ಮಂಡ್ಯ; ಅಭಿವೃದ್ಧಿಯಲ್ಲಿ ಮಾದರಿಯಾದ ಮಾರೇನಹಳ್ಳಿ ಸರ್ಕಾರಿ ಶಾಲೆ
ಮಂಡ್ಯ, ಸೆಪ್ಟೆಂಬರ್ 19; ಎಲ್ಲರೂ ಕೈಜೋಡಿಸಿದರೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಹಾಸನ ಗಡಿಗೆ ಹೊಂದಿಕೊಂಡಂತಿರುವ ಸಂತೇಬಾಚಹಳ್ಳಿ ಹೋಬಳಿಯ ಭಾರತೀಪುರ ಕ್ಲಸ್ಟರ್ ವ್ಯಾಪ್ತಿಯ ಮಾರೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಶಾಲೆ ಸಾಕ್ಷಿಯಾಗಿದೆ.
ಈ ಶಾಲೆ ತರಗತಿಯ ವಿಚಾರದಲ್ಲಿ ಕಿರಿಯ ಶಾಲೆಯಾಗಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಹಿರಿಯ ಶಾಲೆಯಾಗಿ ಗಮನಸೆಳೆಯುತ್ತಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳೆಂದರೆ ಅಭಿವೃದ್ಧಿ ವಂಚಿತ ಶಾಲೆಗಳೆಂದೇ ಪರಿಚಿತವಾಗಿರುತ್ತವೆ. ಆದರೆ ಮಾರೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಶಾಲೆ ಮಾತ್ರ ಇತರೆ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಸಂಪೂರ್ಣ ಭಿನ್ನವಾಗಿದ್ದು, ಸೌಲಭ್ಯ ಹೊಂದಿದ ಅಭಿವೃದ್ಧಿಶೀಲ ಶಾಲೆಯಾಗಿದೆ ಎಂದರೆ ತಪ್ಪಾಗಲಾರದು.
ಶಿಕ್ಷಕರ ದಿನಾಚರಣೆ ವಿಶೇಷ; ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಿದ ಶಿಕ್ಷಕ
ಇಷ್ಟಕ್ಕೂ ಗ್ರಾಮೀಣ ಭಾಗದ ಈ ಶಾಲೆ ಇಷ್ಟೊಂದು ಅಭಿವೃದ್ಧಿ ಕಂಡಿದ್ದು ಹೇಗೆ? ಎಂಬುದನ್ನು ನೋಡಿದ್ದೇ ಆದರೆ ಇದು ಸರ್ಕಾರ ಮಾಡಿದ್ದಲ್ಲ. ಬದಲಿಗೆ ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಉನ್ನತೀಕರಣ ಸಮಿತಿ, ದಾನಿಗಳು, ಗ್ರಾಮಸ್ಥರು, ಶಾಲಾ ಶಿಕ್ಷಕರು ಹೀಗೆ ಎಲ್ಲರ ಶ್ರಮವಿರುವುದನ್ನು ಅಲ್ಲಗಳೆಯುವಂತಿಲ್ಲ.
ಪಠ್ಯಪುಸ್ತಕ ನೀಡದೆ ಶಾಲೆ ಆರಂಭಿಸಿದ್ದು ಏಕೆ? ಹೈಕೋರ್ಟ್ ಪ್ರಶ್ನೆ
ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಒಂದು ಸರ್ಕಾರಿ ಶಾಲೆಗೆ ಸುಣ್ಣಬಣ್ಣ ಬಳಿದು, ಕಲೆಯರಳಿಸಿ, ಆಕರ್ಷಣೀಯವಾಗಿಸಿ ಎಲ್ಲರೂ ಒಂದು ಕ್ಷಣ ಶಾಲೆಯತ್ತ ತಿರುಗಿ ನೋಡುವಂತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಅದನ್ನು ಮಾಡುವ ಮೂಲಕ ನಮ್ಮೂರಿನ ಶಾಲೆ ನಾವು ಇಲ್ಲಿಯೇ ಕಲಿಯಬೇಕೆಂಬ ಬಯಕೆಯನ್ನು ಮಕ್ಕಳಲ್ಲಿ ಹುಟ್ಟಿಸಿ, ಪೋಷಕರಿಗೂ ಮಕ್ಕಳನ್ನು ಸ್ಥಳೀಯ ಶಾಲೆಗೆ ದಾಖಲು ಮಾಡುವಂತೆ ಪ್ರೇರಣೆ ಮಾಡಿರುವುದು ಸಂತಸದ ವಿಚಾರ.
