'ದೊಡ್ಮನೆ'ಗಾಗಿ ಸಾರಿ ಕೇಳಿದರೆ ಕ್ಷಮಿಸಲು ನಾವು 'ದಡ್ಮನೆ'ಯವರೇ?
ಮಂಡ್ಯ, ಅಕ್ಟೋಬರ್ 03: ಕಾವೇರಿ ಕಣಿವೆ ಪ್ರದೇಶದವರಾಗಿರುವ ಅಂಬರೀಶ್ ಗೆ ಸಿನಿಮಾ 'ದೊಡ್ಮನೆ' ಮುಖ್ಯವಲ್ಲ. ಕನ್ನಡ ನಾಡಿನ 'ದೊಡ್ಮನೆ' ಬಹಳ ಮುಖ್ಯ. ಸಿನಿಮಾಗಾಗಿ 'ಸಾರಿ' ಎಂದು ಕೇಳುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.
ಕಾವೇರಿ ಕಣಿವೆ ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿರುವಾಗ ಅಮೆರಿಕಾ ಮತ್ತಿತರ ದೇಶಗಳಲ್ಲಿ ಕನ್ನಡ ಉದ್ಧಾರ ಮಾಡಬೇಕಾದ ಅಗತ್ಯವಿರಲಿಲ್ಲ. ಮುಂದೊಂದು ದಿನ ಆ ಕೆಲಸ ಮಾಡಬಹುದಿತ್ತು.[ದಯವಿಟ್ಟು ಕ್ಷಮಿಸಿ ಎಂದು ಕನ್ನಡಿಗರ ಮುಂದೆ ಕೈಮುಗಿದ ಅಂಬಿ]
ಒಬ್ಬ ಜನಪ್ರತಿನಿಧಿಯಾಗಿ ಚಳವಳಿಯಿಂದ ದೂರ ಉಳಿದದ್ದು ಸರಿಯಲ್ಲ. ವಿದೇಶದಿಂದ ಬಂದ ಮೇಲೆ 'ದೊಡ್ಮನೆ ಹುಡ್ಗ'ನ ಮೇಲಿನ ಪ್ರೀತಿಯಿಂದ 'ಸಾರಿ' ಅಂತ ಕೇಳಿದರೆ ಅದನ್ನು ಕೇಳುವುದಕ್ಕೆ ನಾವು 'ದಡ್ಮನೆ'ಯಿಂದ ಬಂದವರೇ ಎಂದು ಪ್ರಶ್ನಿಸಿದರು.

ಮಂಡ್ಯ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಗೆ ಜವಾಬ್ದಾರಿ ಇರಬೇಕು. ಸಚಿವ ಸ್ಥಾನ ಹೋದಾಕ್ಷಣ ವಿಧಾನಸಭೆ ಕಲಾಪಕ್ಕೂ ಹಾಜರಾಗದೆ, ಕ್ಷೇತ್ರದ ಕಡೆಯೂ ತಿರುಗಿ ನೋಡದೆ ಬೆಂಗಳೂರು, ಅಮೆರಿಕಾ ಅಂತ ಸುತ್ತಾಡುವುದು ಸರಿಯಲ್ಲ. ಕಾವೇರಿ ಬೆಳವಣಿಗೆಗಳನ್ನು ಗಮನಿಸಿ ಜನರೊಟ್ಟಿಗೆ ನಿಲ್ಲಬೇಕಾದ್ದು ಅವರ ಧರ್ಮ ಎಂದು ಹೇಳಿದರು.[ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!]
ಸುಪ್ರೀಂಕೋರ್ಟ್ ನದ್ದು ರಾಜ್ಯದ ವಿರುದ್ಧ ಸೇಡಿನ ಕ್ರಮವೋ, ಗದಾಪ್ರಹಾರವೋ ಅರ್ಥವಾಗುತ್ತಿಲ್ಲ. ಇಂತಹ ತೀರ್ಪುಗಳು ಒಕ್ಕೂಟ ವ್ಯವಸ್ಥೆಯಲ್ಲಿ ಗೊಂದಲ ಮೂಡಿಸುತ್ತಿವೆ. ಉಮಾಭಾರತಿ ನೇತೃತ್ವದಲ್ಲಿ ನಡೆದ ಎರಡೂ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ ತಜ್ಞರ ಸಮಿತಿಯನ್ನು ಕಳುಹಿಸುವ ಸಲಹೆಯನ್ನು ತಮಿಳುನಾಡು ತಿರಸ್ಕರಿಸಿತು. ಅದರ ಬಗ್ಗೆ ಸುಪ್ರೀಂಕೋರ್ಟ್ ತಮಿಳುನಾಡನ್ನು ಪ್ರಶ್ನಿಸದಿರುವುದು ಅಚ್ಚರಿಯ ಸಂಗತಿ ಎಂದರು.[ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]
ಯಾವಾಗಲೂ ಸಾಮಾನ್ಯ ಜ್ಞಾನ ಎನ್ನುವುದು ವಿಷಯದ ಆಳಕ್ಕೆ ಇಳಿದು ಪರಿಸ್ಥಿತಿಯನ್ನು ಅರಿಯುವ ಕೆಲಸ ಮಾಡುತ್ತದೆ. ಆದರೆ, ಕಾನೂನು ಜ್ಞಾನ ಪುಸ್ತಕದಲ್ಲಿ ಏನಿದೆ ಎಂಬುದನ್ನಷ್ಟೇ ಹೇಳುತ್ತದೆ. ಕಾವೇರಿ ವಿಷಯದಲ್ಲಿ ನಡೆಯುತ್ತಿರುವುದೂ ಅಷ್ಟೇ. ಕಾನೂನು ತಜ್ಞರು ವಸ್ತುಸ್ಥಿತಿಯನ್ನು ತಿಳಿಯುವ ಕೆಲಸವನ್ನೇ ಮಾಡದೆ ಗದಾಪ್ರಹಾರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications