ರೈತರಿಂದ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು
ಜಮೀನಿನ ಖಾತೆ ಮಾಡಿಕೊಡುವ ಸಂಬಂಧ ರೈತರೊಬ್ಬರಿಂದ ₹20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ನಾಗರಾಜು ಗುರುವಾರ ಮಧ್ಯಾಹ್ನ ನಾಗಮಂಗಲ ತಾಲೂಕಿನ ಹೊಣಕೆರೆ ನಾಡಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಾಗಮಂಗಲ ತಾಲೂಕಿನ ಶ್ರೀರಘುರಾಮಪುರ ಮತ್ತು ಹೊಣಕೆರೆ ವೃತ್ತದ ನಾಗರಾಜ್ ಎನ್ನುವ ಅಧಿಕಾರಿ ರೈತರೊಬ್ಬರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಗ್ರಾಮ ಲೆಕ್ಕಾಧಿಕಾರಿಯಾಗಿದ್ದಾರೆ.

ಹೊಣಕೆರೆ ಗ್ರಾಮದ ಶಿವಣ್ಣ ಎಂಬ ರೈತನಿಂದ ಜಮೀನಿನ ಪೌತಿ ಖಾತೆ ಮಾಡಿಕೊಡಲು ₹20 ಸಾವಿರಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ ₹7 ಸಾವಿರ ಲಂಚ ಪಡೆದಿದ್ದರು. ಉಳಿದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ರೈತ ಶಿವಣ್ಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲಂಚ ಪಡೆಯುವಾಗ ಬಂಧನ
ಗುರುವಾರ ಮಧ್ಯಾಹ್ನ ಹೊಣಕೆರೆ ನಾಡಕಚೇರಿಯಲ್ಲಿ ರೈತ ಶಿವಣ್ಣನಿಂದ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಲಂಚದ ಬಾಕಿ ಹಣ ಪಡೆಯುತ್ತಿದ್ದರು. ಇದೇ ವೇಳೆಗೆ ದಿಢೀರ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ನಾಗರಾಜ್ನನ್ನು ವಶಕ್ಕೆ ಪಡೆದು ಮಂಡ್ಯಕ್ಕೆ ಕರೆದೊಯ್ದಿದ್ದಾರೆಂದು ಹೇಳಲಾಗಿದೆ.
ಜಿಲ್ಲಾ ಲೋಕಾಯುಕ್ತ ಎಸ್ಪಿ ಸುರೇಶ್ಬಾಬು ಮತ್ತು ಡಿವೈಎಸ್ಪಿ ಸುನಿಲ್ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ, ಸಿಬ್ಬಂದಿಗಳಾದ ಶರತ್, ಶಂಕರ್ ನವೀನ್ ಹಾಗೂ ಮಾನಸ ಕರ್ತವ್ಯ ನಿರ್ವಹಿಸಿದ್ದರು.
ನಾಗರಾಜ್ ವಿರುದ್ಧ ಆರೋಪ
ನಾಗಮಂಗಲ ತಾಲೂಕಿನ ದೊಂದೆಮಾದಹಳ್ಳಿ ಗ್ರಾಮದವರೇ ಆದ ನಾಗರಾಜು ಕಳೆದ 15 ವರ್ಷಗಳಿಂದ ಹೊಣಕೆರೆ ಹೋಬಳಿಯ ಶ್ರೀರಘುರಾಮಪುರ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆಚ್ಚುವರಿಯಾಗಿ ಹೊಣಕೆರೆ ವೃತ್ತದ ಪ್ರಭಾರ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಆದಾಯಕ್ಕೂ ಮೀರಿ ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ. ಜಮೀನ ಖಾತೆ ಸೇರಿದಂತೆ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಸಹ ರೈತರಿಂದ ಕನಿಷ್ಠ 5 ರಿಂದ ₹50 ಸಾವಿರದವರೆಗೂ ಚಂಚಕ್ಕೆ ಬೇಡಿಕೆ ಇಡುತ್ತಿದ್ದರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಕೇಳಿದಷ್ಟು ಲಂಚದ ಹಣ ಕೊಡದಿದ್ದರೆ ಅಂತಹ ರೈತರ ಖಾತೆಗೆ ಸಂಬಂಧಿಸಿದ ಕಡತಗಳನ್ನು ತನ್ನ ಬಳಿಯೇ ಇಟ್ಟುಕೊಂಡು ಮೇಲಾಧಿಕಾರಿಗಳು ನಿಮ್ಮ ಕಡತಗಳಿಗೆ ಸಹಿ ಹಾಕುತ್ತಿಲ್ಲವೆಂಬ ಕಾರಣ ಕೊಟ್ಟು ಅನಾವಶ್ಯಕವಾಗಿ ರೈತರಿಗೆ ತೊಂದರೆ ಕೊಡುತ್ತಿದ್ದರು. ಇಂತಹ ಲಂಚಕೋರ ಗ್ರಾಮಲೆಕ್ಕಿಗನ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕೆಂದು ಸ್ಥಳೀಯ ಜನರು ಒತ್ತಾಯಿಸಿದ್ದಾರೆ.












Click it and Unblock the Notifications