ಮಂಡ್ಯದಲ್ಲಿ ಜೆಡಿಎಸ್ ಗೆಲುವಿಗೆ ಟೊಂಕಕಟ್ಟಿ ನಿಂತ ಡಾ. ಲಕ್ಷ್ಮೀ ಅಶ್ವಿನ್ ಗೌಡ
ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಪ್ರಾಮುಖ್ಯತೆ ಹಾಗು ಪ್ರಾಶ್ಯಸ್ತ್ಯತೆ ಹೊಂದಿರುವ ಜೆಡಿಎಸ್ ಗೆ ಮಂಡ್ಯ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ತವರು ಹಾಸನಕ್ಕಿಂತಲೂ ಹೆಚ್ಚು ಅಭಿಮಾನ ತೋರುವ ಹಾಗು ದೇವೇಗೌಡ ಹಾಗು ಕುಮಾರಸ್ವಾಮಿಯನ್ನು ಒಪ್ಪಿ ಅಪ್ಪಿಕೊಂಡಿರುವ ಜಿಲ್ಲೆ. ಮಂಡ್ಯ ಜೆಡಿಎಸ್ ನ ಭದ್ರ ಕೋಟೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ.
ಇಂದಿನ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಹಠದಿಂದ ಜೆಡಿಎಸ್ ಚುನಾವಣಾ ಹೋರಾಟ, ಸಮಾವೇಶಗಳು, ತಂತ್ರಗಾರಿಕೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ - ಯಾವುದರಲ್ಲೂ ರಾಷ್ಟ್ರೀಯ ಪಕ್ಶಗಳಿಗೇನೂ ಕಡಿಮೆಯಿಲ್ಲವೆಂಬಂತೆ ಹೋರಾಟ ನಡೆಸುತ್ತಿದೆ. ದೇವೇಗೌಡ ಹಾಗು ಕುಮಾರಸ್ವಾಮಿಗೆ ತಮ್ಮ ಪಕ್ಷದ ಇತಿಮಿತಿಯ ಅರಿವಿದ್ದು, ಸ್ವತಂತ್ರವಾಗಿ ಸರ್ಕಾರ ರಚಿಸಲಾಗದಿದ್ದರೂ, ಸರ್ಕಾರದ ಭಾಗಯಾಗುವ ಸಂಪೂರ್ಣ ಆತ್ಮವಿಶ್ವಾಸವಿದ್ದಂತೆ ಗೋಚರಿಸುತ್ತಿದೆ.
ನಿಮ್ಮ ಪಕ್ಷದಲ್ಲಿಯೇ ಉಗ್ರರಿದ್ದಾರೆ: ಮೋದಿಗೆ ಎಚ್ಡಿಕೆ ತಿರುಗೇಟು
ಜೆಡಿಎಸ್ ತನ್ನ ಗುರಿ ತಲುಪಬೇಕಾದರೆ, ತನ್ನ ಪ್ರಾಬಲ್ಯ ಹೆಚ್ಚಿರುವ ಹಳೆ ಮೈಸೂರು ಭಾಗದಲ್ಲಿ ಅತಿಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವುದು ಮೊದಲ ಆದ್ಯತೆಯಾಗಿರುತ್ತದೆ. ಅದರಲ್ಲೂ ಮಂಡ್ಯ ಹಾಗು ಹಾಸನ ಜಿಲ್ಲೆಗಳ ತಲಾ 7 ಸ್ಥಾನಗಳಲ್ಲೂ ನಿಶ್ಚಿತವಾಗಿ ಗೆಲ್ಲಲೇಬೇಕೆಂಬ ಪಣತೊಟ್ಟಂತಿದೆ. ಹಾಗೆಂದ ಮಾತ್ರಕ್ಕೆ ಮಂಡ್ಯ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ಗೆಲ್ಲುವುದು ಅಷ್ಟು ಸುಲಭವಲ್ಲ.
