ ಸರ್ಕಾರದ ಹಿಂದು ವಿರೋಧಿ ನೀತಿ ಖಂಡಿಸಿ ಘೋಷಣೆ ಮೊಳಗಿಸಿದರು.
ಭಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, "ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ 24 ಹಿಂದೂ ಯುವಕರ ಹತ್ಯೆ ನಡೆದಿದೆ. ಹಿಂದೂ ವಿರೋಧಿ ಸಂಘಟನೆಗಳ ಪರವಾಗಿರುವ ಈ ಸರ್ಕಾರಕ್ಕೆ ಹಿಂದೂಗಳ ಹತ್ಯೆ ಬಗೆಗೆ ಯಾವುದೇ ಕಾಳಜಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಯುವಸೇನೆ ಅಧ್ಯಕ್ಷ ಕೆ. ಟಿ. ನವೀನ್ ಕುಮಾರ್ ಅವರ ಮೇಲೆ ಜೀವಂತ ಗುಂಡು ಮಾರಾಟದ ಸುಳ್ಳು ಆರೋಪ ಹೊರಿಸಿ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಆರೋಪಿ ಎಂದು ಬಿಂಬಿಸಲಾಗುತ್ತಿದೆ. ಅಲ್ಲದೇ ಇದಾದ ಬಳಿಕ ಇದೀಗ ವಿಚಾರವಾದಿ ಕೆ.ಎಸ್. ಭಗವಾನ್ ಅವರ ಹತ್ಯೆಗೆ ಯತ್ನಿಸಿದ್ದರು ಎಂದು ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲಿಸಲಿಸಿರುವುದು ವಿಷಾದದ ಸಂಗತಿ ಎಂದರು.
ಕೆ. ಟಿ. ನವೀನ್ ಕುಮಾರ್ ಅವರ ಬಂಧನ ಖಂಡಿಸಿ ಮಾರ್ಚ್ 12ರಂದು ಮದ್ದೂರು ಬಂದ್ಗೆ ಕರೆ ನೀಡಲಾಗಿದೆ. ಅಂದು ಯಾವುದೇ ರೀತಿ ಹಿಂಸಾತ್ಮಕ ಹೋರಾಟವಿಲ್ಲ. ಶಾಂತಿಯುತ ಹೋರಾಟಕ್ಕೆ ಕರೆ ನೀಡಲಾಗಿದೆ. ಆದರೆ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಇದಕ್ಕೆ ಈ ಬಂದ್ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಹಿಂದೂ ಪರ ಸಂಘಟನೆ ಮುಖಂಡರಾದ ಜಗನ್ನಾಥ್, ವೀರಭದ್ರಸ್ವಾಮಿ, ಎಂ.ಸಿ.ಸಿದ್ದು, ಶ್ರೀನಿವಾಸಶೆಟ್ಟಿ, ಕೆಂಪುಬೋರಯ್ಯ, ನೈದಿಲೆ ಚಂದ್ರು, ವಕೀಲ ಮಲ್ಲೇಶ್, ಸಿಪಾಯಿ ಶ್ರೀನಿವಾಸ್, ಗೆಜ್ಜಲಗೆರೆ ಸುನೀಲ್, ಹರೀಶ್, ಮೋಹನ್, ಮಹೇಶ್, ಗೆಜ್ಜಲಗೆರೆ ಕಿಟ್ಟಿ, ಗೊರವನಹಳ್ಳಿ ರಾಘವ ಸೇರಿದಂತೆ ಹಲವರು ಭಾಗವಹಿಸಿದ್ದರು.












Click it and Unblock the Notifications