ಸುಪ್ರೀಂ ಆದೇಶ ಪಾಲನೆ, ತಮಿಳುನಾಡಿಗೆ ಹರಿದ ಕಾವೇರಿ
ಮಂಡ್ಯ, ಸೆಪ್ಟೆಂಬರ್ 07 : ರೈತರ, ವಿವಿಧ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲು ಆರಂಭಿಸಿದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿರುವ ಕರ್ನಾಟಕ ಸರ್ಕಾರ ಕೆಆರ್ಎಸ್ ಮತ್ತು ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿದೆ.
ಮಧ್ಯರಾತ್ರಿ 12.05ಕ್ಕೆ ಕೆಆರ್ಎಸ್ನಿಂದ ನೀರು ಬಿಡಲು ಆರಂಭಿಸಲಾಗಿದೆ. ಮಂಡ್ಯದಲ್ಲಿರುವ ಕೆಆರ್ಎಸ್ ಜಲಾಶಯದಿಂದ 11 ಸಾವಿರ ಕ್ಯೂಸೆಕ್ ಮತ್ತು ಕಬಿನಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ.[ಕಾವೇರಿ: ಸರ್ವಪಕ್ಷ ಸಭೆಯಲ್ಲಿ ಹೊರಬಿದ್ದ ಜನವಿರೋಧಿ ನಿರ್ಧಾರ!]

ನ್ಯಾಯಾಲಯ 15,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಆದೇಶ ನೀಡಿದೆ. ಆದರೆ, ಕರ್ನಾಟಕ ಸರ್ಕಾರ ಕೆಆರ್ಎಸ್ನಿಂದ 11, ಕಬಿನಿಯಿಂದ 5 ಒಟ್ಟು 16 ಸಾವಿರ ಕ್ಯೂಸೆಕ್ ನೀರನ್ನು ಹರಿಸುತ್ತಿದೆ. ಕುಡಿಯುವ ನೀರಿನ ಬಳಕೆಯ ಉದ್ದೇಶದಿಂದ 1 ಸಾವಿರ ಕ್ಯೂಸೆಕ್ ನೀರನ್ನು ಹೆಚ್ಚಿಗೆ ಬಿಡಲಾಗುತ್ತಿದೆ.[ಬಂಗಾರಪ್ಪ ತೆಗೆದುಕೊಂಡ ನಿರ್ಧಾರ ಸಿದ್ದುರಿಂದ ಸಾಧ್ಯವೆ?]
ಸರ್ಕಾರ ನೀರು ಹರಿಸುವ ಸೂಚನೆ ತಿಳಿದು ರೈತರು ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಿದರು. ಬುಧವಾರ ಬೆಳಗ್ಗೆಯೂ ಶ್ರೀರಂಗಪಟ್ಟಣ ಬಳಿ ಇರುವ ವೆಲ್ಲೆಸ್ಲಿ ಸೇತುವೆ ಬಳಿ ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಇಂದೂ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.[ಕನ್ನಡಿಗರಿಗೇ ಕಾವೇರಿ 'ನೀರು ಕುಡಿಸಿದ' ರಾಜಕಾರಣಿಗಳು]
ಕಾವೇರಿ ತೀರ್ಪಿನ ಕುರಿತಂತೆ ಜನರು ಭಾವೋದ್ವೇಗಕ್ಕೆ ಒಳಗಾಗಬಾರದಾಗಿ ಮತ್ತು ಯಾವುದೇ ಪ್ರಚೋದನೆಗೆ ಒಳಗಾಗದೇ, ಶಾಂತಿ ಕಾಪಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ #ಕಾವೇರಿ
— CM of Karnataka (@CMofKarnataka) September 6, 2016
ಸಿದ್ದರಾಮಯ್ಯ ಹೇಳಿದ್ದರು : ಸುಪ್ರೀಂಕೋರ್ಟ್ ಹತ್ತು ದಿನಗಳ ಕಾಲ 15,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಿ ಎಂದು ಆದೇಶ ನೀಡಿದೆ. ಮಂಗಳವಾರ ಸಂಜೆ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಸಂವಿಧಾನಬದ್ಧವಾಗಿ ರಚನೆಯಾಗಿರುವ ಒಂದು ಸರ್ಕಾರವಾಗಿ ನಮ್ಮ ರಾಜ್ಯ ಸರ್ಕಾರವು ನ್ಯಾಯಾಲಯದ ಆದೇಶ ಉಲ್ಲಂಘಿಸುವುದು ಕಷ್ಟಸಾಧ್ಯ. ಆದ್ದರಿಂದ ನೀರು ಬಿಡಲಾಗುತ್ತದೆ ಎಂದು ಹೇಳಿದ್ದರು.












Click it and Unblock the Notifications