ಕನ್ನಂಬಾಡಿ ಭರ್ತಿಗೆ 3 ಅಡಿ ಬಾಕಿ: ಜುಲೈನಲ್ಲೇ ಸಿಎಂ ಬಾಗಿನ ಅರ್ಪಣೆ?
ಮಂಡ್ಯ, ಜುಲೈ 9 : ಕೇರಳದ ವೈನಾಡು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಹೆಚ್ಚಿರುವ ಕಾರಣ ಕೃಷ್ಣರಾಜಸಾಗರ ಜಲಾಶಯ ಭರ್ತಿಗೆ ಕೇವಲ ಮೂರು ಅಡಿ ಮಾತ್ರ ಉಳಿದಿದ್ದು, ಇನ್ನೆರಡು ಮೂರು ದಿನಗಳಲ್ಲಿ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಗಳಿದೆ. ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲೇ ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗುತ್ತಿದೆ.
ಸಾಮಾನ್ಯವಾಗಿ ಕೃಷ್ಣರಾಜಸಾಗರ ಜಲಾಶಯ ಆಗಸ್ಟ್ , ಸೆಪ್ಟಂಬರ್ ತಿಂಗಳಲ್ಲಿ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಅವಧಿಗೂ ಮುನ್ನವೇ ಭರ್ತಿಯಾಗಿರುವುದು ರೈತರಲ್ಲಿ ಸಂತಸ ಮೂಡಿದೆ. ಕಳೆದ ಬಾರಿ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ನಲ್ಲೇ ಕಾವೇರಿಗೆ ಬಾಗಿನ ಅರ್ಪಿಸಿದ್ದರು.
ಮಂಡ್ಯ: ಪ್ರವಾಹ ನಿರ್ವಹಣೆ ಕುರಿತ ಸಭೆಗೆ ಸುಮಲತಾ ಗೈರು,ಜೆಡಿಎಸ್ ಶಾಸಕರ ಆಕ್ರೋಶ
ಜಲಾಶಯದ ಗರಿಷ್ಠ ಮಟ್ಟ 124.80 ಇದ್ದು, ಶನಿವಾರ ಜಲಾಶಯದಲ್ಲಿ 121.42 ಅಡಿ ನೀರು ಸಂಗ್ರವಾಗಿದೆ. ಕಳೆದ ಒಂದು ವಾರದಿಂದೀಚೆಗೆ ಮುಂಗಾರು ಚುರುಕಾಗಿದ್ದು, ಕಾವೇರಿ ಕಣಿವೆ ವ್ಯಾಪ್ತಿಯ ಕಬಿನಿ, ಹಾರಂಗಿ, ಹೇಮಾವತಿ ಎಲ್ಲ ಜಲಾಶಯಗಳು ಮೈದುಂಬಿವೆ.
ಕಳೆದ ಸೋಮವಾರ ಜಲಾಶಯದಲ್ಲಿ 111.64 ಅಡಿ ನೀರು ಸಂಗ್ರಹವಾಗಿತ್ತು. 25905 ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿತ್ತು. ಜುಲೈ 5ರಂದು 113.60 ಅಡಿಗೆ ಏರಿಕೆಯಾಗಿದ್ದರೆ, 27302 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಜುಲೈ 6ರಂದು 114.70 ಅಡಿ ನೀರು ಸಂಗ್ರಹವಾಗಿದ್ದರೆ, ಜಲಾಶಯಕ್ಕೆ 29468 ಕ್ಯೂಸೆಕ್ ನೀರು ಹರಿದುಬರುತ್ತಿತ್ತು.
ಜುಲೈ 7ರಂದು ಕನ್ನಂಬಾಡಿ ಅಣೆಕಟ್ಟೆಯಲ್ಲಿ 116.94 ಅಡಿ ನೀರು ಸಂಗ್ರಹವಾಗಿತ್ತು. 33602 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಜುಲೈ 8ರಂದು 119.44 ಅಡಿ ನೀರಿದ್ದರೆ, ಜಲಾಶಯಕ್ಕೆ 33962 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಇಂದು ಜಲಾಶಯದಲ್ಲಿ 121.80 ಅಡಿ ನೀರು ಸಂಗ್ರಹವಾಗಿತ್ತು. ಒಟ್ಟಾರೆ ಜಲಾಶಯದಲ್ಲಿ 44.873 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ. ಜಲಾಶಯದಿಂದ 4817 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಶುಕ್ರವಾರವಷ್ಟೇ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೆ.ಆರ್.ಎಸ್.ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಜುಲೈ ತಿಂಗಳಲ್ಲೇ ಕಾವೇರಿಗೆ ಬಾಗೀನ ಅರ್ಪಿಸುವ ಕಾರ್ಯಕ್ರಮ ಏರ್ಪಡಿಸುವುದಾಗಿ ತಿಳಿಸಿದ್ದಾರೆ.