ಗೆಲುವಿಗಾಗಿ ದೇವೇಗೌಡರ ಮುಂದಿನ ರಣತಂತ್ರ ಏನಿರಬಹುದು?
Recommended Video

ಮಂಡ್ಯ, ಏಪ್ರಿಲ್ 01: ಕಳೆದ 20 ಚುನಾವಣೆಗಳನ್ನು ಕಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ 21ನೇ ಚುನಾವಣೆ ವಿಭಿನ್ನ, ವಿಶಿಷ್ಟವಾಗಿದೆಯಲ್ಲದೆ, ಹೈವೊಲ್ಟೇಜ್ ಹೊಂದಿರುವ ಕಾರಣ ಇಡೀ ರಾಜ್ಯದ ಜನ ಇತ್ತ ಮುಖ ಮಾಡಿನೋಡುವಂತೆ ಮಾಡಿದೆ.
ಇದೀಗ ಎಲ್ಲರ ಕುತೂಹಲ ಸ್ವತಂತ್ರ ಅಭ್ಯರ್ಥಿಯಾಗಿರುವ ಸುಮಲತಾ ಅವರು ಸ್ವಾಭಿಮಾನದ ಕಹಳೆ ಊದುತ್ತಾರಾ? ನಿಖಿಲ್ ಕುಮಾರ ಸ್ವಾಮಿ ತೆನೆ ಹೊತ್ತು ಕುಣಿದಾಡುತ್ತಾರಾ? ಎಂಬುದರ ಸುತ್ತಲೇ ಸುಳಿದಾಡುತ್ತಿದೆ.
ಇಲ್ಲಿ ಸುಮಲತಾ ಅವರು ಗೆಲುವಿಗಾಗಿ ಹೋರಾಡುತ್ತಿದ್ದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ದಳಪತಿಗಳು ಎದುರಾಳಿ ಸುಮಲತಾ ಅವರನ್ನು ಹೇಗೆ ಸೋಲಿಸಬಹುದು ಎಂಬುದರ ಬಗ್ಗೆಯೇ ತಂತ್ರ ರೂಪಿಸುತ್ತಿರುವುದು ಗೌಪ್ಯವಾಗಿ ಉಳಿದಿಲ್ಲ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚುನಾವಣೆಯ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ನಾಯಕರು ಗೆಲುವಿನ ತಂತ್ರವನ್ನು ಮಾಡುತ್ತಿದ್ದು, ಎದುರಾಳಿ ಸುಮಲತಾ ಅವರ ವಿರುದ್ಧವೇ ಆರೋಪ ಮಾಡಲು ಆರಂಭಿಸಿದ್ದಾರೆ. ಬಹಿರಂಗವಾಗಿಯೇ ಜಾತಿ ಎಳೆದು ತರುತ್ತಿದ್ದಾರೆ? ಸುಮಲತಾ ಅವರೊಬ್ಬ ಹೆಣ್ಣು ಮಗಳು ಎಂಬುದನ್ನು ಮರೆತು ಅವರ ವಿರುದ್ಧವೇ ಹಗುರವಾಗಿ ಮಾತನಾಡತೊಡಗಿದ್ದಾರೆ. ಮುಂದೆ ಓದಿ...
ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಸಂಸದ ಜೆಡಿಎಸ್ ಮುಖಂಡ ಎಲ್.ಆರ್. ಶಿವರಾಮೇಗೌಡ ಅವರು ನಾಗಮಂಗಲದ ಗಂಡು ನಾನು. ಅಂಬರೀಶ್ ಅವರನ್ನು ರಾಜಕೀಯಕ್ಕೆ ತಂದಿದ್ದೇ ನಾನು. ಅಂಬರೀಶ್ನ್ನು ಕರ್ಣ ಅಂತಾರೆ ಆತ ಯಾವ ದಾನ ಮಾಡಿದ್ದಾನೆ? ಮಂಡ್ಯಕ್ಕಾಗಿ ಏನು ಮಾಡಿದ್ದಾನೆ? ಅಂಬರೀಶ್ನ ಗೆಲ್ಲಿಸಿದ್ದು, ರಮ್ಯಾಳನ್ನು ಸೋಲಿಸಿದ್ದು ನಾನೇ ಎಂದೆಲ್ಲ ಮಾತನಾಡುತ್ತಾ? ಈಗಾಗಲೇ ಸ್ವರ್ಗಸ್ಥರಾಗಿರುವ ಅಂಬರೀಶ್ ಅವರನ್ನು ಸುಖಾ ಸುಮ್ಮನೆ ರಾಜಕೀಯದ ಸಂಘರ್ಷಕ್ಕೆ ಎಳೆದು ತರುತ್ತಿದ್ದಾರೆ.
ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?
ಇವರ ಮಾತುಗಳಿಗೆ ಸುತ್ತಮುತ್ತ ನೆರೆದವರಿಂದ ಚಪ್ಪಾಳೆಯೇನೋ ಸಕತ್ತಾಗಿಯೇ ಸಿಗುತ್ತಿದೆ. ಆದರೆ ಮಂಡ್ಯದಾಚೆಗೆ ಇವರ ಆಟಾಟೋಪ ಮತ್ತು ಕೀಳುಮಟ್ಟದ ಹೇಳಿಕೆಗಳನ್ನೆಲ್ಲ ಗಮನಿಸುತ್ತಿರುವ ಜನ ಯಾವ ರೀತಿಯಲ್ಲಿ ಆಲೋಚಿಸಬಹುದು ಎಂಬುದನ್ನು ದಳಪತಿಗಳು ಮರೆಯುತ್ತಿದ್ದಾರೆ.
ಕಲಾವಿದರನ್ನು ಗೌರವಿಸುವವರು, ಪ್ರೀತಿಸುವವರು, ಅಭಿಮಾನಿಸುವವರು ರಾಜ್ಯದಾದ್ಯಂತ ಇದ್ದಾರೆ. ಇವರ ವಿವದಾತ್ಮಕ ಹೇಳಿಕೆಗಳು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸ್ವಪಕ್ಷದ ಅಭ್ಯರ್ಥಿಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದನ್ನೇ ಮರೆತಿರುವುದು ಎದ್ದು ಕಾಣುತ್ತಿದೆ. ಮುಂದೆ ಓದಿ...