ಮಂಡ್ಯ; ಮನೆ ತಾರಸಿಯಲ್ಲಿ ಸೃಷ್ಟಿಯಾದ ಪುಷ್ಪಲೋಕ!
ಇದು ಶಾಲೆಯಲ್ಲ ಜ್ಞಾನ ದೇಗುಲ
ಮಾರೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಶಾಲೆಯನ್ನು ದೂರದಿಂದ ನೋಡಿದಾಗಲೇ ಶಾಲಾ ಕಾಂಪೌಂಡ್ ನಮ್ಮ ಗಮನಸೆಳೆಯುತ್ತವೆ. ಹೆಣ್ಣು ಭ್ರೂಣ ಹತ್ಯೆ ತಡೆಯುವ, ವಾಯು ಮಾಲಿನ್ಯ, ಗ್ರಾಮೀಣ ಪರಿಸರ, ಮಾನವನ ವಿಕಾಸವನ್ನು ಅರ್ಥಪೂರ್ಣವಾಗಿ ಚಿತ್ರಿಸಲಾಗಿದೆ. ಪ್ರವೇಶ ದ್ವಾರದ ಮೂಲಕ ಒಳಪ್ರವೇಶಿಸಿದ್ದೇ ಆದರೆ ಕೇಸರಿ, ಬಿಳಿ, ಹಸಿರು ಬಣ್ಣದಿಂದ ಕಂಗೊಳಿಸುವ ನೀರಿನ ಟ್ಯಾಂಕ್ ಅದರಾಚೆಗೆ ಶಾಲಾ ಗೋಡೆಯಲ್ಲಿ ವಿಜೃಂಭಿಸುವ ಕನ್ನಡದ ಬಾವುಟ, ಇನ್ನು ಬಿಸಿಯೂಟದ ಅಡುಗೆ ಮನೆಗೆ ಅನ್ನಪೂರ್ಣ ಅಡುಗೆ ಮನೆ ಎಂದು ಹೆಸರಿಸಲಾಗಿದ್ದರೆ, ಗೋಡೆಯಲ್ಲಿ ಪ್ರಾಣಿ, ಪಕ್ಷಿಗಳ ಚಿತ್ರಗಳು ಮತ್ತು ಆಂಗ್ಲ ಪದಗಳನ್ನು ಎ ಯಿಂದ ಝೆಡ್ ವರೆಗೆ ದೊಡ್ಡ ಮತ್ತು ಚಿಕ್ಕ ಅಕ್ಷರಗಳನ್ನು ಬರೆಯಲಾಗಿದೆ.
ಶಾಲೆಯ ಗೋಡೆಗಳ ಮೇಲೆ ಮಾಹಿತಿ ಚಿತ್ತಾರ
ಕೆ. ಆರ್. ಪೇಟೆ ತಾಲೂಕಿನ ಹಾಸನ ಗಡಿಗೆ ಹೊಂದಿಕೊಂಡಂತಿರುವ ಸಂತೇಬಾಚಹಳ್ಳಿ ಹೋಬಳಿಯ ಭಾರತೀಪುರ ಕ್ಲಸ್ಟರ್ ವ್ಯಾಪ್ತಿಯ ಮಾರೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಶಾಲೆ ಎಲ್ಲರ ಪ್ರಯತ್ನದಿಂದಾಗಿ ಇಷ್ಟು ಅಭಿವೃದ್ಧಿಯಾಗಿದೆ. ಶಾಲೆಯ ಗೋಡೆಯ ಮೇಲೆ ಗಣಿತಕ್ಕೆ ಸಂಬಂಧಿಸಿದ ಚಿಹ್ನೆಗಳು ಮಾತ್ರವಲ್ಲದೆ, ಸಾರಿಗೆ ವ್ಯವಸ್ಥೆ, ಕನ್ನಡದ ಅಕ್ಷರ ಮತ್ತು ಪದಗಳು, ಮನುಷ್ಯನ ದೇಹಕ್ಕೆ ಸಂಬಂಧಿಸಿದ ಅಂಗಾಂಗಗಳ ಚಿತ್ರಗಳನ್ನು ಕೂಡ ಬರೆಯಲಾಗಿದೆ.