'ಸಿದ್ದರಾಮಯ್ಯ ಅವರಿಂದ ಮಂಡ್ಯ ಕಾಂಗ್ರೆಸ್ ಮುಕ್ತ'
ಏಕೆಂದರೆ ಕಾಂಗ್ರೆಸ್ ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆ ಒಡ್ಡುತ್ತಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ನ ವರಿಷ್ಠ ದೇವೇಗೌಡ್ರು ಒಮ್ಮೆ ಹಾಗು ಕುಮಾರಸ್ವಾಮಿ ಒಂದು ಬಾರಿ ಅಭ್ಯರ್ಥಿಯ ಪರ ಪ್ರಚಾರದಲ್ಲಿ ತೊಡಗಿಸಿಕೊಂಡರೆ ಹೆಚ್ಚು. ಕಾರಣ ಜೆಡಿಎಸ್ ಗಿರುವ ಸ್ಟಾರ್ ಪ್ರಚಾರಕರ ಕೊರತೆ. ಆದರೆ ಬಹುತೇಕ ಪ್ರತಿದಿನವೂ ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳ ಪರ ಮತಯಾಚನೆ ಹಾಗು ಪ್ರಚಾರ ಕಾರ್ಯಗಳಲ್ಲಿ ಎಲ್ಲ 7 ಕ್ಷೇತ್ರಗಳಲ್ಲೂ ಸಾಮಾನ್ಯವಾಗಿ ಕಾಣಿಸುತ್ತಿರುವುದು ಓರ್ವ ಕಿರಿಯ ವಯಸ್ಸಿನ ಹೆಣ್ಣುಮಗಳು - ಡಾ.ಲಕ್ಷ್ಮಿ ಅಶ್ವಿನ್ ಗೌಡ.
ಕ್ಷೇತ್ರ ಪರಿಚಯ : ಸಕ್ಕರೆ ನಾಡು ಮಂಡ್ಯಕ್ಕೆ ಯಾರು ಹೊಸ ಅಧಿಪತಿ?
ಕಳೆದೆರಡು ತಿಂಗಳಿಂದೀಚೆಗೆ, ಜಿಲ್ಲೆಯಲ್ಲಿ ಕುಮಾರಸ್ವಾಮಿಯವರ 'ಕುಮಾರಪರ್ವ' ಕಾರ್ಯಕ್ರಮದಿಂದಿಡಿದು, ಹಳ್ಳಿ ಹಳ್ಳಿಗಳ ಭೇಟಿ, ರೋಡ್ ಶೋ, ದೇವೇಗೌಡರ ಸಮಾವೇಶ, ಅಭ್ಯರ್ಥಿಗಳ ಜೊತೆ ಮತಯಾಚನೆ, ಮನೆ ಮನೆ ಭೇಟಿ - ಹೀಗೆ ಹಲವಾರು ಕಾರ್ಯಕರ್ಮಗಳಲ್ಲಿ ಡಾ. ಲಕ್ಷ್ಮೀ ಅಶ್ವಿನ್ ಗೌಡ ಅವರು ಭಾಗಿಯಾಗಿ ಜೆಡಿಎಸ್ ಪರವಾಗಿ ಶ್ರಮದಾನ ಮಾಡುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯಗಳು.
ಯಾರಿದು ಡಾ.ಲಕ್ಷ್ಮಿ ಅಶ್ವಿನ್ ಗೌಡ ?