ಜೆಡಿಎಸ್ ಲೆಕ್ಕಾಚಾರ ಏನಿತ್ತು?
ಮಂಡ್ಯದಲ್ಲಿ ಅಂಬರೀಶ್ ನಂತರ ಅವರ ಕುಟುಂಬ ರಾಜಕೀಯಕ್ಕೆ ಬರಲ್ಲ. ಹೇಗೂ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿರುವ ಕಾರಣ ಆ ಪಕ್ಷದ ನಾಯಕರು ತುಟಿ ಬಿಚ್ಚಲ್ಲ. ಇನ್ನೂ ಬಿಜೆಪಿ ಅಸ್ತಿತ್ವ ಕಂಡು ಕೊಳ್ಳಲು ಪರದಾಡುತ್ತಿರುವುದರಿಂದ ಮಂಡ್ಯದಲ್ಲಿ ಜೆಡಿಎಸ್ ನಿಂದ ಯಾರನ್ನೇ ಕಣಕ್ಕಿಳಿಸಿದರೂ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂಬುದು ಜೆಡಿಎಸ್ ನ ಲೆಕ್ಕಾಚಾರವಾಗಿತ್ತು. (ಇದಕ್ಕೆ ಸಾಕ್ಷಿ ಎಂಬಂತೆ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಳೆದ ಹಲವು ವರ್ಷಗಳಿಂದ ಸೋಲನ್ನೇ ಅನುಭವಿಸುತ್ತಾ ಬಂದಿದ್ದ ಎಲ್.ಆರ್. ಶಿವರಾಮೇಗೌಡರು ಗೆದ್ದು ಆರು ತಿಂಗಳ ಮಟ್ಟಿಗೆ ಸಂಸದರಾಗಿದ್ದರು) ಹೀಗಾಗಿಯೇ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ದೇವೇಗೌಡರ ಕುಟುಂಬ ಮುಂದಾಗಿತ್ತು.

ಇದು ದೇವೇಗೌಡರ ಲೆಕ್ಕಾಚಾರ
ಹಾಸನದಲ್ಲಿಯೂ ಇದೇ ಪರಿಸ್ಥಿತಿಯಿತ್ತು. ಅಲ್ಲಿ ದೇವೇಗೌಡರ ಪ್ರಾಬಲ್ಯವಿತ್ತು. ಅವರನ್ನು ಹೊರತು ಪಡಿಸಿದರೆ ಎ.ಮಂಜು ಕಾಂಗ್ರೆಸ್ನ ಪ್ರಬಲ ನಾಯಕರಾಗಿದ್ದರು. ಅಲ್ಲಿಯೂ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಎ.ಮಂಜು ತೆಪ್ಪಗಾಗುತ್ತಾರೆ. ಆದ್ದರಿಂದ ಪ್ರಜ್ವಲ್ ರೇವಣ್ಣರನ್ನು ಕಣಕ್ಕಿಳಿಸಿದರೆ ಸುಲಭವಾಗಿ ಗೆಲ್ಲಬಹುದು ಎಂಬುದು ದಳಪತಿಗಳ ಲೆಕ್ಕಾಚಾರವಾಗಿತ್ತು. ಎರಡು ಕ್ಷೇತ್ರಗಳಲ್ಲಿ ಮೊಮ್ಮಕ್ಕಳನ್ನು ಕಣಕ್ಕಿಳಿಸಿದ ದೇವೇಗೌಡರು ತಾವು ತುಮಕೂರಿನತ್ತ ಮುಖ ಮಾಡಿದ್ದರು. ಅವರ ನಿರ್ಧಾರದ ಹಿಂದೆ ಹತ್ತು ಹಲವು ರಾಜಕೀಯ ಲೆಕ್ಕಾಚಾರಗಳಿದ್ದವು.