ಶಿಕ್ಷಣ ಆಯೋಗಗಳ ಸಲಹೆ ಪಾಲನೆ
ಇದೆಲ್ಲವನ್ನು ಶಾಲಾಭಿವೃದ್ಧಿ ಉನ್ನತೀಕರಣ ಸಮಿತಿ, ಹಳೆಯ ವಿದ್ಯಾರ್ಥಿಗಳು, ದಾನಿಗಳು ಹೀಗೆ ಹಲವರ ಪ್ರಯತ್ನದಿಂದ ಮಾಡಿದ್ದು, ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆ ಯಾವುದೇ ರೀತಿಯಲ್ಲಿಯೂ ಕಡಿಮೆಯಾಗಿರಬಾರದೆಂಬ ಆಶಯವೂ ಆಗಿದೆ. ಮಕ್ಕಳು ಓದುವ ಪರಿಸರ ಸುಂದರವಾಗಿರಬೇಕು, ಕಲಿಯುವ ನಾಲ್ಕು ಗೋಡೆಯ ಕೊಠಡಿ ಅತ್ಯಾಕರ್ಷಕ ಮತ್ತು ಸ್ವಚ್ಛವಾಗಿರಬೇಕೆಂಬ ಶಿಕ್ಷಣ ಆಯೋಗಗಳ ಸಲಹೆಯನ್ನು ಇಲ್ಲಿ ಚಾಚೂ ತಪ್ಪದೆ ಪಾಲಿಸಿರುವುದು ಕಂಡು ಬರುತ್ತದೆ. ಇನ್ನು ಗೋಡೆಗಳಲ್ಲಿ ಚಿತ್ರಗಳನ್ನು ಕಲಾವಿದರು ಆಕರ್ಷಕವಾಗಿ ಬಿಡಿಸಿರುವುದು ಮಕ್ಕಳನ್ನು ಮಾತ್ರವಲ್ಲದೆ ದೊಡ್ಡವರನ್ನು ತಮ್ಮತ್ತ ಸೆಳೆಯುವಂತೆ ಮಾಡಿದೆ.
Recommended Video
ಗ್ರಾಮೀಣ ಶಾಲೆಗಳಿಗೆ ಮಾದರಿ
ಒಟ್ಟಾರೆಯಾಗಿ ಹೇಳಬೇಕೆಂದರೆ, ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲೂ ಇಂತಹದೊಂದು ಉತ್ತಮ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕೆಲಸ ಮಾಡಿರುವುದು ನಿಜಕ್ಕೂ ಶ್ಲಾಘನೀಯ ವಿಚಾರವಾಗಿದೆ. ಇವತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಬಹಳಷ್ಟು ಶಾಲೆಗಳತ್ತ ಸಂಬಂಧಿಸಿದವರು ಗಮನಹರಿಸದ ಕಾರಣದಿಂದಾಗಿ ಅವು ಅವಸಾನ ಅಂಚಿಗೆ ತಲುಪಿದೆ. ಎಲ್ಲರೂ ತಮ್ಮ ಊರಿನ ಶಾಲೆಯತ್ತ ಗಮನಹರಿಸಿದರೆ ಅವುಗಳು ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ.