ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಕಂಡು ಹೌಹಾರಿದ ಮಂಡ್ಯದ ಜನರು!
ಮಂಡ್ಯ, ನವೆಂಬರ್ 10: ಕಬ್ಬು ಕಟಾವು ಮಾಡುವ ವೇಳೆ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದು ಅವುಗಳನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ದೇವರಾಜೇಗೌಡರು ತಮ್ಮ ಜಮೀನಿನಲ್ಲಿ ಕಬ್ಬು ಬೆಳೆದಿದ್ದು, ಅದು ಕಟಾವಿಗೆ ಬಂದಿದ್ದರಿಂದ ಕಾರ್ಮಿಕರ ಮೂಲಕ ಕಟಾವು ಮಾಡಿಸುತ್ತಿದ್ದರು. ಈ ವೇಳೆ ಕಟಾವು ಮಾಡುತ್ತಿದ್ದ ಕಾರ್ಮಿಕನೊಬ್ಬನಿಗೆ ಐದು ಚಿರತೆ ಮರಿಗಳು ಕಂಡಿವೆ. ಇದರಿಂದ ಭಯಭೀತಗೊಂಡ ಆತ ಅಲ್ಲಿಂದ ಹೆದರಿ ಓಡಿಬಂದು ಇತರರಿಗೆ ವಿಷಯ ತಿಳಿಸಿದ್ದಾನೆ.

ಮರಿಗಳ ಪಕ್ಕದಲ್ಲಿ ತಾಯಿ ಚಿರತೆಯೂ ಒಂದು ವೇಳೆ ಇದ್ದರೆ ತಮ್ಮ ಮೇಲೆ ದಾಳಿ ಮಾಡಬಹುದೆಂಬ ಭಯ ಎಲ್ಲರನ್ನೂ ಕಾಡಿತ್ತು. ಆದರೂ ಧೈರ್ಯ ಮಾಡಿಕೊಂಡು ಮರಿಯಿದ್ದ ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ ಐದು ಮರಿಗಳ ಪೈಕಿ ಎರಡು ನಾಪತ್ತೆಯಾಗಿ ಮೂರು ಮಾತ್ರ ಉಳಿದಿದ್ದವು.
ಈ ವಿಷಯವನ್ನು ಅರಣ್ಯಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗೆ ತಿಳಿಸಿದ ಮೇರೆಗೆ ಸ್ಥಳಕ್ಕೆ ಬಂದ ಅವರು ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಹುಶಃ ತಾಯಿ ಚಿರತೆ ಆಹಾರ ಅರಸಿ ಹೊರ ಹೋಗಿದ್ದು ಮರಿಗಳನ್ನು ಹುಡುಕಿಕೊಂಡು ಬರುವ ಸಾಧ್ಯತೆ ಹೆಚ್ಚಿರುವ ಕಾರಣ ಅದನ್ನು ಬೋನಿಟ್ಟು ಹಿಡಿಯುವ ಕಾರ್ಯಾಚರಣೆ ಮಾಡುವುದಾಗಿ ಹೇಳಿದ್ದಾರೆ.












Click it and Unblock the Notifications