ಮಂಡ್ಯ ನಗರಸಭೆಯಲ್ಲಿ 21 ಹುದ್ದೆ ಖಾಲಿ: ಆಮೆಗತಿ ಕೆಲಸಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ಮಂಡ್ಯ,ಜು13: ನಗರಸಭೆಯಲ್ಲಿ ಸಾರ್ವಜನಿಕ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಬಹಿರಂಗವಾಗಿಯೇ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಅರ್ಧದಷ್ಟು ಅಧಿಕಾರಿ-ಸಿಬ್ಬಂದಿ ಹುದ್ದೆಗಳು ಖಾಲಿ ಬಿದ್ದಿರುವುದು ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ನಗರಸಭೆಯಲ್ಲಿ ಒಟ್ಟು 48 ಹುದ್ದೆಗಳು ಮಂಜೂರಾಗಿದ್ದರೂ ಕೇವಲ 27 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಹುದ್ದೆಗಳೆಲ್ಲವೂ ಅನೇಕ ತಿಂಗಳುಗಳಿಂದ ಖಾಲಿ ಬಿದ್ದಿದ್ದರೂ ಭರ್ತಿ ಮಾಡುವ ಸರ್ಕಾರ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಇದರಿಂದ ತೆರಿಗೆ ಸಂಗ್ರಹ ಕುಂಠಿತಗೊಂಡಿದ್ದು, ಸಾರ್ವಜನಿಕ ಕೆಲಸಗಳು ಸಮರ್ಪಕವಾಗಿ ನಡೆಯದೆ ಪರದಾಡುವಂತಾಗಿದೆ.
ಇದರಿಂದಾಗಿ ಸಾರ್ವಜನಿಕರು ಖಾತೆ ಬದಲಾವಣೆ, ಕಟ್ಟಡ ಲೈಸೆನ್ಸ್, ನಮೂನೆ-3 ಸೇರಿದಂತೆ ಇನ್ನಿತರ ಕೆಲಸಗಳಿಗೆ ನೀಡಿದ ಕಡತಗಳು ಮುಂದಕ್ಕೆ ಸಾಗದಂತಾಗಿವೆ. ಕಚೇರಿಗೆ ಅಲೆದು ಅಲೆದು ಸಾರ್ವಜನಿಕರು ಬಸವಳಿಯುತ್ತಿದ್ದಾರೆ. ಎಲ್ಲಾ ಕೆಲಸಗಳು ಆಮೆಗತಿಯಲ್ಲಿ ನಡೆಯುತ್ತಿರುವುದು, ಕೆಲವೊಂದು ಕೆಲಸಗಳಿಗೆ ದಾಖಲೆಗಳನ್ನು ಕೇಳಿ ಅಲೆದಾಡಿಸುವುದು, ಹಣಕ್ಕೆ ಒತ್ತಡ ಹೇರುವುದು ನಡೆಯುತ್ತಿದ್ದರೂ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ.
ಭೋರ್ಗರೆಯುತ್ತಿರುವ ಗಗನ ಚುಕ್ಕಿ-ಭರಚುಕ್ಕಿ ಜಲಪಾತಗಳು: ಸಾವಿರಾರು ಪ್ರವಾಸಿಗರ ದಂಡು
ಇನ್ನು ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ 3 ಹುದ್ದೆಗಳಲ್ಲಿ 2 ಹುದ್ದೆ ಭರ್ತಿಯಾಗಿದ್ದು, 1 ಹುದ್ದೆ ಖಾಲಿ ಇದ್ದರೆ, 3 ಕಿರಿಯ ಆರೋಗ್ಯ ನಿರೀಕ್ಷಕರ 3 ಹುದ್ದೆಗಳಲ್ಲಿ 2 ಖಾಲಿ ಉಳಿದಿದ್ದು, 1 ಹುದ್ದೆ ಮಾತ್ರ ಭರ್ತಿಯಾಗಿದೆ. 14 ಜನ ದ್ವಿತೀಯ ದರ್ಜೆ ಸಹಾಯಕರಲ್ಲಿ 5 ಹುದ್ದೆ ಖಾಲಿ ಉಳಿದಿದ್ದು, 9 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಈ ಹುದ್ದೆಗಳು ಅನೇಕ ತಿಂಗಳುಗಳಿಂದ ಭರ್ತಿಯಾಗಿಲ್ಲ.