ಪ್ರಬಲರೇ ಎದುರಾಳಿಗಳಾಗಿದ್ದಾರೆ
ಮೊದಲನೆಯದಾಗಿ ದೇವೇಗೌಡರ ಲೆಕ್ಕಾಚಾರ ಇದ್ದದ್ದು ಹೀಗೆ...ಎರಡು ಕ್ಷೇತ್ರಗಳಲ್ಲಿ ಮೊಮ್ಮಕ್ಕಳನ್ನು ನಿಲ್ಲಿಸಿ ಸುಲಭವಾಗಿ ಗೆಲ್ಲಿಸಿ ಸಂಸತ್ತುಗೆ ಕರೆದುಕೊಂಡು ಹೋಗುವುದು, ಮತ್ತೊಂದು ತಮಗೆ ಸೆಡ್ಡು ಹೊಡೆದು ಕಾಂಗ್ರೆಸ್ ಸೇರಿ ಸಂಸದರಾಗಿ ಮೆರೆದ ಮುದ್ದಹನುಮೇಗೌಡರನ್ನು ರಾಜಕೀಯವಾಗಿ ಮುಗಿಸುವುದು. ಇಲ್ಲಿ ಒಂದಂತು ಆಗಿಯೇ ಹೋಗಿದೆ. ಬೊಬ್ಬಿರಿದು ಅಬ್ಬರಿಸಿದ ಮುದ್ದಹನುಮೇಗೌಡ ಸದ್ದಿಲ್ಲದೆ ಕಣದಿಂದ ಸರಿದು ಮನೆ ಸೇರಿದ್ದಾರೆ. ಅಲ್ಲಿ ಈಗ ದೇವೇಗೌಡರಿಗೆ ಹಾದಿ ಸುಗಮವಾಗಿದೆ. ಆದರೆ ಅವರು ಅಂದುಕೊಂಡಂತೆ ಮಂಡ್ಯ ಮತ್ತು ಹಾಸನದಲ್ಲಿ ಮಾತ್ರ ನಡೆಯಲೇ ಇಲ್ಲ. ಇದೆರಡು ಕ್ಷೇತ್ರಗಳಲ್ಲಿ ಪ್ರಬಲರೇ ಎದುರಾಳಿಗಳಾಗಿದ್ದಾರೆ. ಇದು ನುಂಗಲಾರದ ತುತ್ತಾಗಿ ಪರಿಣಮಿಸತೊಡಗಿದ್ದು, ಗೆಲುವಿಗಾಗಿ ಏನೆಲ್ಲ ತಂತ್ರ ಮಾಡಬಹುದೋ ಅದನ್ನೆಲ್ಲ ಮಾಡುತ್ತಿದ್ದಾರೆ.

ದೇವೇಗೌಡರ ರಣತಂತ್ರ ಹೇಗಿರಬಹುದು?
ಕುಮಾರಸ್ವಾಮಿ ಮಂಡ್ಯ, ರೇವಣ್ಣ ಹಾಸನದಲ್ಲಿ ಬೀಡು ಬಿಟ್ಟಿದ್ದಾರೆ. ಅವರಿಬ್ಬರೂ ತಮ್ಮ ಪುತ್ರರನ್ನು ಗೆಲ್ಲಿಸುವ ಹಠಕ್ಕೆ ಬಿದ್ದಿರುವುದರಿಂದ ಇತರೆ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂಬುದನ್ನೇ ಮರೆತು ಬಿಟ್ಟಿದ್ದಾರೆ. ಇನ್ನೊಂದು ಪ್ರಮುಖವಾದ ಶಾಕ್ ಏನೆಂದರೆ ಎರಡು ಕ್ಷೇತ್ರಗಳಲ್ಲಿಯೂ ತಳ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ವಿರುದ್ಧವಾಗಿಯೇ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನು ಗಮನಿಸುತ್ತಿರುವ ದೇವೇಗೌಡರು ಮುಂದೆ ತಮ್ಮ ಮತ್ತು ಮೊಮ್ಮಕ್ಕಳ ಗೆಲುವಿಗೆ ಏನು ಮಾಡಬಹುದು? ಅವರ ರಣತಂತ್ರ ಹೇಗಿರಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications