ದಶಕಗಳಿಂದಲೂ ಸಾಮಾಜಿಕ ಚಳವಳಿಗಳ ಭಾಗವಾಗಿದ್ದ ಹೋರಾಟಗಾರ ತ್ರಿಮೂರ್ತಿ ನಿಧನ
ಬೆಂಗಳೂರು, ಡಿ. 26: ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಜನಶಕ್ತಿ, ಸಂವಿಧಾನ ಉಳಿವಿಗಾಗಿ ಕರ್ನಾಟಕ, ಜನಚಿಂತನಾ ಕೇಂದ್ರ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಯುವ ಹೋರಾಟಗಾರ ತ್ರಿಮೂರ್ತಿ ಮಂಡ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರಿನಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ದಲಿತರ ಸಾಂಸ್ಕೃತಿಕ ಪ್ರತಿರೋಧ, ಒಳಮೀಸಲಾತಿ ಹೋರಾಟದಲ್ಲಿಯೂ ಭಾಗಿಯಾಗಿದ್ದರು. ವೈಯಕ್ತಿಕ ಕಾರಣಗಳಿಂದ ಮಂಡ್ಯದಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂಲತಃ ಕುಂಬಳಗೋಡು ಬಳಿಯ ದೇವಗೆರೆಯವರಾದ ತ್ರಿಮೂರ್ತಿಯವರು 2010-11 ರಲ್ಲಿ ಸಾಮಾಜಿಕ ಚಳವಳಿಗೆ ಧುಮುಕಿದ್ದರು. ಭೂಮಿ - ವಸತಿ ಹೋರಾಟ, ಕೋಮು ಸೌಹಾರ್ದ ಚಳವಳಿ, ದಲಿತ ಚಳವಳಿ ಮತ್ತು ಮಹಿಳಾ ಚಳವಳಿಗಳಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದರು.

ಎಲ್ಲಾ ಜನಪರ ಚಳವಳಿಗಳ ಪರವಾಗಿ ತುಡಿಯುತ್ತಿದ್ದ ಅವರ ಅಕಾಲಿಕ ನಿಧನಕ್ಕೆ ಹಲವಾರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯು ಬೆಂಗಳೂರಿನ ಫ್ರೀಡಂ ಪಾರ್ಕ್ನ ಹೋರಾಟದ ಸ್ಥಳದಲ್ಲಿ ಸೋಮವಾರ ತ್ರಿಮೂರ್ತಿ ನೆನಪಿನ ಶ್ರದ್ಧಾಂಜಲಿ ಸಭೆ ನಡೆಸಿದೆ.
"ಸಂಘಟನೆಗೆ ಬರುವ ಮುನ್ನ ಎಂಎ ಓದುತ್ತಿರುವಾಗಲೇ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡವರು, ಏನಾದರೂ ಮಾಡಬೇಕು ಎಂದು ಚಡಪಡಿಸುತ್ತಿದ್ದವರು. ಕುಂಬಳಗೋಡು ಬಳಿ ಇರುವ ದೇವಗೆರೆ ಎಂಬ ಊರಿನಲ್ಲಿ ಹುಟ್ಟಿ ಬೆಳೆದ ತ್ರಿಮೂರ್ತಿ, ಬೆಂಗಳೂರಿನಲ್ಲಿ ಪೌರ ಕಾರ್ಮಿಕರ ಹೋರಾಟ ಹುರಿಗೊಳ್ಳುತ್ತಿದ್ದಾಗ ಬೆಳಂಬೆಳಗ್ಗೆ ಶ್ರಮಿಕರ ವಸತಿ ಮತ್ತು ಕೆಲಸದ ಪ್ರದೇಶಗಳಲ್ಲಿ ಅಲೆದೆಲೆದು ಸಂಘಟನೆ ಬಲಪಡಿಸಲು ಶ್ರಮಿಸಿದವರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಚಟುವಟಿಕೆಗಳು ಸಕ್ರಿಯವಾಗಿದ್ದಾಗ ಅದರ ದಕ್ಷ ಸಂಘಟಕರಾಗಿ ದುಡಿದವರು. ಮಂಗಳೂರಿನ ಸಹಬಾಳ್ವೆ ಸಾಗರ ಸಮಾವೇಶ ಸಂಘಟಿಸುವುದರಲ್ಲಿ ಮುಖ್ಯ ಜವಾಬ್ದಾರಿ ನಿರ್ವಹಿಸಿದವರು. ಸಂವಿಧಾನ ಉಳಿವಿಗಾಗಿ ಕರ್ನಾಟಕ ಅಭಿಯಾನ ಶುರುವಾದಾಗ ಅದರ ಸೋಷಿಯಲ್ ಮೀಡಿಯಾ ಕೆಲಸವನ್ನು ಮೈಮೇಲೆ ಹೊತ್ತು ಮಾಡಿದವರು.

ಪೆಡೆಸ್ಟ್ರಿಯನ್ ಪಿಚ್ಚರ್ಸಸ್ ನ ಕಾರ್ಯಚಟುವಟಿಕೆಗಳಲ್ಲಿ, ಲಗೋರಿ ಗುಂಪಿನ ಚಾಲನೆಯಲ್ಲಿ ಮನಸ್ಸಿಟ್ಟು ಕೆಲಸ ಮಾಡಿದವರು. ವೈಚಾರಿಕ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ವೈಚಾರಿಕ ಗ್ರಹಿಕೆಯನ್ನು ಬೆಳೆಸಬೇಕು ಎಂಬ ಉತ್ಕಟ ಬಯಕೆಯೊಂದಿಗೆ ಜನ ಚಿಂತನಾ ಕೇಂದ್ರದ ಕೇಂದ್ರ ತಂಡದ ಭಾಗವಾಗಿ ಅನೇಕ ಜವಬ್ದಾರಿಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು, ಮಾತ್ರವಲ್ಲದೆ ಕರ್ನಾಟಕದ ಸಮಸ್ತ ಚಳವಳಿಗಳೂ ತನ್ನವೆಂದು ತೊಡಗಿಸಿಕೊಂಡವರು..ಮಿತಿ, ದೌರ್ಬಲ್ಯಗಳಿಲ್ಲದ ವ್ಯಕ್ತಿಗಳು ಜಗತ್ತಿನಲ್ಲೇ ಇರಲು ಸಾಧ್ಯವಿಲ್ಲ. ಅವು ಸಣ್ಣ ಭಾಗ. ಅವುಗಳ ದಾಟಿ ತ್ರಿಮೂರ್ತಿ ವ್ಯಕ್ತಿತ್ವ ಬಹಳ ಗಟ್ಟಿತನದ್ದು. ಇಂತಹ ದಿಟ್ಟ ಸಂಗಾತಿಯ ಅಗಲಿಕೆ ಸಂಘಟನೆಗೆ ಮತ್ತು ಹೋರಾಟದ ವಲಯಕ್ಕೆ ಅಘಾತ ನೀಡಿದೆ" ಎಂದು ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸಂತಾಪ ವ್ಯಕ್ತಪಡಿಸಿದೆ.
ತ್ರಿಮೂರ್ತಿಯವರ ಸ್ವಗ್ರಾಮ ದೇವಗೆರೆಯಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected] ಈ ಸಂಸ್ಥೆಗಳ ಸಹಾಯವನ್ನು ಪಡೆಯಬಹುದು.












Click it and Unblock the Notifications