ಕಂದಾಯಾಧಿಕಾರಿ ಹುದ್ದೆ ಖಾಲಿ
ಕಂದಾಯಾಧಿಕಾರಿ ಹುದ್ದೆ ಖಾಲಿ ಬಿದ್ದಿದೆ. ಕಂದಾಯಾಕಾರಿಯಾಗಿದ್ದ ಪಂಪಾಶ್ರೀ ಅವರನ್ನು ಜೂ.30ರಂದು ಹುಣಸೂರು ನಗರಸಭೆಗೆ ವರ್ಗಾವಣೆ ಮಾಡಲಾಗಿದ್ದು ಇದುವರೆಗೂ ಹುದ್ದೆಯನ್ನು ಭರ್ತಿ ಮಾಡಿಲ್ಲ. ಕಚೇರಿ ವ್ಯವಸ್ಥಾಪಕರಾಗಿರುವ ಎಂ.ಮಹದೇವಯ್ಯ ಅವರಿಗೆ ಶ್ರೀರಂಗಪಟ್ಟಣ ಮುಖ್ಯಾಧಿಕಾರಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಿರುವುದರಿಂದ ಎರಡೂ ಕಡೆ ಕೆಲಸ ಮಾಡುವಂತಾಗಿದೆ.
ನಗರಸಭೆಯ ಮೂವರು ಕಿರಿಯ ಅಭಿಯಂತರ ಹುದ್ದೆಗಳಲ್ಲಿ ಈ ಹಿಂದೆ ಇಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಪೈಕಿ ಕೆ.ಸಿ.ಶಿವಕುಮಾರ್ ಅವರನ್ನು ಹುಣಸೂರು ನಗರಸಭೆಗೆ ಜೂ.30ರಂದು ವರ್ಗಾವಣೆ ಮಾಡಿದ್ದು ಇದುವರೆಗೂ ಆ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿಲ್ಲ. ಪ್ರಥಮ ದರ್ಜೆ ಸಹಾಯಕರಾಗಿದ್ದ ಎನ್.ನಾಗೇಂದ್ರ ಅವರನ್ನು ಹುಳಿಯಾರು ಪಟ್ಟಣ ಪಂಚಾಯಿತಿಗೆ ಜೂ.30ರಂದು ವರ್ಗಾವಣೆ ಮಾಡಲಾಗಿದ್ದು 4 ಹುದ್ದೆಗಳ ಪೈಕಿ ಇಬ್ಬರು ಪ್ರಥಮ ದರ್ಜೆ ಸಹಾಯಕರು ಕೆಲಸ ನಿರ್ವಹಿಸುತ್ತಿದ್ದು, ಇನ್ನೆರಡು ಹುದ್ದೆಗಳು ಖಾಲಿ ಉಳಿದಿವೆ.
ಕಾವೇರಿ ನದಿಗೆ ಹೆಚ್ಚುವರಿ ನೀರು: ಮುಳುಗುವ ಭೀತಿಯಲ್ಲಿ ನಡುಗಡ್ಡೆಗಳು
ವರ್ಗಾವಣೆಗೆ ಲಾಭಿ
ನಗರಸಭೆಯಲ್ಲಿ 9 ಮಂದಿ ಕರ ವಸೂಲಿಗಾರರು ಇರಬೇಕಾದ ಕಡೆ 4 ಜನರು ಮಾತ್ರ ಕರ್ತವ್ಯನಿರ್ವಹಿಸುತ್ತಿದ್ದು, 5 ಹುದ್ದೆಗಳು ಖಾಲಿ ಉಳಿದಿವೆ. ಕರ ವಸೂಲಿಗಾರರ ಕೊರತೆಯಿಂದ ನಗರಸಭೆಯ ತೆರಿಗೆ ಸಂಗ್ರಹಕ್ಕೂ ಹೊಡೆತ ಬಿದ್ದಿದೆ.