ಲಕ್ಷ್ಮಿ ಓದು ಹಾಗು ವೃತ್ತಿಯಲ್ಲಿ ವೈದ್ಯೆ. ಹುಬ್ಬಳ್ಳಿಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಎಂ.ಬಿ.ಬಿ.ಎಸ್. ಮುಗಿಸಿದ ನಂತರ ತಮ್ಮ ಮೊದಲ ಪ್ರಯತ್ನದಲ್ಲೇ 2013ರಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ದೇಶದ ವಿವಿಧ ಭಾಗಗಳಲ್ಲಿ ತರಬೇತಿ ಪಡೆದು ಕೋಲ್ಕತ್ತಾದಲ್ಲಿ 2015ರ ಹೊತ್ತಿಗೆ ಐ.ಆರ್.ಎಸ್. ಅಧಿಕಾರಿಯಾಗಿ ಭಾರತ ಸರ್ಕಾರದ ರೈಲ್ವೆ ಇಲಾಖೆಯ ಸೇವೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು. ವೈದ್ಯಕೀಯ ಶಿಕ್ಷಣ ಮುಗಿದಾಗಿನಿಂದಲೂ ತಮ್ಮಲ್ಲಿದ್ದ ಜನಸೇವೆಯ ತುಡಿತಕ್ಕಾಗಿ ಐ.ಎ.ಎಸ್. ಪರೀಕ್ಷೆ ಬರೆದು ಅಧಿಕಾರಿಯಾಗಿ, ತಾನಂದುಕೊಂಡಷ್ಟು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿನ ಹೆಣ್ಣು ಮಕ್ಕಳ ಬದುಕಿನ ಸುಧಾರಣೆಯನ್ನು ತರುವುದು ಸುಲಭದ್ದಲ್ಲವೆಂದು ಅರಿತು, 2018 ಫೆಬ್ರವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಪೂರ್ಣಾವಧಿ ಮಂಡ್ಯ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ನಟಿ ರಮ್ಯಾ ವಿರುದ್ದ ಸ್ಪರ್ಧೆ: ಸರಕಾರೀ ಹುದ್ದೆ ತ್ಯಜಿಸಿದ ಜೆಡಿಎಸ್ ಅಭ್ಯರ್ಥಿ?
ಮಂಡ್ಯದಲ್ಲೇ ಲಕ್ಷ್ಮೀ ಪ್ರಚಾರ ಏಕೆ?
ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊಡಿಹಳ್ಳಿಯ ಮಗಳು ಲಕ್ಷ್ಮಿ ಅಶ್ವಿನ್ ಗೌಡ ಅವರು. ಶಾಲಾ ಶಿಕ್ಷಣವನ್ನು ಮಳವಳ್ಳಿಯ ಕನ್ನಡ ಮಾಧ್ಯಮದಲ್ಲೇ ಮುಗಿಸಿದ್ದವರು. ಹಾಗು ಲಕ್ಷ್ಮಿಯವರ ಪತಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನವರಾದ್ದರಿಂದ ಹಾಗೆಯೇ ಕೆಲವು ವರ್ಷಗಳಿಂದ ತನ್ನಿಂದಾಗುವ ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಲಕ್ಷ್ಮಿ, ಮಂಡ್ಯದಲ್ಲಿ ಒಳ್ಳೆಯ ಒಡನಾಟವನ್ನಿರಿಸಿಕೊಂಡಿದ್ದವರು.
ಲೋಕಸಭೆ ಚುನಾವಣೆಯಲ್ಲಿ ರಮ್ಯಾ ವಿರುದ್ಧ ಡಾ.ಲಕ್ಷ್ಮಿ?
