ನಾಗಮಂಗಲದ ಜಂಟಿ ಸಮಾವೇಶದಲ್ಲಿ ಚೆಲುವಣ್ಣ ಗೈರು: ಗೌಡ್ರು ಹೇಳಿದ್ದೇನು?
Recommended Video
ಮಂಡ್ಯ, ಏ 12: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚಿಸಲು ದೇವೇಗೌಡ್ರು ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶುಕ್ರವಾರ, ನಾಗಮಂಗಲದಲ್ಲಿ ನಡೆದ ಜಂಟಿ ಸಮಾವೇಶದಲ್ಲಿ ಕಾಂಗ್ರೆಸ್ಸಿನ ಬಹುತೇಕ ಎಲ್ಲಾ ಮುಖಂಡರು ಹಾಜರಿದ್ದರು. ಆದರೆ, ಒಂದು ಕಾಲದಲ್ಲಿ ಕುಮಾರಸ್ವಾಮಿಯವರ ಗಳಸ್ಯ ಕಂಠಸ್ಯ, ಈಗಿನ ಕಟ್ಟಾ ವಿರೋಧಿ, ಚೆಲುವರಾಯಸ್ವಾಮಿ ಮಾತ್ರ ಸಮಾವೇಶದಿಂದ ದೂರ ಉಳಿದಿದ್ದರು.
ಮಂಡ್ಯದಲ್ಲಿ ಚೆಲುರಾಯಸ್ವಾಮಿ ಆಟ, ದಳಪತಿಗಳಿಗೆ ಸಂಕಟ...
ಈ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ ದೇವೇಗೌಡ್ರು, ಕಾಂಗ್ರೆಸ್ಸಿನ ಎಲ್ಲಾ ಪ್ರಮುಖ ಮುಖಂಡರು ಇಂದಿನ ಸಭೆಗೆ ಹಾಜರಾಗಿದ್ದಾರೆ, ಆದರೆ ಒಬ್ಬ ಪ್ರಮುಖ ಮುಖಂಡರು ಮಾತ್ರ ಬರಲಿಲ್ಲ. ನಾನು ಅವರ ಬಗ್ಗೆ ಏನನ್ನೂ ಹೇಳುವುದಿಲ್ಲ, ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಾರೆ ಎಂದು ಚೆಲುವರಾಯಸ್ವಾಮಿಯವರ ಹೆಸರನ್ನು ಉಲ್ಲೇಖಿಸಿದೇ ಗೌಡ್ರು ಟಾಂಗ್ ನೀಡಿದ್ದಾರೆ.
ವೇದಿಕೆಯಲ್ಲಿ ಉಪಸ್ಥಿತರಿದ್ದ ಒಬ್ಬೊಬ್ಬ ಕಾಂಗ್ರೆಸ್ ಮುಖಂಡರ ಹೆಸರನ್ನು ದೇವೇಗೌಡರು ಓದಿ, ಒಬ್ಬರು ಮಾತ್ರ ಬಂದಿಲ್ಲ ಎಂದರು. ಚೆಲುವರಾಯಸ್ವಾಮಿ, ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಕಾಣಿಸಿಕೊಂಡವರು ಎನ್ನುವುದು ಗಮನಿಸಬೇಕಾದ ವಿಚಾರ.
ಸಮಾವೇಶದಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ, ನನ್ನ ಹೆಸರು ಹೇಳಿಕೊಂಡು ಯಾರಾದರೂ ಮಂಡ್ಯದ ಪಕ್ಷೇತರ ಅಭ್ಯರ್ಥಿ ಪರವಾಗಿ ಮತಯಾಚಿಸಿದರೆ ಅಂತವರಿಗೆ ಮಂಗಳಾರತಿ ಮಾಡಿ ವೇದಿಕೆಯಿಂದಲೇ ಫರ್ಮಾನು ಹೊರಡಿಸಿದ್ದಾರೆ.
ಸಿದ್ದರಾಮಯ್ಯ-ಎಚ್ಡಿಕೆ ಇಬ್ಬರಿಗೂ ಟಾಂಗ್ ನೀಡಿದ ಚೆಲುವರಾಯಸ್ವಾಮಿ
ನಾನು ಜಾತ್ಯಾತೀತ ಸಿದ್ದಾಂತವನ್ನು ಪಾಲಿಸಿಕೊಂಡು ಬಂದವನು, ಕೋಮುವಾದಿ ಪಕ್ಷವನ್ನು ಬೆಂಬಲಿಸಿ ಎಂದು ಕನಸು ಮನಸಿನಲ್ಲೂ ಹೇಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜಂಟಿ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ, ಆದರೆ ರಾಹುಲ್ ಗಾಂಧಿಯವರ ಸಾರ್ವಜನಿಕ ಸಭೆಯಲ್ಲಿ (ಕೆ ಆರ್ ನಗರದಲ್ಲಿ, ಏ 13) ಭಾಗವಹಿಸುತ್ತೇನೆ ಎಂದು ಚೆಲುವರಾಯಸ್ವಾಮಿ ಈಗಾಗಲೇ ಹೇಳಿದ್ದಾರೆ.