ನಗರಸಭೆಯಲ್ಲಿ ವರ್ಗಾವಣೆಗೊಂಡಿರುವ ಹಾಗೂ ಬೇರೆ ಕಡೆಯಿಂದ ಇಲ್ಲಿಗೆ ವರ್ಗವಾಗಿರುವವರು ಕೂಡ ಕೆಲಸ ಮಾಡಲಿಚ್ಚಿಸದೆ ರಜೆ ಮೇಲೆ ತೆರಳಿ ಅದೇ ಸ್ಥಾನಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಲಾಭಿ ನಡೆಸುತ್ತಿದ್ದಾರೆ. ಜೊತೆಗೆ ಮತ್ತೊಬ್ಬರಿಗೆ ಜವಾಬ್ದಾರಿಯನ್ನೂ ನೀಡದೆ ತಮ್ಮ ಕಚೇರಿ ಬೀರುಗಳ ಬೀಗದ ಕೀಗಳೊಂದಿಗೆ ತೆರಳಿರುವುದರಿಂದ ಸಾರ್ವಜನಿಕ ಕೆಲಸಗಳಿಗೆ ತೀವ್ರ ಅಡಚಣೆಯಾಗುತ್ತಿದೆ.
ಕಡತಗಳು ಮುಂದೆ ಸಾಗುತ್ತಿಲ್ಲ
ನಗರಸಭೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಖಾತೆ ಬದಲಾವಣೆ, ಕಟ್ಟಡ ಲೈಸೆನ್ಸ್, ಉದ್ದಿಮೆ ಪರವಾನಗಿ ಮಂಜೂರು, ನಮೂನೆ-3, ತೆರಿಗೆ ಸಂಗ್ರಹ, ಸ್ವಚ್ಛತೆ, ಆರೋಗ್ಯ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳೆಲ್ಲವೂ ನೆನೆಗುದಿಗೆ ಬೀಳುವಂತಾಗಿದೆ. ಇದರ ಜೊತೆಗೆ ಹೊಸದಾಗಿ 4 ಮಂದಿ ಬೇರೆಡೆಗೆ ವರ್ಗಾವಣೆಯಾಗುತ್ತಿದ್ದು, ಆ ಜಾಗಕ್ಕೆ ಇನ್ನೂ ಯಾರನ್ನೂ ನೇಮಕ ಮಾಡಿಲ್ಲ. ಇದರಿಂದ ಕೆಲಸಗಳು ಇನ್ನಷ್ಟು ಕುಂಠಿತಗೊಳ್ಳುವ ಸಾಧ್ಯತೆಗಳಿವೆ.
ಅಧಿಕಾರಿ-ಸಿಬ್ಬಂದಿ ಕೊರತೆ: ಕೆಲಸಗಳು ವಿಳಂಬ
ಸಾರ್ವಜನಿಕ ಕೆಲಸಗಳು ಅಧಿಕಾರಿ-ಸಿಬ್ಬಂದಿಯಿಂದ ಸರಿಯಾಗಿ ನಡೆಯುತ್ತಿಲ್ಲದ ಕಾರಣ ಅನೇಕರು ತಮ್ಮ ಕೆಲಸ-ಕಾರ್ಯಗಳಿಗಾಗಿ ನಗರಸಭೆ ಅಧ್ಯಕ್ಷರು, ಸದಸ್ಯರ ಬೆನ್ನು ಹತ್ತಿದ್ದಾರೆ. ಅವರೂ ಸಹ ಸಂಬಂಧಿಸಿದ ಅಧಿಕಾರಿಗಳು-ಸಿಬ್ಬಂದಿಗಳಿಗೆ ಹೇಳಿದರೂ ಏನೂ ಪ್ರಯೋಜನವಾಗುತ್ತಿಲ್ಲ. ನಗರಸಭೆ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ನಗರಸಭೆ ಅಧ್ಯಕ್ಷ ಹೆಚ್.ಎಸ್ ಮಂಜು ಮಾತನಾಡಿ, "ನಗರಸಭೆಯಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಅಧಿಕಾರಿ-ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಕೆಲಸಗಳು ವಿಳಂಬವಾಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸುವಂತೆ ಮನವಿ ಮಾಡಿದ್ದೇವೆ," ಎಂದರು.
Recommended Video