ಮಂಡ್ಯದಲ್ಲಿ ಜೆಡಿಎಸ್ ಮುಳುಗಿಸಲು ಡಿಕೆ ಬ್ರದರ್ಸ್ ಪ್ಲ್ಯಾನ್: ಶಾಸಕರು, ಮಾಜಿ ಸಚಿವರಿಗೆ ಗಾಳ
ಲೋಕಸಭಾ ಚುನಾವಣೆ ರಣಕಣ ರಂಗೇರಿದೆ. ಕರ್ನಾಟಕದಲ್ಲಿ ಹಲವು ಕಾರಣದಿಂದ ಮಂಡ್ಯ ಲೋಕಸಭಾ ಕ್ಷೇತ್ರ ಭಾರಿ ಕುತೂಹಲ ಕೆರಳಿಸಿದೆ. ಬಿಜೆಪಿಯಿಂದ ಟಿಕೆಟ್ ಪಡೆಯಲು ಹಾಲಿ ಸಂಸದೆ ಸುಮಲತಾ ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದರೆ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಮಂಡ್ಯ ಕ್ಷೇತ್ರಕ್ಕಾಗಿ ಬಿಗಿ ಪಟ್ಟು ಹಿಡಿದಿದೆ.
ಬಿಜೆಪಿ ಜೆಡಿಎಸ್ ಕ್ಷೇತ್ರ ಹಂಚಿಕೆ ಬಗ್ಗೆ ಮಾತುಕತೆ ನಡೆಸುತ್ತಿರುವಾಗಲೇ ಕಾಂಗ್ರೆಸ್ ಮಂಡ್ಯದಲ್ಲಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದ್ದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ನಿಂದ ವೆಂಕಟರಮಣ ಗೌಡ (ಸ್ಟಾರ್ ಚಂದ್ರು) ಟಿಕೆಟ್ ಪಡೆದುಕೊಂಡಿದ್ದಾರೆ.

ಜೆಡಿಎಸ್ ಮುಗಿಸಲು ಡಿಕೆ ಬ್ರದರ್ಸ್ ಪ್ಲಾನ್
ವರದಿಗಳ ಪ್ರಕಾರ ಜೆಡಿಎಸ್ ಅಭ್ಯರ್ಥಿ ಮಂಡ್ಯದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು, ಈಗ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ಹಣಿಯಲು ಡಿಕೆ ಸಹೋದರರು ಕಣಕ್ಕಿಳಿದಿದ್ದಾರೆ.
ಅಭ್ಯರ್ಥಿ ಘೋಷಣೆ ಮುನ್ನವೇ ಜೆಡಿಎಸ್ ಶಕ್ತಿ ಕಡಿಮೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಜೆಡಿಎಸ್ ಮಾಜಿ ಶಾಸಕರು, ಹಾಲಿ ಶಾಸಕರನ್ನೇ ಕಾಂಗ್ರೆಸ್ಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಮಾಜಿ ಶಾಸಕರು, ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಗುರುವಾರ ಜೆಡಿಎಸ್ ನಾಯಕ ನಾಲ್ಕು ಬಾರಿ ಎಂಎಲ್ಸಿಯಾಗಿದ್ದ ಮರಿತಿಬ್ಬೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಅವರ ಅಪಾರ ಬೆಂಬಲಿಗರು ಕೂಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಪಕ್ಷ ಸೇರಿದ ಬಳಿಕ ಮಾತನಾಡಿರುವ ಮರಿತಿಬ್ಬೇಗೌಡ, ಕುಟುಂಬ ಆಧಾರಿತ ರಾಜಕಾರಣ ಮತ್ತು ಪಕ್ಷದಲ್ಲಿನ ಸಂವಹನ ಕೊರತೆಯನ್ನು ವಿರೋಧಿಸಿ ಜೆಡಿಎಸ್ ತೊರೆದಿರುವುದಾಗಿ ಹೇಳಿದರು. ಹಾಸನ, ಮಂಡ್ಯ, ಚಾಮರಾಜನಗರ, ಮೈಸೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಇವರ ಜೊತೆಗೆ ಮಾಜಿ ಶಾಸಕ ಅಪ್ಪಾಜಿ ಗೌಡ ಮತ್ತು ಮಂಡ್ಯ ಜಿಲ್ಲೆಯ ಹಲವು ಮುಖಂಡರು ಕೂಡ ಜೆಡಿಎಸ್ಗೆ ಗುಡ್ಬೈ ಹೇಳಿದ್ದು ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಬಿಜೆಪಿ ಶಾಸಕ, ಮಾಜಿ ಸಚಿವ ನಾರಾಯಣಗೌಡ ಕೂಡ ಕಾಂಗ್ರೆಸ್ ಸೇರುವ ಸೂಚನೆ ಇದ್ದು, ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಕುಂದಿಸಲು ಕೂಡ ಡಿಕೆ ಬ್ರದರ್ಸ್ ಮುಂದಾಗಿದ್ದಾರೆ. ಜೆಡಿಎಸ್-ಬಿಜೆಪಿ ಜೊತೆಯಾಗಿದ್ದರು, ಮಂಡ್ಯ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿರುವ ಕಾಂಗ್ರೆಸ್ ನಾಯಕರು ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ.
ಬಿಜೆಪಿ ಜೊತೆ ಸಖ್ಯವೇ ಜೆಡಿಎಸ್ಗೆ ಮುಳುವಾಯ್ತಾ?
ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇ ಪಕ್ಷಕ್ಕೆ ಮುಳುವಾಯ್ತಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಹೆಚ್.ಡಿ. ಕುಮಾರಸ್ವಾಮಿ ಬಹಿರಂಗವಾಗಿಯೇ ಬಿಜೆಪಿ ನಾಯಕರನ್ನು ಟೀಕಿಸುತ್ತಿದ್ದರೆ, ಈಗ ಅವರೇ ಬಿಜೆಪಿ ಜೊತೆ ಸೇರಿರುವುದು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು, ನಾಯಕರಿಗೆ ಇರಿಸು ಮುರಿಸು ಉಂಟುಮಾಡಿದೆ.












Click it and Unblock the Notifications