ವಿಧಾನಸಭೆ ಚುನಾವಣೆಯಲ್ಲೇ ತನ್ನ ಪರಿಚಯ ಮಾಡಿಕೊಂಡು ಎಲ್ಲ ಅಭ್ಯರ್ಥಿಗಳ ಗೆಲುವಿಗೂ ಶ್ರಮಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಜಾಣ್ಮೆಯ ನಡೆಯನ್ನು ಕಂಡು ಮಂಡ್ಯ ಜನತೆ ಡಾ.ಲಕ್ಷ್ಮಿಯವರ ಬಗೆಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಎಲ್ಲ ನಡೆಗೂ ದೊಡ್ಡಗೌಡರ ಲೆಕ್ಕಾಚಾರದ ನಡೆಗಳೆಂದೇ ಎಂದು ವಿಶ್ಲೇಷಿಸಲಾಗುತ್ತಿದೆ. ಮೇಲಾಗಿ, ಫೆಬ್ರವರಿ ತಿಂಗಳಲ್ಲಿ ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಕುಮಾರಪರ್ವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸಾವಿರಾರು ಜನರ ಮುಂದೆಯೇ ಡಾ.ಲಕ್ಷ್ಮಿಯನ್ನು ತನ್ನ ತಂಗಿಯಾಗಿ ಪರಿಚಯಮಾಡಿಕೊಟ್ಟರು. ಅಂದಿನಿಂದ ಮಂಡ್ಯದ 7 ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವಿಗಾಗಿ ಶ್ರಮಿಸುವ ಪಣತೊಟ್ಟು ಟೊಂಕಕಟ್ಟಿನಿಂತವರಂತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೀರಂಗಪಟ್ಟಣದ ಪ್ರಚಾರಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದ ಡಾ.ಲಕ್ಷ್ಮಿ ಯವರನ್ನು ಮಾತನಾಡಿಸಿದಾಗ....
ಕುಮಾರಣ್ಣನನ್ನು ಮುಖ್ಯಮಂತ್ರಿಯಾಗಿ ನೋಡಬೇಕು
1. ಜೆಡಿಎಸ್ ನಲ್ಲಿ ನಿಮ್ಮ ಪಾತ್ರ ಅಥವಾ ಪದವಿ ಏನು?
ನಾನು ಕುಮಾರಣ್ಣನ ಸೇನೆಯ ಒಬ್ಬ ದಿಟ್ಟ ಹೋರಾಟಗಾರ್ತಿ ಅಷ್ಟೇ.
2. ಕರ್ನಾಟಕದಲ್ಲಿ ನಿಮ್ಮ ಗೆಲುವಿನ ಗುರಿ ಎಷ್ಟು?
113 ಸರಳ ಬಹುಮತಕ್ಕೆ ಬೇಕಿರುವಷ್ಟು ಸ್ಥಾನಗಳನ್ನು ಗೆಲ್ಲುವುದು, ಕುಮಾರಣ್ಣನನ್ನು ಮುಖ್ಯಮಂತ್ರಿಯಾಗಿ ನೋಡುವುದು.
3. ಒಬ್ಬ ವೈದ್ಯೆಯಾಗಿ, ನಂತರ ಐ.ಆರ್.ಎಸ್. ಅಧಿಕಾರಿಯಾಗಿ, ಅದೆಲ್ಲವನ್ನು ಬಿಟ್ಟು ರಾಜಕಾರಣಕ್ಕೆ ಬರಲು ಕಾರಣ?
ನಾನು ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದಿಂದ ಬಂದವಳು. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಓದಿ, ಈ ಹಂತಕ್ಕೆ ಬೆಳೆದವಳು. ಈ ದೇಶ ಸುಧಾರಣೆಯಾಗಬೇಕಾದರೆ, ಪ್ರತಿಯೊಬ ಹೆಣ್ಣುಮಗಳೂ ಓದಿ ವಿದ್ಯಾವಂತೆಯಾಗಬೇಕು, ಒಳ್ಳೆಯ ಆರೋಗ್ಯ ವ್ಯವಸ್ಥೆ ಸಿಗಬೇಕು. ಒಬ್ಬ ವೈದ್ಯೆಯಾಗಿ, ಅಧಿಕಾರಿಯಾಗಿ ಸಮಾಜವನ್ನು ನೋಡಿದ್ದೇನೆ. ರಾಜಕಾರಣವೊಂದೇ ಸಮಾಜ ಸುಧಾರಣೆಗೆ ಸರಿಯಾದ ಮಾರ್ಗವೆಂದು ಅರಿತಿದ್ದೇನೆ.
ದೇವೇಗೌಡರೇ ನನಗೆ ಸ್ಫೂರ್ತಿ
4. ಜೆಡಿಎಸ್ ಏಕೆ?
ಕನ್ನಡಿಗ ಪ್ರಧಾನಿಯಾಗಿದ್ದ ಮಾನ್ಯ ದೇವೇಗೌಡರ ಸುದೀರ್ಘ 60 ವರ್ಷಗಳ ರಾಜಕಾರಣದ ಜೀವನವನ್ನು ತಿಳಿದುಕೊಂಡಿದ್ದೇನೆ. ಅವರೇ ನಂಗೆ ಸ್ಫೂರ್ತಿ. ಗ್ರಾಮೀಣ ಭಾಗದಿಂದ ಬಂದ ಒಬ್ಬ ಸಾಮಾನ್ಯ ವ್ಯಕ್ತಿ ಕನ್ನಡ ನಾಡಿಗಾಗಿ ಎಷ್ಟೆಲ್ಲ ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾರೆ. ಹಾಗೆಯೆ ನಾನು ಪ್ರಾದೇಶಿಕತೆ, ಪ್ರಾದೇಶಿಕ ಪಕ್ಷಗಳ ಬಗೆಗೆ ಒಲವಿರುವವಳು. ಕೇಂದ್ರ ಸರ್ಕಾರದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ನನಗೆ, ನನ್ನ ನಾಡಿಗೆ ಬೇಕಾದ ಯೋಜನೆಗಳನ್ನು, ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂಬ ಅರಿವಿದೆ.
5. ಮಂಡ್ಯದ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೀರಾ?
ಮಂಡ್ಯದ ಏಳೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ.
6. ಮೇಲುಕೋಟೆಯಲ್ಲಿ ಸಂಸದ ಪುಟ್ಟರಾಜು ದರ್ಶನ ಪುಟ್ಟಣ್ಣಯ್ಯ ವಿರುದ್ಧ ಗೆಲ್ಲಲು ಸಾಧ್ಯವೇ?
ಸ್ಪರ್ಧೆ ಇರುವುದು ನಿಜ. ಆದರೆ ಗೆಲುವು ನಮ್ಮದೇ.
ಕುಮಾರಣ್ಣನ ಪರ ಸಕಾರಾತ್ಮಕ ಅಭಿಪ್ರಾಯ
7. ನಾಗಮಂಗಲ ಹಾಗು ಬೇರೆ ಕ್ಷೇತ್ರಗಳಲ್ಲಿ ಜೆಡಿಎಸ್ ಪರಿಸ್ಥಿತಿ ಹೇಗಿದೆ ?
ನಾಗಮಂಗಲದಲ್ಲಿ ನಮ್ಮ ಅಭ್ಯರ್ಥಿ ಸುರೇಶ್ ಗೌಡರು ನಿರಾಯಾಸವಾಗಿ ಗೆಲ್ಲುತ್ತಾರೆ. ಮೋಸ ಮಾಡಿದವರಿಗೆ ಜನ ತಕ್ಕ ಪಾಠ ಕಲಿಸಲು ಕಾತುರರಾಗಿದ್ದಾರೆ. ಇನ್ನು ಮಳವಳ್ಳಿಯಲ್ಲೂ ಡಾ.ಅನ್ನದಾನಿಯವರ ಪರ ಜನರಿದ್ದು, ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅನಾಯಾಸವಾಗಿ ಗೆಲ್ಲುತ್ತಾರೆ.
ಹಾಗೆಯೆ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಕ್ಷೇತ್ರಗಳೆಲ್ಲದರಲ್ಲೂ ಕುಮಾರಣ್ಣನ ಪರವಾದ ಸಕಾರಾತ್ಮಕ ಅಭಿಪ್ರಾಯವಿದ್ದು, ಮಂಡ್ಯ ಜಿಲ್ಲೆಯಾದ್ಯಂತ ಅತ್ಯದ್ಭುತ ಫಲಿತಂಶ ನೀಡುತ್ತೇವೆ.